Last Updated:
ಪ್ರಾಣಿಗಳಿಗೆ ಅವುಗಳಿಗೆ ಬೇಕಾದಷ್ಟು ನೀರು ಮತ್ತು ಆಹಾರದ ಪೂರೈಕೆ ಕಾಡಿನಲ್ಲೇ ದೊರೆತಲ್ಲಿ ನಾಡಿನತ್ತ ಅವುಗಳು ಬರುವ ಸನ್ನಿವೇಶಗಳನ್ನು ಕೊಂಚ ಪ್ರಮಾಣದಲ್ಲಾದರೂ ತಪ್ಪಿಸಬಹುದಾಗಿದೆ.
ದಕ್ಷಿಣಕನ್ನಡ: ಕಾಡು ಪ್ರಾಣಿಗಳು(Wild Animals) ಮತ್ತು ಮನುಷ್ಯನ ನಡುವೆ ಇತ್ತೀಚಿನ ದಿನಗಳಲ್ಲಿ ಸಂಘರ್ಷ ಹೆಚ್ಚಾಗುತ್ತಿದೆ. ನಗರೀಕರಣ(Urbanization) ಹೆಚ್ಚಾದಂತೆಲ್ಲಾ ಕಾಡುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾದ ಹಿನ್ನಲೆಯಲ್ಲಿ ಕಾಡುಪ್ರಾಣಿಗಳು ಇಂದು ಆಹಾರ, ನೀರು ಅರಸಿ ನಾಡಿನತ್ತ ಬರೋ ಘಟನೆಗಳು ಸಾಮಾನ್ಯವಾಗಿವೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ(Forest Department) ಕಾಡುಗಳಲ್ಲಿ ಮರ ನೆಡುವ ಪ್ರಕ್ರಿಯೆಯ ಜೊತೆಗೆ ದಟ್ಟ ಅರಣ್ಯದೊಳಗೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನೂ(Fruits Plants) ನೆಡಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡಿದ್ದರೂ, ಅದು ಪರಿಣಾಕಾರಿಯಾಗಿ ನಡೆದಿಲ್ಲ. ಇದೀಗ ಸ್ವತಃ ಜನಪ್ರತಿನಿಧಿಗಳೇ(Representatives) ಈ ಬಗ್ಗೆ ಗಮನಹರಿಸಲು ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರಣ್ಯದೊಳಗೆ ಹಣ್ಣಿನ ಗಿಡಗಳನ್ನು ನೆಡುವಂತೆ ಸೂಚಿಸಿದ್ದಾರೆ. ಹಲಸು, ಮಾವು ಸೇರಿದಂತೆ ಹಲವು ಪ್ರಕಾರದ ಹಣ್ಣಿನ ಗಿಡಗಳು, ಆನೆಗಳಿಗೆ ಇಷ್ಟವಾಗುವ ಬಿದಿರು, ಈಂದು ಗಿಡಗಳನ್ನು ಹೆಚ್ಚಾಗಿ ಬೆಳೆಸುವ ಅಗತ್ಯವಿದೆ ಎಂದು ಶಾಸಕರು ಅರಣ್ಯ ಇಲಾಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಅರಣ್ಯದಂಚಿನಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಮನುಷ್ಯನ ಜೀವಕ್ಕೂ ಹಾನಿಯಾಗಿದೆ.
ಹೆಚ್ಚಿನ ಅರಣ್ಯದಂಚಿನಲ್ಲಿರುವ ಕೃಷಿಭೂಮಿಗಳು ಅರಣ್ಯವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದ್ದು, ಪ್ರಾಣಿಗಳು ತಮ್ಮ ಸಹಜ ಸಂಚಾರದ ಮೂಲಕ ಈ ಪ್ರದೇಶಗಳಿಗೆ ಬರುವ ಸಂದರ್ಭದಲ್ಲಿ ಕೃಷಿಹಾನಿ, ಜೀವಹಾನಿ ಎನ್ನುವ ಸಮಸ್ಯೆಗಳು ಎದುರಾಗುತ್ತವೆ. ಪ್ರಾಣಿಗಳಿಗೆ ಅವುಗಳಿಗೆ ಬೇಕಾದಷ್ಟು ನೀರು ಮತ್ತು ಆಹಾರದ ಪೂರೈಕೆ ಕಾಡಿನಲ್ಲೇ ದೊರೆತಲ್ಲಿ ನಾಡಿನತ್ತ ಅವುಗಳು ಬರುವ ಸನ್ನಿವೇಶಗಳನ್ನು ಕೊಂಚ ಪ್ರಮಾಣದಲ್ಲಾದರೂ ತಪ್ಪಿಸಬಹುದಾಗಿದೆ.
ಒಂದೆಡೆ ಕಾಡು ಪ್ರದೇಶಗಳು ಅಡಿಕೆ, ರಬ್ಬರ್ ತೋಟಗಳಾಗಿ ಬದಲಾಗುತ್ತಿರುವ ಹಿನ್ನಲೆಯಲ್ಲಿ ಕಾಡುಪ್ರಾಣಿಗಳಾದ ಆನೆ, ಕಾಡುಹಂದಿ, ಕಾಡುಕೋಣ, ಹುಲಿ, ಚಿರತೆ, ಮಂಗಗಳು ಈ ತೋಟಗಳತ್ತ ತಮ್ಮ ಆಹಾರವನ್ನು ಹುಡುಕಿಕೊಂಡು ಬರುತ್ತವೆ. ಕಾಡುಪ್ರಾಣಿಗಳನ್ನು ಕಾಡುಗಳಿಗೆ ಓಡಿಸಬಹುದು. ಆದರೆ ಬೇರೆ ಯಾವುದೇ ವ್ಯವಸ್ಥೆ ಮಾಡಲು ಸದ್ಯಕ್ಕೆ ಅರಣ್ಯ ಇಲಾಖೆಯ ಮುಂದಾಗಿಲ್ಲ. ಕಾಡುಪ್ರಾಣಿಗಳಿಂದ ಮನುಷ್ಯನಿಗೆ, ಮನುಷ್ಯನಿಂದ ಕಾಡುಪ್ರಾಣಿಗಳ ಮೇಲಿನ ದೌರ್ಜನ್ಯ ನಿಲ್ಲಬೇಕಾದ ಹಿನ್ನಲೆಯಲ್ಲಿ ಹಣ್ಣಿನ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಕಾಡಿನಲ್ಲಿ ಬೆಳೆಸುವ ಯೋಜನೆಗೆ ಶಾಸಕ ಅಶೋಕ್ ಕುಮಾರ್ ರೈ ಒತ್ತು ನೀಡಿದ್ದು, ಈ ಪ್ರಕ್ರಿಯೆಯನ್ನು ಅತ್ಯಂತ ಶೀಘ್ರವಾಗಿ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನವನ್ನೂ ಅವರು ನೀಡಿದ್ದಾರೆ.
ಈ ಹಿಂದೆ ಶಾಸಕ ಅಶೋಕ್ ಕುಮಾರ್ ರೈ ರಸ್ತೆ ಪಕ್ಕದಲ್ಲಿರುವ ಮಾವಿನ ಮರಗಳನ್ನು ಏಲಂ(ಹರಾಜು) ನೀಡುವ ಪ್ರಕ್ರಿಯೆಗೂ ತಡೆ ನೀಡಿದ್ದರು. ಈ ಮರಗಳಲ್ಲಿ ಬೆಳೆಯುವ ಹಣ್ಣುಗಳು ಹಕ್ಕಿಗಳಿಗೆ, ಮಂಗಗಳಿಗೆ ಆಹಾರವಾಗಿ ಸಿಗಲಿ ಎನ್ನುವ ಕಾರಣಕ್ಕೆ ಏಲಂ ಪ್ರಕ್ರಿಯೆಯನ್ನು ನಿಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರರಾಗಿದ್ದರು.
Dakshina Kannada,Karnataka
May 02, 2025 11:45 AM IST