Last Updated:
ಮಂಗಳೂರು ನಗರದ ಹೃದಯ ಭಾಗದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಈ ದರ್ಗಾವನ್ನು ಬಸ್ಸುಗಳು, ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತಲುಪಬಹುದು.
ದಕ್ಷಿಣ ಕನ್ನಡ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ಉಳ್ಳಾಲದ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದಲ್ಲಿ(Dargah) ಸಂಭ್ರಮದ ಉರುಸ್ ಕಾರ್ಯಕ್ರಮ(Urs Program) ನಡೆಯುತ್ತಿದೆ. 22 ನೇ ಪಂಚವಾರ್ಷಿಕ 432 ನೇ ವಾರ್ಷಿಕ ಉರುಸ್ ಸಮಾರಂಭ ಇಡೀ ಉಳ್ಳಾಲದಲ್ಲಿ(Ullal) ಹಬ್ಬದ ಸಂಭ್ರಮವನ್ನು ತಂದಿದೆ. ಖಾಝಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಏಪ್ರಿಲ್ 24 ರಂದು ಆರಂಭವಾದ ಉರುಸ್ ಮೇ 18 ವರೆಗೆ ದರ್ಗಾ ವಠಾರದಲ್ಲಿ ನಡೆಯಲಿದೆ.
ಸರ್ವಧರ್ಮ ಸಮನ್ವಯದ ಕ್ಷೇತ್ರವಾಗಿರುವ ಉಳ್ಳಾಲದ ದರ್ಗಾದ ಉರುಸ್ ಅಂದ್ರೆ ಉಳ್ಳಾಲದ ಪಾಲಿಗೆ ದೊಡ್ಡ ಜಾತ್ರೆ. ಐದು ವರ್ಷಗಳಿಗೊಮ್ಮೆ ನಡೆಯುವ ಉರುಸ್ನಲ್ಲಿ ಜಾತಿ-ಮತ ಬೇಧವಿಲ್ಲದೇ ಸಾವಿರಾರು ಜನ ಭಾಗವಹಿಸುತ್ತಾರೆ. ಮಂಗಳೂರು ನಗರದ ಹೃದಯ ಭಾಗದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಈ ದರ್ಗಾವನ್ನು ಬಸ್ಸುಗಳು, ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತಲುಪಬಹುದು.
ದಂತಕಥೆಯ ಪ್ರಕಾರ, ಸುಮಾರು 400 ವರ್ಷಗಳ ಹಿಂದೆ, ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬಂದು, ಬಟ್ಟೆಯ ಮೇಲೆ ತೇಲುತ್ತಾ ಉಳ್ಳಾಲ ತೀರವನ್ನು ತಲುಪಿದರು. ಅವರು ಉಳ್ಳಾಲ ಗ್ರಾಮದ ಮೇಲಂಗಡಿಯಲ್ಲಿರುವ ಒಂದು ಸಣ್ಣ ಮಸೀದಿಯಲ್ಲಿ ಶಿಬಿರ ಹೂಡಿ, ಬಡವರ ಮೇಲೆ ಪ್ರೀತಿಯನ್ನು ಸುರಿಸುತ್ತಾ ಸರಳ ಜೀವನವನ್ನು ನಡೆಸಿದರು. ಸರ್ವಧರ್ಮದ ಜನರನ್ನು ಸಮಭಾವದಿಂದ ನೋಡುತ್ತಿದ್ದ ಅವರ ಕಲ್ಪನೆಯನ್ನು ಇಂದಿಗೂ ಜೀವಂತವಾಗಿ ಇಡಲು ದರ್ಗಾ ಸಮಿತಿ ಶ್ರಮ ಪಡುತ್ತಿರೋದು ವಿಶೇಷವಾಗಿದೆ.
ಉಳ್ಳಾಲದ ಉರುಸ್ಗೆ ದೇಶದ ಹಲವು ರಾಜ್ಯಗಳಿಂದ ಮುಸ್ಲಿಮರು ಬರುತ್ತಿದ್ದಾರೆ. ಇಲ್ಲಿನ ವಿಶೇಷ ಹರಕೆ ಅಂದ್ರೆ ಕುರಿ ಅಥವಾ ಆಡು.. ಉಳ್ಳಾಲ ಉರುಸ್ ಗೆ ಆಡು ಕೊಡುತ್ತೇವೆ ಅಂತಾ ಹರಕೆ ಹೊತ್ರೆ ಅದೆಷ್ಟೋ ಹರಕೆಗಳು ತೀರಿದ ಉದಾಹರಣೆಗಳಿವೆ. ಉಳ್ಳಾಲದ ಉರುಸ್ ಗೆ ದೇಶಾದ್ಯಂತ ಆಡುಗಳು ಹರಕೆ ರೂಪದಲ್ಲಿ ಬರೋದು ವಿಶೇಷವಾಗಿದೆ.
ಮಂಗಳೂರಿಗೆ ಬರುವ ರೈಲಿನಲ್ಲಿ ಭಕ್ತರು ಕುರಿ ಅಥವಾ ಆಡನ್ನು(ಮೇಕೆ) ಹತ್ತಿಸುತ್ತಾರೆ. ಉಳ್ಳಾಲಕ್ಕೆ ಒಪ್ಪಿಸಿದ ಹರಕೆಯ ಆಡನ್ನು ಯಾರೂ ಕದ್ದ ಇತಿಹಾಸವಿಲ್ಲ. ರೈಲ್ವೇ ಅಧಿಕಾರಿಗಳೇ ಮಂಗಳೂರು ರೈಲ್ವೇ ನಿಲ್ದಾಣದಿಂದ ಆಡುಗಳನ್ನು ಉಳ್ಳಾಲಕ್ಕೆ ಕಳುಹಿಸಿಕೊಟ್ಟ ನಿದರ್ಶನಗಳಿವೆ. ಮೇ 18 ರಂದು ಕೊನೆಯ ದಿನ ಐದು ಲಕ್ಷಕ್ಕೂ ಅಧಿಕ ಜನ ಅನ್ನದಾನದಲ್ಲಿ ಭಾಗಿಯಾಗೋದು ಉಳ್ಳಾಲ ದರ್ಗಾದ ವಿಶೇಷವಾಗಿದೆ.
Dakshina Kannada,Karnataka
April 30, 2025 5:04 PM IST