Last Updated:
ಬಂಟ್ವಾಳದ ರಾಯಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರ ನಿರ್ಮಾಣಗೊಂಡಿದ್ದು, 550 ಮಂದಿಗೆ ಆಸನವಿರುವ ಬಿಲ್ಲವ ಸಮುದಾಯ ಭವನ ಲೋಕಾರ್ಪಣೆಗೊಂಡಿದೆ.
ದಕ್ಷಿಣ ಕನ್ನಡ: ಕೇರಳದ ಶಿವಗಿರಿ(Kerala Shivagiri) ಮಾದರಿಯಲ್ಲಿ ಬಂಟ್ವಾಳದ ರಾಯಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರ(Brahmashri Narayana Guru Jnana Mandir) ನಿರ್ಮಾಣಗೊಂಡಿದೆ. ಬಂಟ್ವಾಳ ತಾಲೂಕಿನ ರಾಯಿ- ಕೊಯಿಲ- ಅರಳ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ರಾಯಿಯಲ್ಲಿ ಈ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜ್ಞಾನ ಮಂದಿರ ನಿರ್ಮಾಣಗೊಂಡಿದೆ. ಗುರುಗಳ ವಿಗ್ರಹ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನದ ಲೋಕಾರ್ಪಣೆ ನಾರಾಯಣ ಗುರು ಚಿಂತನಾ ಸಮಾವೇಶದೊಂದಿಗೆ ನಡೆಯಿತು.
ವಾಸ್ತುಶಿಲ್ಪಿ ಪ್ರಮಲ್ ಕುಮಾರ್ ಕಾರ್ಕಳ ಅವರ ವಾಸ್ತುಶಿಲ್ಪದೊಂದಿಗೆ ನಿರ್ಮಾಣ ಕಾರ್ಯ ನಡೆದಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮಣ ಶಾಂತಿ ಕುದ್ರೋಳಿಯವರ ಉಪಸ್ಥಿತಿಯಲ್ಲಿ ಸದಾನಂದ ಶಾಸ್ತ್ರಿ ವೇಣೂರು ಅವರ ಪೌರೋಹಿತ್ಯದಲ್ಲಿ ಪ್ರತಿಷ್ಠಾಪನೆ ನಡೆಯಿತು.
ಕೇರಳದ ಶಿವಗಿರಿ ಮಾದರಿಯಲ್ಲಿ ಒಂದೂವರೆ ಕೋಟಿ ವೆಚ್ಚದಲ್ಲಿ ಈ ಜ್ಞಾನಮಂದಿರ ನಿರ್ಮಾಣಗೊಂಡಿದೆ. ಹೆದ್ದಾರಿಯಲ್ಲಿ ಸಂಚರಿಸುವವರ ಗಮನಸೆಳೆಯುವ ಬ್ರಹ್ಮಶ್ರೀ ನಾರಾಯಣಗುರುಗಳ ‘ಜ್ಞಾನ ಮಂದಿರ’ ಜೊತೆಗೆ ಸಮುದಾಯದ ವಿವಿಧ ಸಭೆ, ಸಮಾರಂಭಗಳನ್ನು ನಡೆಸುವ ನಿಟ್ಟಿನಲ್ಲಿ ಸುಮಾರು 550 ಮಂದಿ ಕುಳಿತುಕೊಳ್ಳಬಹುದಾದ ಆಸನವನ್ನು ಹೊಂದಿರುವ ‘ಬಿಲ್ಲವ ಸಮುದಾಯ ಭವನ’ವೂ ಲೋಕಾರ್ಪಣೆಯಾಗಿದೆ. ಮೂರು ಗ್ರಾಮದ ಗ್ರಾಮಸ್ಥರು ಜಾತಿ ಬೇಧ ಮರೆತು ಶ್ರಮದಾನದಲ್ಲಿ ಈ ಜ್ಞಾನ ಮಂದಿರದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಕಳೆದ 31ವರ್ಷಗಳ ಹಿಂದೆ ತಾಲೂಕಿನ ರಾಯಿ ಕೊಯಿಲ ಅರಳ ಗ್ರಾಮಗಳನ್ನೊಳಗೊಂಡು ಅಸ್ತಿತ್ವಕ್ಕೆ ಬಂದ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎನ್ನುವ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಅನುಷ್ಠಾನಗೊಳಿಸುತ್ತಾ, ಎಲ್ಲಾ ಜಾತಿ ಧರ್ಮಗಳನ್ನೊಳಗೊಂಡು ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ.
Dakshina Kannada,Karnataka