Last Updated:
ಮುಖ್ಯವಾಗಿ ಬೆಂಡೆಕಾಯಿ, ಬದನೆಕಾಯಿ, ತೊಂಡೆಕಾಯಿ, ಅಲಸಂಡೆ, ಸೌತೆಕಾಯಿ ಮೊದಲಾದ ತರಕಾರಿ ಗಿಡಗಳಿಗೆ ಈ ಮಣ್ಣು ಅತ್ಯಂತ ಸಮೃದ್ಧ ಮಣ್ಣಾಗಿದ್ದು, ಈ ಮಣ್ಣಿನಲ್ಲಿ ತರಕಾರಿ ಗಿಡಗಳು ಉತ್ತಮವಾಗಿ ಬೆಳೆಯುತ್ತದೆ.
ದಕ್ಷಿಣ ಕನ್ನಡ: ಹಿಂದಿನ ಕಾಲದಲ್ಲಿ ಕೃಷಿಕರಿಗೆ(Farmers) ತಮ್ಮ ತೋಟದಲ್ಲಿ ಬೆಳೆಯುವ ಬೆಳೆಗಳಿಗೆ(Crops) ಹಾಕಲು ಇಂದು ಮಾರುಕಟ್ಟೆಯಲ್ಲಿ ಸಿಗುವ ಬಗೆ-ಬಗೆಯ ಗೊಬ್ಬರಗಳು(Fertilizers) ಸಿಗುತ್ತಿರಲಿಲ್ಲ. ತಾವೇ ತಯಾರಿಸಿದ ಸಾವಯವ ಗೊಬ್ಬರವನ್ನು ಉಪಯೋಗಿಸಿಕೊಂಡು ಅಂದಿನ ಜನ ಕೃಷಿ ಚಟುವಟಿಕೆಯನ್ನು ಮಾಡುತ್ತಿದ್ದರು. ಹಟ್ಟಿ ಗೊಬ್ಬರ, ಹಸಿ ಗೊಬ್ಬರ ಮೊದಲಾದವುಗಳು ಅಂದಿನ ಕೃಷಿತೋಟದ ಪ್ರಮುಖ ಗೊಬ್ಬರಗಳಾಗಿವೆ. ಈ ಗೊಬ್ಬರಗಳ ಜೊತೆಗೆ ಕೃಷಿಕರು ಸುಡುಮಣ್ಣನ್ನೂ ತಮ್ಮ ತರಕಾರಿ ತೋಟಗಳಿಗೆ ಬಳಸುತ್ತಿದ್ದರು. ತರಕಾರಿ ಗಿಡಗಳಿಗೆ ಅತ್ಯಂತ ಉತ್ಕೃಷ್ಟ ಗೊಬ್ಬರವಾಗಿಯೂ ಈ ಸುಡುಮಣ್ಣು ಗುರುತಿಸಲ್ಪಟ್ಟಿದೆ. ಬಹುತೇಕ ಎಲ್ಲಾ ತೋಟಗಳಲ್ಲಿ ಇತ್ತೀಚಿನ ದಿನಗಳಲ್ಲೂ ಈ ಸುಡುಮಣ್ಣನ್ನು ತಯಾರಿಸಿ ತಮ್ಮ ತರಕಾರಿ ಗಿಡಗಳಿಗೆ(Vegetable Plants) ಇವುಗಳನ್ನು ಬಳಸುತ್ತಾರೆ.
ಮೊದಲು ಮಣ್ಣಿಗೆ ಈ ಸುಡುಮಣ್ಣನ್ನು ಸುರಿದು, ಸಮತಟ್ಟು ಮಾಡಿ, ಅದರ ಮೇಲೆಯೇ ತರಕಾರಿ ಬೀಜಗಳನ್ನು ಹಾಕಲಾಗುತ್ತದೆ. ಸಾವಯವ ಇಂಗಾಲದ ಜೊತೆಗೆ ಗಿಡಗಳಿಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಈ ಮಣ್ಣು, ತರಕಾರಿ ಗಿಡಗಳು ಶೀಘ್ರ ಬೆಳವಣಿಗೆ ಮತ್ತು ಉತ್ತಮ ಫಸಲಿಗೂ ಸಹಕಾರಿಯಾಗಿದೆ. ತೋಟದಲ್ಲಿ ಸಿಗುವ ಅನುಪಯುಕ್ತ ತೆಂಗಿನಸೋಗೆ, ಹುಲ್ಲು-ಕಡ್ಡಿಗಳು, ಮರದ ತುಂಡು ಎಲ್ಲವನ್ನೂ ರಾಶಿ ಹಾಕಿ, ಅವುಗಳ ಮಧ್ಯೆ ಮಣ್ಣು ಹಾಕಿದ ಬಳಿಕ ಆ ರಾಶಿಗೆ ಬೆಂಕಿ ಹಚ್ಚಲಾಗುತ್ತದೆ.
ಬೆಂಕಿ ಸರಾಗವಾಗಿ ಉರಿದು ಎಲ್ಲವೂ ಬೂದಿಯಗಬಾರದು ಎನ್ನುವುದಕ್ಕೆ ರಾಶಿಗೆ ಕೊಂಚ ನೀರನ್ನೂ ಸೇರಿಸಲಾಗುತ್ತದೆ. ಬೆಂಕಿ ಇಲ್ಲದೆ ಕೇವಲ ಕೆಂಡದಲ್ಲೇ ಈ ಹಸಿ ಮತ್ತು ಒಣ ರಾಶಿ ಕರಗಿದ ಬಳಿಕ ರಾಶಿಯಿಂದ ಮಣ್ಣನ್ನು ಬೇರ್ಪಡಿಸಿ ತರಕಾರಿ ಬೆಳೆಯಲು ಅದನ್ನ ಬಳಸಲಾಗುತ್ತದೆ. ಮುಖ್ಯವಾಗಿ ಬೆಂಡೆಕಾಯಿ, ಬದನೆಕಾಯಿ, ತೊಂಡೆಕಾಯಿ, ಅಲಸಂಡೆ, ಸೌತೆಕಾಯಿ ಮೊದಲಾದ ತರಕಾರಿ ಗಿಡಗಳಿಗೆ ಈ ಮಣ್ಣು ಅತ್ಯಂತ ಸಮೃದ್ಧ ಮಣ್ಣಾಗಿದ್ದು, ಈ ಮಣ್ಣಿನಲ್ಲಿ ತರಕಾರಿ ಗಿಡಗಳು ಉತ್ತಮವಾಗಿ ಬೆಳೆಯುತ್ತದೆ.
ಇತ್ತೀಚಿನ ದಿನಗಳಲ್ಲಿ ಕೃಷಿಕನಿಗೆ ತನಗೆ ಬೇಕಾದ ರೀತಿಯ ಗೊಬ್ಬರಗಳು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಹಿನ್ನಲೆಯಲ್ಲಿ ಕೆಲವಡೆ ಈ ಸುಡುಮಣ್ಣು ತಯಾರಿಸುವ ಕೆಲಸವನ್ನು ನಿಲ್ಲಿಸಲಾಗಿದೆ. ಸಾಂಪ್ರದಾಯಿಕವಾಗಿ ಕೃಷಿ ಮಾಡುವ ಭೂಮಿಯಲ್ಲಿ ಇಂದಿಗೂ ಈ ಸುಡುಮಣ್ಣನ್ನು ತಯಾರಿಸುತ್ತಾರೆ. ಸ್ಥಳೀಯ ತುಳು ಭಾಷೆಯಲ್ಲಿ ಇದನ್ನು ಸೂಂಟಾನ್ ಎಂದು ಕರೆಯಲಾಗುತ್ತಿದ್ದು, ಸುಟ್ಟ ಮಣ್ಣು ಎನ್ನುವ ಅರ್ಥವನ್ನು ಇದು ಕೊಡುತ್ತದೆ.
Dakshina Kannada,Karnataka