Dakshina Kannada: ಸಮೀಪಿಸುತ್ತಿದೆ ಮಳೆಗಾಲ- ಕಿಂಡಿ ಅಣೆಕಟ್ಟುಗಳ ನಿರ್ವಹಣೆಯತ್ತ ಗಮನ ಹರಿಸಬೇಕಿದೆ ಇಲಾಖೆ! | The rainy season is approaching – the department needs to focus on the maintenance of Kindi dams!

Dakshina Kannada: ಸಮೀಪಿಸುತ್ತಿದೆ ಮಳೆಗಾಲ- ಕಿಂಡಿ ಅಣೆಕಟ್ಟುಗಳ ನಿರ್ವಹಣೆಯತ್ತ ಗಮನ ಹರಿಸಬೇಕಿದೆ ಇಲಾಖೆ! | The rainy season is approaching – the department needs to focus on the maintenance of Kindi dams!

6 ವರ್ಷಗಳ ಹಿಂದೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗಗಳಲ್ಲಿ ಮಳೆಗಾಲದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿ ವ್ಯಾಪಕ ಪ್ರಮಾಣದ ಹಾನಿ ಉಂಟಾಗಿತ್ತು. ಇದಕ್ಕೆ ಅಣೆಕಟ್ಟು, ಸೇತುವೆಗಳಲ್ಲಿ ತುಂಬಿದ್ದ ಮರಮುಟ್ಟುಗಳನ್ನು ತೆರವುಗೊಳಿಸದೇ ನೀರಿನ ಸರಾಗ ಹರಿವಿಗೆ ತಡೆಯುಂಟಾಗಿರುವುದೂ ಒಂದು ಕಾರಣವಾಗಿತ್ತು. ಇದನ್ನು ಅಧ್ಯಯನಕಾರರ ಮೂಲಕ ಅರಿತ ಆಗಿನ ಸರಕಾರ ಅಣೆಕಟ್ಟುಗಳಲ್ಲಿ ಮರ, ಕಸಗಳನ್ನು ಆದ್ಯತೆಯಲ್ಲಿ ತೆರವುಗೊಳಿಸಲು ಆದೇಶಿಸಿತ್ತು. ಬಯಲು ಸೀಮೆಗಳಂತೆ ಕರಾವಳಿಯಲ್ಲಿ ಕಾಲುವೆ ವ್ಯವಸ್ಥೆಗಳಿಲ್ಲ. ಆದರೆ, ಇಲ್ಲಿನ ಪರಿಸರಕ್ಕೆ ಪೂರಕವಾಗಿ ಪಿಲ್ಲರ್‌ಗಳ ಮೂಲಕ ನದಿ, ಸಣ್ಣ ಹೊಳೆಗಳಿಗೆ ನಿರ್ಮಿಸಲಾದ ಸೇತುವೆ, ಕಿಂಡಿ ಅಣೆಕಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬಹುತೇಕ ಕಿಂಡಿ ಅಣೆಕಟ್ಟುಗಳು ಸುಮಾರು 3 ದಶಕಗಳ ಹಿಂದೆ ನೀರಾವರಿ ಇಲಾಖೆಗಳ ಮೂಲಕ ನಿರ್ಮಾಣಗೊಂಡಿವೆ. ಬಹುತೇಕ ಕಡೆಗಳಲ್ಲಿ ಈಗಿನ ಪರಿಸ್ಥಿತಿಗೆ ಅವೈಜ್ಞಾನಿಕವಾಗಿಯೂ ಇವು ನಿರ್ಮಾಣಗೊಂಡಿವೆ.

ಕೆಲವು ವರ್ಷಗಳಿಂದ ಕರಾವಳಿ ತಾಲೂಕುಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಹೆಚ್ಚಿನ ಹಾನಿಗಳು ಉಂಟಾಗುತ್ತಿವೆ. ಸೇತುವೆ, ಕಿಂಡಿ ಆಣೆಕಟ್ಟುಗಳಲ್ಲಿ ಪಿಲ್ಲರ್‌ಗಳ ಮಧ್ಯೆ ನೀರಿನೊಂದಿಗೆ ಸಾಗಿ ಬರುವ ಮರದ ತುಂಡುಗಳು, ತ್ಯಾಜ್ಯಗಳು ನಿಂತು ಆ ಮೂಲಕ ಸರಾಗ ನೀರಿನ ಹರಿವು ಸಾಧ್ಯವಾಗದೆ ಸುತ್ತಲಿನ ಕೃಷಿ ಭೂಮಿ, ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗುತ್ತಿರುವುದು ಸಾಬೀತಾಗಿದೆ.

2019 ರಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಮಳೆ ಹಾಗೂ ಪ್ರವಾಹದ ಸಂದರ್ಭದಲ್ಲಿ ಸುಮಾರು 7 ಸೇತುವೆಗಳಿಗೆ ಹಾನಿಯಾಗಿರುವ ಕುರಿತು ಕಂದಾಯ ಇಲಾಖೆ ವರದಿ ಮಾಡಿತ್ತು. ಬಳಿಕ ಸಂಘ ಸಂಸ್ಥೆಗಳು, ಸಾರ್ವಜನಿಕರು, ವಿಪತ್ತು ನಿರ್ವಹಣಾ ತಂಡಗಳು, ಸೇತುವೆಯಲ್ಲಿ ಬಂದು ನಿಂತ ಮರಗಳನ್ನು ತೆರವುಗೊಳಿಸುವ ಕೆಲಸಗಳನ್ನು ಮಾಡಿದ್ದವು. ಬಳಿಕ ಸರಕಾರವೇ ಆದೇಶ ಹೊರಡಿಸಿ ಇಲಾಖೆಗಳಿಗೆ ಸೂಚಿಸಿರುವುದು ಒಂದಷ್ಟು ಹಾನಿ ಪ್ರಮಾಣಗಳನ್ನು ಕಡಿಮೆಗೊಳಿಸುವ ಪ್ರಯತ್ನದ ಭಾಗವಾಗಲಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಕೆಲಸ ಒಂದೆರಡು ವರ್ಷಗಳಿಗಷ್ಟೇ ಸೀಮಿತವಾಗಿತ್ತು. 2024 ರಲ್ಲಿ ದ.ಕ. ಜಿಲ್ಲಾಧಿಕಾರಿಯವರು ಕಿಂಡಿ ಅಣೆಕಟ್ಟುಗಳನ್ನು ಸ್ಚಚ್ಛಗೊಳಿಸುವ ಕುರಿತು ಸೂಚನೆ ನೀಡಿದ್ದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ.

ಅಧಿಕ ಅಣೆಕಟ್ಟುಗಳು:

ದ.ಕ. ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಪುತ್ತೂರು, ಸುಳ್ಯ ತಾಲೂಕುಗಳಲ್ಲಿ 100 ಕ್ಕೂ ಮಿಕ್ಕಿ ಕಿಂಡಿ ಆಣೆಕಟ್ಟುಗಳಿವೆ. ಬಹುತೇಕ ಹೊಳೆ, ತೋಡುಗಳಿಗೆ ಹಲಗೆ ಹಾಕಿ ನೀರು ಸಂರಕ್ಷಿಸಿ ಕೃಷಿಗೆ ಬಳಸುವ ಉದ್ದೇಶದಿಂದ ಇವುಗಳನ್ನು ನಿರ್ಮಿಸಲಾಗಿದೆ. ಆದರೆ ಕೆಲವಷ್ಟೇ ಮೂಲ ಉದ್ದೇಶದಿಂದ ಬಳಕೆಯಾಗುತ್ತಿವೆ. ಮಳೆಗಾಲದ ಆರಂಭದಲ್ಲಿ ಇವುಗಳಲ್ಲಿ ಸಿಲುಕಿರುವ ಮರಗಳನ್ನು ತೆರವುಗೊಳಿಸಿದರೂ, ಒಂದೆರಡು ಭಾರೀ ಮಳೆಗೆ ಅವು ಮೊದಲಿನಂತೆಯೇ ಆಗುತ್ತವೆ. ಅಲ್ಲದೇ ಇವುಗಳನ್ನು ಆಗಾಗ್ಗೆ ತೆರವುಗೊಳಿಸುವವರು ಯಾರು ಎನ್ನುವ ಪ್ರಶ್ನೆಯೂ ಇದೆ. ಸ್ಥಳೀಯಾಡಳಿತ, ನೀರಾವರಿ ಇಲಾಖೆ ಮಾತ್ರ ಇದರ ಗೊಡವೆಗೇ ಹೋಗುತ್ತಿಲ್ಲ.

ಹೆದ್ದಾರಿ-ನದಿ ಭಾಗದಿಂದ ತೀರಾ ಕೆಳ ಭಾಗಗಳಲ್ಲಿ ನಿರ್ಮಾಣವಾಗಿರುವ ಆಣೆಕಟ್ಟುಗಳಿಂದ ಕೆಲವು ಕಡೆ ರಸ್ತೆಗಳು ಕುಸಿಯುವ ಭೀತಿ ಇದೆ. ಅಂತಹ ಅಣೆಕಟ್ಟುಗಳ ಕುರಿತು ದ.ಕ. ಡಿಸಿಯವರಿಗೆ ದೂರು ಸಲ್ಲಿಕೆಯಾಗಿದ್ದು, ಈ ಬಗ್ಗೆ ಕ್ರಮಕ್ಕೆ ಸೂಚಿಸಿದ ಉದಾಹರಣೆಗಳೂ ಇವೆ. ಮರಮಟ್ಟುಗಳು ಶೇಖರಣೆಗೊಂಡ ಪರಿಸರದಲ್ಲಿ ಮಣ್ಣಿನ ಸವಕಳಿಯೂ ವ್ಯಾಪಕವಾಗಿ ಉಂಟಾಗುತ್ತಿರುವುದು ಕೂಡ ಆತಂಕಾರಿ ಅಂಶವಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯೋಜಿತ `ಶೌರ್ಯ’ ವಿಪತ್ತು ನಿರ್ವಹಣಾ ತಂಡಗಳು ಹಲವು ಕಡೆಗಳಲ್ಲಿ ಅಣೆಕಟ್ಟುಗಳಲ್ಲಿ ತುಂಬಿದ್ದ ಮರದ ದಿಮ್ಮಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಕೆಲಸ ನಿರ್ವಹಿಸುತ್ತಾ ಬಂದಿವೆ. ಇದು ಬಹಳಷ್ಟು ಪ್ರಯೋಜನಕಾರಿಯೆಂಬುದೂ ಬಳಿಕದಲ್ಲಿ ಸಾಬೀತಾಗಿತ್ತು. ಇದೇ ರೀತಿ ಅಣೆಕಟ್ಟು ವ್ಯಾಪ್ತಿಗಳಲ್ಲಿ ಸ್ಥಳೀಯಾಡಳಿತಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಇದೆ.