Last Updated:
ದಕ್ಷಿಣ ಕನ್ನಡ: ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಜಗದ್ಗುರು ಪೀಠದ ಪೀಠಾಧೀಶರಾದ ಸ್ವಾಮಿ ಬ್ರಹ್ಮಾನಂದ ಸರಸ್ವತಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶಾಖಾ ಮಠ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಮೇ 19 ರಂದು ನಡೆಯಿತು.
ದಕ್ಷಿಣ ಕನ್ನಡ: ವಿಶ್ವದ ಕೋಟ್ಯಾಂತರ ಭಕ್ತರ ಶ್ರದ್ದಾಕೇಂದ್ರ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಅತಿ ಸುಂದರವಾದ ದೇಗುಲ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿರುವುದು ಇಡೀ ಜಗತ್ತಿಗೆ ಸಂತೋಷವನ್ನುಂಟುಮಾಡಿದೆ. ಇಂತಹ ಪುಣ್ಯಕ್ಷೇತ್ರದ ಪಕ್ಕದಲ್ಲಿ ದಕ್ಷಿಣದ ಅಯೋಧ್ಯೆಯೆಂದು ಖ್ಯಾತಿ ಹೊಂದಿದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ನ ಶಾಖಾ ಮಠಕ್ಕೆ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಭೂಮಿ ಪೂಜೆ ಹಾಗೂ ಶಿಲಾನ್ಯಾಸವು ಮೇ 19 ರಂದು ನಡೆದಿದೆ.
ಸುಮಾರು ರೂ 15 ಕೋಟಿ ವೆಚ್ಚದಲ್ಲಿ, 35 ಸಾವಿರ ಚದರಡಿಯಲ್ಲಿ 4 ಅಂತಸ್ತಿನ ಭವನ ನಿರ್ಮಾಣ. ಶಾಖಾ ಮಠದಲ್ಲಿ ಸತ್ಸಂಗ ಹಾಲ್, ಮೀಟಿಂಗ್ ಹಾಲ್, ಸ್ವಾಮೀಜಿಯ ಕೊಠಡಿ, ಡೈನಿಂಗ್, ಕಿಚನ್, ವಿವಿಐಪಿ, ವಿಐಪಿ ರೂಮ್, ಲಿಪ್ಟ್ ಸೌಲಭ್ಯ, ಮಲ್ಟಿ ಪರ್ಪಸ್ ಹಾಲ್ ನಿರ್ಮಾಣವಾಗಲಿದೆ. ಭೂಮಿ ಪೂಜೆಯಲ್ಲಿ ಅನೇಕ ವಿಭೂತಿ ಪುರುಷರು, ರಾಷ್ಟ್ರ ಮಟ್ಟದ, ರಾಜ್ಯಮಟ್ಟದ ನೇತಾರರು ಭಾಗವಹಿಸಿದರು.
ಭಾಗವಹಿಸುವ ಪ್ರಧಾನ ವಿಭೂತಿ ಪುರುಷರಾದ ಆಚಾರ್ಯ ಮಾಹಾಮಂಡಲೇಶ್ವರ 1008 ಅವದೇಶಾನಂದ ಗಿರಿಜೀ ಮಹಾರಾಜ್ ಪಂಚದಶನಾಮ್ ಜುಣಾ ಅಖಾಡ, ಮಹಂತ್ ವಿದ್ಯಾನಂದ ಸರಸ್ವತಿಜೀ ಮಹಾರಾಜ್ ಅಂತರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಪಂಚದಶನಾಮ್ ಜುನಾ ಅಖಾಡ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.
ಶ್ರೀ ರಾಮನ ಆರಾಧನೆಯ ಕ್ಷೇತ್ರವಾಗಿರುವ ಕನ್ಯಾಡಿಯ ಶ್ರೀ ರಾಮ ಕ್ಷೇತ್ರವನ್ನು ಭವ್ಯವಾಗಿ ನಿರ್ಮಿಸಿದ ಬಳಿಕ ಇದೀಗ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲೇ ಕ್ಷೇತ್ರದ ಶಾಖಾ ಮಠವನ್ನು ನಿರ್ಮಿಸಲು ಮಠಾಧಿಪತಿಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮಿ ನಿರ್ಧರಿಸಿದ ಹಿನ್ನಲೆಯಲ್ಲಿ ಈ ವ್ಯವಸ್ಥೆಗೆ ಚಾಲನೆಯನ್ನು ನೀಡಲಾಗಿದೆ. ಕರ್ನಾಟಕ ಹಾಗೂ ದೇಶದ ಇತರ ಭಾಗಗಳ ಮಠದ ಭಕ್ತರಿಗೆ ಅಯೋಧ್ಯೆಯಲ್ಲಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವ ಉದ್ಧೇಶವೂ ಈ ಶಾಖಾ ಮಠದ ಮುಂದಿದೆ.
Dakshina Kannada,Karnataka