Last Updated:
Sourav Ganguly on Pahalgam terror attack: ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಶೇಕಡಾ 100 ರಷ್ಟು ಮುರಿಯಬೇಕು ಎಂದು ಆಗ್ರಹಿಸಿದ ಸೌರವ್ ಗಂಗೂಲಿ, ಉಗ್ರರ ವಿರುದ್ಧ ಕಠಿಣ ಕ್ರಮ ಅಗತ್ಯ. ಪ್ರತಿ ವರ್ಷ ಇಂತಹ ಘಟನೆಗಳು ನಡೆಯುವುದು ತಮಾಷೆಯಲ್ಲ ಎಂದು ಹೇಳಿದ್ದಾರೆ.
ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Terror Attack) ನಡೆದ ಮತಾಂಧರು ನಡೆಸಿದ ಭಯೋತ್ಪಾದಕ ದಾಳಿಗೆ ಇಡೀ ಭಾರತ ಬೆಚ್ಚಿಬಿದ್ದಿದೆ. ಉಗ್ರರ ಬೇರನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಸಮಸ್ತ ಭಾರತೀಯರು ಅವುಡುಗಚ್ಚಿ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ಭಾರತ ಮಾತ್ರವಲ್ಲದೇ ವಿದೇಶಗಳಿಂದಲೂ ಉಗ್ರರ ದುಷ್ಕೃತ್ಯದ ವಿರುದ್ಧ ಖಂಡನೆ ವ್ಯಕ್ತವಾಗ್ತಿದೆ. ಉಗ್ರರನ್ನು ಪೋಷಿಸುವ ಪಾಕಿಸ್ತಾನದ ವಿರುದ್ಧ ಭಾರತ ಸರ್ಕಾರ ರಾಜತಾಂತ್ರಿಕ ಯುದ್ಧವನ್ನೂ ಸಾರಿದೆ. ಈತನ್ಮಧ್ಯೆ ಭಾರತ ಕ್ರಿಕೆಟ್ ತಂಡದ ಮಾಜಿ ಕಫ್ತಾನ, ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಅವರು ಭಾರತವು ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಗತ್ತನ್ನೇ ಬೆಚ್ಚಿಬೀಳಿಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕ್ರಿಕೆಟ್ ದಿಗ್ಗಜ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದು, ಭಾರತವು ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಬೇಕು, ಏಕೆಂದರೆ ಇದು ತಮಾಷೆಯಲ್ಲ ಮತ್ತು ಇದರ ಹಿಂದಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಭಾರತದ ನೆಲದಲ್ಲಿ ನಡೆಯುತ್ತಿರುವ ಇಂತಹ ದಾಳಿಗಳ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ ಅವರರು, ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಹೇಳಿದರು.
‘ಶೇಕಡಾ 100 ರಷ್ಟು, ಇದನ್ನು (ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಮುರಿಯುವುದು) ಮಾಡಬೇಕು ಎಂದ ಗಂಗೂಲಿ, ಉಗ್ರರ ವಿರುದ್ಧ ಕಠಿಣ ಕ್ರಮ ಅಗತ್ಯ. ಪ್ರತಿ ವರ್ಷ ಇಂತಹ ಘಟನೆಗಳು ನಡೆಯುವುದು ತಮಾಷೆಯಲ್ಲ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಗಂಗೂಲಿ ಪಶ್ಚಿಮ ಬಂಗಾಳದಲ್ಲಿ ANI ಜೊತೆ ಮಾತನಾಡಿ ಹೇಳಿದರು.
ಏಪ್ರಿಲ್ 22 ರಂದು, ಭಾರತದ ‘ಮಿನಿ ಸ್ವಿಟ್ಜರ್ಲೆಂಡ್’ ನಲ್ಲಿ ಇಸ್ಲಾಮಿಕ್ ಮತಾಂಧರು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 27 ಅಮಾಯಕರು ಸಾವನ್ನಪ್ಪಿದ್ದರು. ಅವರೆಲ್ಲರೂ ಭಾರತ ಮತ್ತು ಪ್ರಪಂಚದ ಇತರ ಭಾಗಗಳಿಂದ ಬಂದ ಪ್ರವಾಸಿಗರಾಗಿದ್ದರು. ಆರು ವರ್ಷಗಳ ಹಿಂದೆ ಪುಲ್ವಾಮಾ ಬಾಂಬ್ ದಾಳಿಯ ನಂತರ ದೇಶದ ನೆಲದಲ್ಲಿ ನಡೆದ ಅತ್ಯಂತ ಭೀಕರ ಅಪರಾಧ ಇದಾಗಿದೆ.
ಕೇಂದ್ರ ಸರ್ಕಾರವು ಉಗ್ರರ ದುಷ್ಕೃತ್ಯದ ವಿರುದ್ಧ ಕಠಿಣ ಧೋರಣೆ ಅನುಸರಿಸಿ, ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು, ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕೆ ಇಳಿಸಿತು, ಇಸ್ಲಾಮಾಬಾದ್ನಿಂದ ಭಾರತೀಯ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿ ಅಟ್ಟಾರಿ ಗಡಿ ಕಾರ್ಯಾಚರಣೆಯನ್ನು ಮುಚ್ಚಿದೆ.
ಈ ಘಟನೆ ನಡೆದ ಮರುದಿನ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಈ ದಾಳಿಯ ಹಿಂದಿರುವ ಪ್ರತಿಯೊಂದು ಭಯೋತ್ಪಾದಕರನ್ನೂ ಕೂಡ ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂದು ಇಂಗ್ಲೀಷ್ನಲ್ಲೇ ಅಬ್ಬರಿಸಿದ್ದರು. ಮತ್ತೊಂದೆಡೆ ಸರ್ವಪಕ್ಷ ಸಭೆಯಲ್ಲಿ ಎಲ್ಲಾ ವಿಪಕ್ಷಗಳು ಕೂಡ ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದು, ಕೇಂದ್ರ ಕೂಡ ಭದ್ರತಾ ವೈಫಲ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
Kolkata,West Bengal
April 26, 2025 8:12 AM IST