Last Updated:
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಂಕಿಮ್ ಚಂದ್ರರ ವಂದೇ ಮಾತರಂ 150ನೇ ವರ್ಷಾಚರಣೆಗೆ ದುರ್ಗಾ ಜಪ ಯಜ್ಞ ಆಯೋಜನೆ, 5800 ಭಕ್ತರು ಆನ್ಲೈನ್ ನೋಂದಣಿ ಮಾಡಿದ್ದಾರೆ.
ಮಂಗಳೂರು: ‘ತ್ವಾಂ ಹಿ ದುರ್ಗಾ ದಶಪ್ರಹರಣಧಾರಿಣಿ’ ಇದು ಬಂಕಿಮ್ ಚಂದ್ರ ಚಟರ್ಜಿಯವರು ತಮ್ಮ ವಂದೇ ಮಾತರಂ ಗೀತೆಯಲ್ಲಿ (Song) ಹೇಳಿದ ಮಾತು. ಭಾರತಾಂಬೆಗೂ ದುರ್ಗೆಗೂ (Durga) ಯಾವುದೇ ಭೇದವಿಲ್ಲ! ಇಂತಹ ತತ್ವದಿಂದ ಕಟೀಲಲ್ಲಿ (Kateelu) ಮೂಡಿದ್ದು ರಾಷ್ಟ್ರಯಜ್ಞದ ಜ್ಯೋತಿ, ಅದರಲ್ಲಿ ಆಹುತಿಯಾಗಿದ್ದು ದೇಶಭಕ್ತಿಯ ಭಾವ, ಪೂರ್ಣಾಹುತಿ ರಾಷ್ಟ್ರದೀಕ್ಷೆ ಹಾಗೂ ಫಲ (Virtue) ರಾಷ್ಟ್ರರಕ್ಷೆ!
ಈ ವರ್ಷ ಬಂಕಿಮ ಚಂದ್ರರ ‘ವಂದೇ ಮಾತರಂ’ಗೆ 150ನೇ ವರ್ಷ. ಅದರಂತೆ ಭಾರತ ಮಾತೆ ಬೇರೆಯಲ್ಲ, ಕಟೀಲು ದುರ್ಗೆ ಬೇರೆಯಲ್ಲ. ಇಬ್ಬರೂ ಒಂದೇ ಎಂಬ ಭಾವನೆಯೊಂದಿಗೆ ಹೊಸ ವರ್ಷಾಚರಣೆಯ ಮೊದಲ ದಿನ ಕಟೀಲು ದೇವಾಲಯದ ಮೂಲ ಸ್ಥಾನ ಭ್ರಾಮರಿ ವನದಲ್ಲಿ ಶ್ರೀದುರ್ಗಾ ಜಪ ಯಜ್ಞ ನೆರವೇರಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ರಾಮಕೃಷ್ಣ ತಪೋವನ ಪೊಳಲಿ ಹಾಗೂ ಅರ್ಘ್ಯ ಫೌಂಡೇಶನ್ ಸಹಯೋಗದಲ್ಲಿ “ದುರ್ಗಾ ಜಪ ಯಜ್ಞ” ಕಾರ್ಯಕ್ರಮ ಆಯೋಜನೆಗೊಂಡಿದೆ. ದುರ್ಗಾ ಜಪ ಯಜ್ಞದಲ್ಲಿ ಪಾಲ್ಗೊಳ್ಳುವ ಭಕ್ತರು ಡಿ.1ರಿಂದ ಡಿ.31ರವರೆಗೆ ಪ್ರತಿನಿತ್ಯವೂ ಕನಿಷ್ಠ 108 ಬಾರಿ “ಶ್ರೀ ದುರ್ಗಾಯೈ ನಮಃ” ಎಂಬ ಜಪ ಮಾಡಬೇಕು. ಗರಿಷ್ಠ 1008, 10,008 ಬಾರಿಯೂ ಜಪವನ್ನೂ ಮಾಡಬಹುದು. ಹೀಗೆ ಸಂಕಲ್ಪ ಮಾಡಿದ ಭಕ್ತರು ಆನ್ಲೈನ್ನಲ್ಲಿ ಶ್ರೀದುರ್ಗಾ ಜಪ ಯಜ್ಞ ಅಭಿಯಾನದ ನೋಂದಣಿ ಮಾಡಲು ಅವಕಾಶ ನೀಡಲಾಗಿತ್ತು.
ಹೊಸ ವರ್ಷಕ್ಕೆ ಅರ್ಥಪೂರ್ಣ ನಾಂದಿ
ಇಂದಿನವರೆಗೆ ಸುಮಾರು 5,800 ಮಂದಿ ಭಕ್ತರು ಆನ್ಲೈನ್ನಲ್ಲಿ ನೋಂದಣಿ ಮಾಡಿದ್ದರು. ನೋಂದಾಯಿತ ಭಕ್ತರ ಹೆಸರು ಮತ್ತು ಸಂಕಲ್ಪವನ್ನು ದುರ್ಗಾ ಜಪ ಯಜ್ಞದ ಪೂರ್ಣಾಹುತಿ ಸಂದರ್ಭ ದೇವಿಗೆ ಸಮರ್ಪಿಸಲಾಯಿತು. ದುರ್ಗಾ ಜಪ ಯಜ್ಞದ ಸಂದರ್ಭ ‘ದುರ್ಗಾ ದಶಪ್ರಹರಣ ಧಾರಿಣೀಂ’ ಎಂಬ ಬಂಕಿಮರ ಸಾಲಿನಂತೆ ದುರ್ಗೆಯ ಸನ್ನಿಧಾನದಲ್ಲಿ ಸಾವಿರಾರು ಮಂದಿ ಭಕ್ತರು ಒಕ್ಕೊರಲಿನಿಂದ “ಶ್ರೀ ದುರ್ಗಾಯೈ ನಮಃ” ಎಂಬ ಜಪ ಮಾಡಿದರು. ಯುವ ಜನತೆಯನ್ನು ಆಧ್ಯಾತ್ಮಿಕ ಜೀವನದತ್ತ ಸೆಳೆಯಲು ಮತ್ತು ಹೊಸ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಈ ದುರ್ಗಾ ಜಪ ಯಜ್ಞ ನಡೆಸಲಾಗಿದೆ.
Dakshina Kannada,Karnataka
Jan 06, 2026 12:24 PM IST