Last Updated:
ಮಂಜಬೈದ್ಯ ಅವರು ವಿಶೇಷವಾದ ವ್ಯಕ್ತಿಯಾಗಿದ್ದು, ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ವ್ಯಕ್ತಿಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.
ದಕ್ಷಿಣ ಕನ್ನಡ: ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ 25 ವರ್ಷಗಳಿಗೂ ಹಿಂದೆ ದಕ್ಷಿಣ ಕನ್ನಡದಲ್ಲಿ(Dakshina Kannada District) ನಡೆದ ರೈತ ಬಂಡಾಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಉಪ್ಪಿನಂಗಡಿಯ ಮಂಜಬೈದ್ಯ(Manjabaidya) ಅವರ ಹೆಸರನ್ನು ಶಾಶ್ವತವಾಗಿ ನೆನಪಿನಲ್ಲಿರಿಸುವ ಕುರಿತು ಉಪ್ಪಿನಂಗಡಿ ವೃತ್ತದಲ್ಲಿ ಪ್ರತಿಮೆ ಮತ್ತು ರಸ್ತೆಗೆ ಮಂಜಬೈದ್ಯ ಅವರ ಹೆಸರನ್ನು ನಾಮಕರಣ ಮಾಡುವ ಯೋಜನೆಯೊಂದು(Plan) ಸಿದ್ಧಗೊಂಡಿದೆ. ಇದರ ಜೊತೆಯಲ್ಲೇ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲೂ ಮಂಜಬೈದ್ಯನ ಪ್ರತಿಮೆ ಅನಾವರಣ ಮಾಡುವ ಉದ್ಧೇಶವೂ ಈ ಯೋಜನೆಯಲ್ಲಿ ಅಡಕವಾಗಿದೆ.
ಮಂಜಬೈದ್ಯ ಅವರು ವಿಶೇಷವಾದ ವ್ಯಕ್ತಿಯಾಗಿದ್ದು, ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ವ್ಯಕ್ತಿಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ಕೃಷಿ ಫಲವಸ್ತು ಮೂಲಕ ಖಜಾನೆ ತುಂಬಿಸುತ್ತಿದ್ದ ಬ್ರಿಟಿಷರು ಬಳಿಕ ಅವರು ಹಣದ ರೂಪದಲ್ಲಿ ಖಜಾನೆ ತುಂಬಿಸುವ ಕಾನೂನು ಜಾರಿಗೆ ತಂದಾಗ ಉಪ್ಪಿನಂಗಡಿಯ ಬಿಲ್ಲವ ಸಮಾಜದ ಮಂಜಬೈದ್ಯ ಅವರು ಇದರ ವಿರುದ್ಧ ಹೋರಾಟವನ್ನು ಆರಂಭಿಸಿದ್ದರು. ಬ್ರಿಟಿಷರ ಉಪ್ಪಿನಂಗಡಿ ಖಜಾನೆಯಲ್ಲೇ ಗುಮಾಸ್ತನಾಗಿ ಕೆಲಸ ಮಾಡಿಕೊಂಡು ಇಂಗ್ಲೀಷ್ ಬಲ್ಲವರಾಗಿದ್ದರು ಮಂಜಬೈದ್ಯರು.
ಇದೇ ಸಮಯದಲ್ಲಿ ಕೊಡಗಿನ ಪಾಳೆಗಾರ ಕಲ್ಯಾಣಪ್ಪನನ್ನು ಮುಂದಿಟ್ಟುಕೊಂಡು ದಂಗೆಯೊಂದು ಆರಂಭಗೊಂಡಿತ್ತು. ಈ ಹೋರಾಟಕ್ಕೆ ಅಮರ ಸುಳ್ಯ ದಂಗೆ ಎಂದೂ, ಕಲ್ಯಾಣಪ್ಪನ ಕಾಟುಕಾಯಿ ಎಂದೂ ಕರೆಯಲಾಗುತ್ತಿತ್ತು. ಜಿಲ್ಲೆಯ ನೂರಾರು ಮಂದಿ ಯೋಧರಾಗಿ ಇದರಲ್ಲಿ ಪಾಲ್ಗೊಂಡಿದ್ದರು. ಪುತ್ತೂರಿಗೆ ಕಲ್ಯಾಣಪ್ಪನ ಸೈನ್ಯ ಬಂದ ಸುದ್ದಿ ಕೇಳಿ ಉಪ್ಪಿನಂಗಡಿ ತಾಲೂಕು ಕಚೇರಿಯಲ್ಲಿದ್ದವರನ್ನೆಲ್ಲ ಬಂಧಿಸಿ ಖಜಾನೆಯ ಬೀಗ ಒಡೆದು ಅಲ್ಲಿದ್ದ ಸೊತ್ತನ್ನು ಪುತ್ತೂರಿಗೆ ತಂದು ಕಲ್ಯಾಣಪ್ಪನಿಗೆ ಒಪ್ಪಿಸಿ ಸೈನ್ಯಕ್ಕೆ ಸೇರಿದವರು ಮಂಜಬೈದ್ಯ. ಕಲ್ಯಾಣಪ್ಪ ಅವರು ಇಂಗ್ಲೀಷ್ ಬಲ್ಲವನಾದ ಮಂಜಬೈದ್ಯನನ್ನು ಉಪದಂಡನಾಯಕನನ್ನಾಗಿ ನೇಮಿಸಿದರು. ಅಲ್ಲಿಂದ ಕಲ್ಯಾಣಪ್ಪ ದಂಡನಾಯಕರೊಂದಿಗೆ ಮಂಜಬೈದ್ಯ ಮತ್ತು ರಾಮಗೌಡರು ಜೊತೆಯಾಗಿ ಈ ಹೋರಾಟ ಮುಂದುವರೆದಿತ್ತು.
1837 ರ ಏಪ್ರಿಲ್ 5 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿದ ಕ್ರಾಂತಿವೀರರು ಅಲ್ಲಿ ಬ್ರಿಟಿಷ್ ಧ್ವಜ ಇಳಿಸಿ ಕ್ರಾಂತಿಕಾರಿ ಧ್ವಜ ಹಾರಿಸಿದರು. ಹದಿಮೂರು ದಿನಗಳ ಕಾಲ ದಕ್ಷಿಣ ಕನ್ನಡ ಬ್ರಿಟಿಷ್ ಮುಕ್ತವಾಗಿತ್ತು. ಮುಂದೆ ಈ ಕೆನರಾ ದಂಗೆಯನ್ನು ಬ್ರಿಟಿಷ್ ಸೈನ್ಯ ಹತ್ತಿಕ್ಕಿತು. ಈ ಸಂದರ್ಭದಲ್ಲಿ ಬಂಧಿಸಲ್ಪಟ್ಟ ಹೋರಾಟಗಾರರಲ್ಲಿ ಉಪ್ಪಿನಂಗಡಿಯ ಮಂಜ ಬೈದ್ಯನೂ ಒಬ್ಬನಾಗಿದ್ದು, ಬ್ರಿಟಿಷ್ ಆಡಳಿತ ಕೋರ್ಟ್ ಮಾರ್ಷಲ್ ನಡೆಸಿ, ಉಪ್ಪಿನಂಗಡಿ ಮಂಜಬೈದ್ಯ, ಅಪ್ಪಯ್ಯ ಗೌಡ, ಕಲ್ಯಾಣಸ್ವಾಮಿ, ಪುಟ್ಟಬಸಪ್ಪ, ನಂದಾವರ ಲಕ್ಷ್ಮಪ್ಪ, ಬಂಗರಸರಿಗೆ ಗಲ್ಲು ಶಿಕ್ಷೆ ವಿಧಿಸಿತು. 1837ರ ಮೇ 27 ರಂದು ಮಂಗಳೂರಿನಲ್ಲಿ ಉಪ್ಪಿನಂಗಡಿ ಮಂಜಬೈದ್ಯನನ್ನು ಬಹಿರಂಗವಾಗಿ ಗಲ್ಲಿಗೇರಿಸಲಾಯಿತು.
ಆ ಶವ ಗಲ್ಲುಗಂಬದಲ್ಲೇ ಕೊಳೆತು ಬೀಳುವಂತೆ ಮಾಡಿದ್ದರು. ಇವತ್ತಿಗೆ ಅವರು ಗಲ್ಲಿಗೇರಿ 188 ವರ್ಷಗಳಾಗಿದ್ದು, ಈ ಹಿನ್ನಲೆಯಲ್ಲಿ ಈ ಯೋಜನೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಆರಂಭಿಸಲಾಗಿದೆ.
Dakshina Kannada,Karnataka
May 30, 2025 12:00 PM IST