Last Updated:
ಕೊರೊನಾ ಸಮಯವೊಂದನ್ನು ಬಿಟ್ಟರೆ ಇಲ್ಲಿ ವಿಷ್ಣುಮೂರ್ತಿ ದೈವಕ್ಕೆ ಒತ್ತೆಕೋಲ ನಡೆಯದ ವರ್ಷಗಳಿಲ್ಲ. ನಂಬಿಕೆಯ ಪ್ರಕಾರ ಇಲ್ಲಿ ದೈವಕ್ಕೆ ಒತ್ತೆಕೋಲ ಸೇವೆ ನಡೆಯದ ವರ್ಷಗಳಿಲ್ಲ.
ದಕ್ಷಿಣ ಕನ್ನಡ: ಕೇರಳದ ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಕೇರಳದ ಗಡಿಭಾಗದಲ್ಲಿ ಆಚರಣೆಯಲ್ಲಿರುವ ದೈವಾರಾಧನೆಯಲ್ಲಿ ವಿಷ್ಣುಮೂರ್ತಿ ದೈವವನ್ನು ಈ ಭಾಗದ ಜನ ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಾರೆ. ಅದರಲ್ಲೂ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿಭಾಗವಾದ ಕುಳದಪಾರೆ ಎಂಬಲ್ಲಿ ಆರಾಧಿಸಲ್ಪಡುತ್ತಿರುವ ವಿಷ್ಣುಮೂರ್ತಿ ದೈವ(Vishnumoorthi Daiva) ತನ್ನ ವಿಶೇಷ ಮಹಿಮೆಯ ಮೂಲಕ ಹೆಸರುವಾಸಿಯಾಗಿದೆ. ಪ್ರತಿವರ್ಷ ಇಲ್ಲಿ ವಿಷ್ಣುಮೂರ್ತಿ ದೈವಕ್ಕೆ ಒತ್ತೆಕೋಲ ನಡೆಯುತ್ತಿದ್ದು, ದೈವ ತನ್ನ ಕೆಂಡಸೇವೆಗೆ ಬಳಸುವ ಕೆಂಡ ಮುಂದಿನ ವರ್ಷಕ್ಕೂ ಆರದೆ ಉಳಿಯುತ್ತದೆ ಎನ್ನುವ ಬಲವಾದ ನಂಬಿಕೆ ಇಲ್ಲಿದೆ. ಅಲ್ಲದೆ ಈ ದೈವದ ನೇಮೋತ್ಸವ ನಡೆಯುವ ಸಂದರ್ಭದಲ್ಲಿ ಒಂದು ಹನಿಯಾದರೂ ಮಳೆ ನೀರು(Rain) ಭೂಮಿಗೆ ಬೀಳುತ್ತೆ ಅನ್ನೋದಕ್ಕೆ ಹಲವಾರು ಉದಾಹರಣೆಗಳು ಇಲ್ಲಿದೆ. ಇದೇ ಕಾರಣಕ್ಕಾಗಿ ಈ ಕ್ಷೇತ್ರದಲ್ಲಿ ನಡೆಯೋ ಒತ್ತೆ ಕೋಲಕ್ಕೆ ಕೇರಳ ಮತ್ತು ಕರ್ನಾಟಕದಿಂದ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಾರೆ.
ವಿಷ್ಣುಮೂರ್ತಿ ದೈವದ ಒತ್ತೆಕೋಲ ಎನ್ನುವ ದೈವಾರಾಧನೆ ಹೆಚ್ಚಾಗಿ ಕಂಡುಬರೋದು ದಕ್ಷಿಣಕನ್ನಡ ಮತ್ತು ಕೇರಳ ಗಡಿಭಾಗದಲ್ಲಿ. ವಿಷ್ಣುವಿನ ನರಸಿಂಹಾವತಾರದ ಕಥೆಯನ್ನು ಈ ದೈವದ ಒತ್ತೆಕೋಲದ ಮೂಲಕ ತೋರಿಸಲಾಗುತ್ತದೆ. ತುಳುನಾಡು ಮತ್ತು ಕೇರಳ ಭಾಗದ ಅತ್ಯಂತ ಪ್ರಭಾವಿ ದೈವವೆಂದು ಗುರುತಿಸಲ್ಪಟ್ಟ ವಿಷ್ಣುಮೂರ್ತಿ ದೈವವು ಅಗ್ನಿಯ ರಾಶಿಯಲ್ಲಿ ಬಿದ್ದು, ಆವೇಶದಿಂದ ಕುಣಿಯೋದು ಈ ಒತ್ತೆಕೋಲದ ವಿಶೇಷತೆಯಾಗಿದೆ. ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿಭಾಗವಾದ ನೆಟ್ಟಣಿಗೆಯ ಕುಳದಪಾರೆ ಎನ್ನುವ ಗ್ರಾಮದಲ್ಲಿ ಸುಮಾರು 300 ವರ್ಷಗಳಿಂದ ವಿಷ್ಣುಮೂರ್ತಿ ಗೆ ಈ ಒತ್ತೆಕೋಲವನ್ನು ನೆರವೇರಿಸಲಾಗುತ್ತದೆ. ಕೊರೊನಾ ಸಮಯವೊಂದನ್ನು ಬಿಟ್ಟರೆ ಇಲ್ಲಿ ವಿಷ್ಣುಮೂರ್ತಿ ದೈವಕ್ಕೆ ಒತ್ತೆಕೋಲ ನಡೆಯದ ವರ್ಷಗಳಿಲ್ಲ. ನಂಬಿಕೆಯ ಪ್ರಕಾರ ಇಲ್ಲಿ ದೈವಕ್ಕೆ ಒತ್ತೆಕೋಲ ಸೇವೆ ನಡೆಯದ ವರ್ಷಗಳಿಲ್ಲ.
ಇದನ್ನೂ ಓದಿ: Mandya: ಸಂಸ್ಕಾರ ಜ್ಞಾನ ಶಿಬಿರದಲ್ಲಿ ಚಿಣ್ಣರಿಗೆ ಅಗ್ನಿ ದುರಂತ ಕುರಿತು ಪ್ರಾತ್ಯಕ್ಷಿಕೆ!
ಮರದ ಎತ್ತರದ ರಾಶಿಗೆ ಬೆಂಕಿ ಕೊಟ್ಟು ಬೆಂಕಿಯಲ್ಲಿ ಉರಿದ ಮರದ ಕೆಂಡದ ಮೇಲೆ ಆವೇಶಭರಿತವಾಗಿ ಬೀಳೋದು ಈ ಒತ್ತೆಜೋಲದ ವಿಶೇಷತೆಯಾಗಿದೆ. ನರಸಿಂಹಾವತಾರದಲ್ಲಿ ವಿಷ್ಣುವು ಹಿರಣ್ಯಕಶಿಪುವನ್ನು ಕೊಂದ ಬಳಿಕ ತನ್ನ ಮೇಲಿದ್ದ ರಕ್ತದ ಕಲೆಯನ್ನು ತೊಳೆಯಲು ಬೆಂಕಿಯಲ್ಲಿ ಸ್ನಾನ ಮಾಡಿದ್ದರು ಎನ್ನುವ ದ್ಯೋತಕವಾಗಿ ಈ ಕೆಂಡಸೇವೆ ನೆರವೇರುತ್ತದೆ. ಕುಳದಪಾರೆಯ ಒತ್ತೆಕೋಲದ ವಿಶೇಷವೆಂದರೆ ಹಿಂದಿನ ವರ್ಷ ಮರದ ದಿಮ್ಮಿಗಳಿಗೆ ನೀಡಿದ ಬೆಂಕಿ ಆರದೆ, ಅದು ಮುಂದಿನ ವರ್ಷದ ಒತ್ತೆಕೋಲದವರೆಗೂ ಕೆಂಡವಾಗಿಯೇ ಉಳಿದಿರುತ್ತದೆ ಎನ್ನುವ ನಂಬಿಕೆಯಿದೆ. ಮೇಲೇರಿ ಎಂದು ಕರೆಯಲ್ಪಡುವ ಮರದ ದಿಮ್ಮಿಗಳ ರಾಶಿಯಿಂದ ಸಿಗುವ ಕೆಂಡದಿಂದಲೇ ಮುಂದಿನ ವರ್ಷದ ಮೇಲೇರಿಗೆ ಬೆಂಕಿ ಹಚ್ಚಲಾಗುತ್ತದೆ ಎನ್ನುವ ನಂಬಿಕೆಯು ಸತ್ಯವಾದ ಸಾಕಷ್ಟು ಉದಾಹರಣೆಗಳು ಇಲ್ಲಿದೆ. ಅಲ್ಲದೆ ದೈವವು ಹಿರಣ್ಯಕಶಿಪುವನ್ನು ಕೊಲ್ಲುವ ನರ್ತನ ಸೇವೆ ನಡೆದ ಬಳಿಕ ಇಲ್ಲಿ ಒಂದು ಹನಿಯಾದರೂ ಮಳೆ ಬರುತ್ತದೆ ಎನ್ನುವುದೂ ಇಲ್ಲಿ ಸತ್ಯವಾಗಿದೆ.
ಮನುಷ್ಯನ ಊಹೆಗೂ ಸಿಲುಕದ ಸತ್ಯ ಎನ್ನುವುದು ಈ ಮಣ್ಣಿನಲ್ಲಿ ಇದೆ ಎನ್ನುವುದಕ್ಕೆ ಸೂಕ್ತ ಉದಾಹರಣೆ ರೂಪದಲ್ಲಿ ಕುಳದಪಾರೆಯ ಒತ್ತೆಕೋಲ ಉತ್ಸವದಲ್ಲಿ ಕಾಣಬಹುದಾಗಿದೆ. ಇದೇ ಕಾರಣಕ್ಕೆ ಇಲ್ಲಿನ ಜನ ದೈವದ ಮೇಲೆ ಅಪಾರ ಭಯ-ಭಕ್ತಿ ಹೊಂದಿದ್ದಾರೆ ಎನ್ನುವುದೂ ತಿಳಿದು ಬರುತ್ತದೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
April 27, 2025 10:45 AM IST