ಹೌದು.. ಮಂಗಳೂರಿನ ಮಣ್ಣಗುಡ್ಡದಿಂದ ಬೊಕ್ಕಪಟ್ಣ ಕಡೆಗೆ ಸಾಗುವ ದಾರಿಯಲ್ಲಿದೆ ಈ ಮನೆ. ರಘುನಾಥ ಪ್ರಭು ಪಾಣೆ ಮಂಗಳೂರು ಈ ವಸ್ತುಸಂಗ್ರಹಾಲಯದ ರೂವಾರಿ. ಇವರು ನಿವೃತ್ತ ಬ್ಯಾಂಕ್ ನೌಕರ. ಹಳೆಯ ಅಪೂರ್ವ ವಸ್ತುಗಳು ಇವರಲ್ಲಿದೆ. ಅವರ ತಂದೆಗೆ ನಾಣ್ಯ ಸಂಗ್ರಹ ಹಾಗೂ ಅಂಚೆಚೀಟಿ ಸಂಗ್ರಹಿಸುವ ಹವ್ಯಾಸವಿತ್ತು. ಇದರಿಂದ ಪ್ರೇರಿತರಾಗಿ ರಘುನಾಥ ಪ್ರಭು ಅವರೂ ಈ ಹ್ಯಾಸ ರೂಢಿಸಿಕೊಂಡರಂತೆ.
ನೂರಾರು ವರ್ಷಗಳ ಹಳೆಯದಾದ ವಸ್ತುಗಳು ಇವರ ಸಂಗ್ರಹಲ್ಲಿದೆ. ಮಣ್ಣು, ಕಲ್ಲು, ಮರ, ಕಂಚು, ಹಿತ್ತಾಳೆ, ತಾಮ್ರ, ಕಬ್ಬಿಣ, ಬೆಳ್ಳಿ, ಗಾಜು, ಪಿಂಗಾಣಿಯಿಂದ ಮಾಡಿರುವ ವಿವಿಧ ವಸ್ತು ಪರಿಕರಗಳಿವೆ. ಅಲ್ಲದೆ ಇವರಲ್ಲಿ ಹಳೆಯ ಅಂಚೆಚೀಟಿಗಳು, ನಾಣ್ಯಗಳು, ನೋಟುಗಳು, ಬೆಂಕಿಪೊಟ್ಟಣ, ಕೀಚೈನ್, ಹಳೆಯ ವೃತ್ತಪತ್ರಿಕೆಗಳು, ಎಲ್ಲೂ ಇಲ್ಲದ ಸ್ಮರಣ ಸಂಚಿಕೆ ಪುಸ್ತಕಗಳು ಇವರ ಸಂಗ್ರಹದಲ್ಲಿದೆ. ಜೊತೆಗೆ ಹಳೆಯ ಟೇಪ್ರೆಕಾರ್ಡರ್, ಗ್ರಾಮಫೋನ್, ಲ್ಯಾಂಡ್ಲೈನ್ ವೈವಿಧ್ಯಮಯ ಸಂಗ್ರಹವೇ ಇವರಲ್ಲಿದೆ.
ಬಾವಿಯ ರಾಟೆ, ಏತ, ಉಪ್ಪು ಹಾಕುವ ಮರಾಯಿ, ಒತ್ತು ಶ್ಯಾವಿಗೆ ಮಣೆಗಳು, ಪೀಕದಾನಿ, ಪಿಂಗಾಣಿ ಭರಣಿಗಳು, ಇಡ್ಲಿ ಹಬೆ ಪಾತ್ರೆ, ಹಿತ್ತಾಳೆ-ಕಂಚಿನ ದಿನಬಳಕೆಯ ಪಾತ್ರೆಗಳು, ಚೆನ್ನೆಮಣೆ, ಅಡಿಕೆ ಕತ್ತರಿಗಳು, ಮಗುವಿಗೆ ಹಾಲುಣಿಸುವ ಗಾಜಿನ ಬಾಟಲಿ, ಲ್ಯಾಂಪ್ಗಳು, ಪೂಜಾ ಪರಿಕರಗಳು, ಮಣ್ಣಿನ ಪಾತ್ರೆಗಳು, ಬುತ್ತಿಗಳು, ಸಂಧ್ಯಾವಂದನೆ ಪೆಟ್ಟಿಗೆ ಹೀಗೆ ಸುಮಾರು ನೂರು ವರ್ಷಗಳಷ್ಟು ಹಿಂದಿನ ಪರಿಕರಗಳು ಇವರ ಮನೆಯಲ್ಲಿದೆ.
ಮನೆಯಲ್ಲಿ ದೈನಂದಿನ ಉಪಯೋಗದ ಪಾರಂಪರಿಕ ವಸ್ತುಗಳನ್ನು ರಘುನಾಥ ಪ್ರಭು ತಮ್ಮ ಹಾಗೂ ತಮ್ಮ ಪತ್ನಿಯ ಮನೆಯಿಂದಲೇ ಸಂಗ್ರಹಿಸಲು ಆರಂಭಿಸಿದ್ದಾರೆ. ಇವರ ಸಂಗ್ರಹವನ್ನು ಗಮನಿಸಿದ ನೆರೆಹೊರೆಯವರು, ಸ್ನೇಹಿತರೂ ಕೆಲವೊಂದು ಪಾರಂಪರಿಕ ಪರಿಕರಗಳನ್ನು ನೀಡಲು ಆರಂಭಿಸಿದ್ದಾರೆ. ಕೆಲವೊಂದನ್ನು ಇವರೇ ಹೋಗಿ ಸಂಗ್ರಹಿಸಿದ್ದೂ ಇದೆ. ಹೀಗೆ ಇವರ ಮನೆಯೇ ಪಾರಂಪರಿಕ ವಸ್ತು ಸಂಗ್ರಹಾಲಯವಾಗಿದೆ.
Dakshina Kannada,Karnataka
May 06, 2025 10:57 AM IST