Last Updated:
ಬೆತ್ತ ಊರಿದಲ್ಲಿ ಕಾಸರಕನ ಗಿಡ ಬೆಳೆದಿತ್ತು. ಇದೇ ಜಾಗದಲ್ಲಿ ಮನೆ ನಿರ್ಮಿಸ ಹೊರಟಾಗ ಬೆಂಕಿಯಲ್ಲಿ ಹೊತ್ತಿ ಉರಿದ ಘಟನೆ ನಡೆದಿತ್ತು. ಬಳಿಕ ಯಾರೂ ಈ ಪ್ರದೇಶದಲ್ಲಿ ನೆಲ ಅಗೆಯಲು ಮುಂದಾಗಿಲ್ಲ.
ದಕ್ಷಿಣ ಕನ್ನಡ: ಮಾನವ ಬದುಕು ನಂಬಿಕೆಯ ನೆಲೆಗಟ್ಟಿನಲ್ಲೇ ಕಟ್ಟಿರುವಂತಹುದು. ಅದರಲ್ಲೂ ತುಳುನಾಡಿನಲ್ಲಿ (Tulunadu) ನಂಬಿಕೆಯ ತಳಹದಿಯಲ್ಲೇ ಎಲ್ಲಾ ಸಂಪ್ರದಾಯ,ಆಚರಣೆಗಳು ಹುಟ್ಟಿಕೊಂಡಿವೆ. ಇಲ್ಲಿನ ಒಂದೊಂದು ಕಲ್ಲೂ ಒಂದೊಂದು ಕಥೆ ಹೇಳುತ್ತೆ. ಇಂತಹುದೇ ಒಂದು ಕಲ್ಲು ದಕ್ಷಿಣ ಕನ್ನಡ ಮತ್ತು ಕೇರಳದ ಗಡಿ ಹೊಂದಿಕೊಂಡಿರುವ ಪಾಣಾಜೆ(Panaje) ಎನ್ನುವ ಗ್ರಾಮದಲ್ಲಿದೆ. ಬಂಟಾಜೆ ರಕ್ಷಿತಾರಣ್ಯದ(Bantaje Rakshitaranya) ವ್ಯಾಪ್ತಿಗೆ ಬರುವ ಚೆಂಡೆತ್ತಡ್ಕ ಎನ್ನುವ ಬಯಲು ಪ್ರದೇಶದಲ್ಲಿ ಈ ಕಲ್ಲಿದೆ. ಒಂದು ದೊಡ್ಡ ಕಲ್ಲು, ಇನ್ನೊಂದು ಅದಕ್ಕಿಂತ ಸ್ವಲ್ಪ ಚಿಕ್ಕ ಆಕಾರದ ಕಲ್ಲು. ಈ ಕಲ್ಲುಗಳು ಹಿಂದೆ ಎರಡು ಎತ್ತುಗಳಾಗಿದ್ದವಂತೆ.
ಹೌದು, ಅಂದಿನ ಕಾಲದಲ್ಲಿಈ ಪ್ರದೇಶದಲ್ಲಿ ನೆಲ ಅಗೆಯುವಂತಿಲ್ಲ ಎನ್ನುವ ಕಟ್ಟುಪಾಡುಗಳು ಇದ್ದವಂತೆ. ದೈವಿಕ ಭೂಮಿಯಾಗಿರುವ, ಸುಮಾರು 14 ಎಕರೆ ವಿಸ್ತೀರ್ಣದ ಚೆಂಡೆತ್ತಡ್ಕ ಪ್ರದೇಶದಲ್ಲಿ ಕೃಷಿ ಹಾಗೂ ನಿರ್ಮಾಣ ಚಟುವಟಿಕೆಗೆ ಇಂದಿಗೂ ನಿಷೇಧವಿದೆ. ಹಿಂದೆ ಚೆಂಡೆತ್ತಡ್ಕ ಕೋಟೆ ಪ್ರದೇಶದಲ್ಲಿ ಕೃಷಿ ಕಾಯಕಕ್ಕೆ ಮುಂದಾದ ರೈತ ಎತ್ತುಗಳಿಗೆ ನೊಗ ಕಟ್ಟಿ ಉಳುಮೆ ಮಾಡುತ್ತಿದ್ದ.
ಬಳಿಕ ಎತ್ತುಗಳನ್ನು ಅಲ್ಲೇ ನಿಲ್ಲಿಸಿ ಬೆತ್ತವನ್ನು ನೆಲದಲ್ಲಿ ಊರಿ, ಮನೆಗೆ ಹೋಗಿ ಉಪಾಹಾರ ಸೇವಿಸಿ ಮರಳಿದನಂತೆ. ಆಗ ಎತ್ತುಗಳು ಮಾಯವಾಗಿ ಆ ಜಾಗದಲ್ಲಿ ಎರಡು ಬಂಡೆಕಲ್ಲುಗಳು ಪ್ರತ್ಯಕ್ಷವಾಗಿದ್ದವು. ಬೆತ್ತ ಊರಿದಲ್ಲಿ ಕಾಸರಕನ ಗಿಡ ಬೆಳೆದಿತ್ತು. ಇದೇ ಜಾಗದಲ್ಲಿ ಮನೆ ನಿರ್ಮಿಸ ಹೊರಟಾಗ ಬೆಂಕಿಯಲ್ಲಿ ಹೊತ್ತಿ ಉರಿದ ಘಟನೆ ನಡೆದಿತ್ತು. ಬಳಿಕ ಯಾರೂ ಈ ಪ್ರದೇಶದಲ್ಲಿ ನೆಲ ಅಗೆಯಲು ಮುಂದಾಗಿಲ್ಲ.
ಇದನ್ನೂ ಓದಿ: Dakshina Kannada: ಗ್ರಾಮೀಣ ಭಾಗದಲ್ಲಿ ಕೆಫೆ ಉದ್ಯಮ ಶುರು ಮಾಡಿದ ಐಟಿ ಹುಡುಗಿ!
ಪರಿಸರಕ್ಕೆ ಸಂಬಂಧಪಟ್ಟಂತೆ ಕೆಲವರು ಕೃಷಿ ಮಾಡಲು ಪ್ರಯತ್ನಿಸಿದ್ದರೂ, ಕೃಷಿ ಸಂಪೂರ್ಣ ನಾಶವಾಗಿ ಹೋದ ಘಟನೆಗಳನ್ನು ಇಲ್ಲಿನ ಜನ ಇಂದಿಗೂ ನೆನಪಿಸುತ್ತಾರೆ. ಇದೀಗ ಈ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕಾರಣಕ್ಕೆ ಇಲ್ಲಿ ಅರಣ್ಯ ಚಟುವಟಿಕೆಗಳಿಗೆ ಬದಲಾಗಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ.
ಇಲ್ಲಿ ಅತ್ಯಂತ ಪ್ರಸಿದ್ಧ ಜಾಂಬ್ರಿ ಗುಹಾಲಯ ಕ್ಷೇತ್ರವೂ ಇದ್ದು, ಪ್ರತೀ 12 ವರ್ಷಗಳಿಗೊಮ್ಮೆ ಇಲ್ಲಿ ಗುಹಾಲಯ ಪ್ರವೇಶ ನಡೆಯುತ್ತದೆ. ಈ ಗುಹಾಲಯ ಕ್ಷೇತ್ರದ ಕಾರಣದಿಂದಲೇ ಚೆಂಡೆತ್ತಡ್ಕ ಬಯಲು ಪ್ರದೇಶ ದೈವಿಕ ಭೂಮು ಎನ್ನುವ ರೂಪದಲ್ಲೂ ಗುರುತಿಸಿಕೊಂಡಿದೆ. ಎತ್ತುಗಳು ಮಾಯವಾದವು ಎನ್ನುವ ಕಥೆಗೆ ಪೂರಕವೆಂಬಂತೆ ಈ ಪ್ರದೇಶದಲ್ಲಿ ಎತ್ತುಗಳನ್ನು ಹೋಲುವ ಎರಡು ಬಂಡೆಗಳು ಈಗಲೂ ಇದೆ.
Dakshina Kannada,Karnataka
March 23, 2025 1:29 PM IST