IND vs PAK: ಪಾಕ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಗಾಯಗೊಂಡ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್‌!Shubman Gill Suffers Injury Before India vs Pakistan Asia Cup 2025 Match | ಕ್ರೀಡೆ

IND vs PAK: ಪಾಕ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಗಾಯಗೊಂಡ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್‌!Shubman Gill Suffers Injury Before India vs Pakistan Asia Cup 2025 Match | ಕ್ರೀಡೆ

Last Updated:

IND vs PAK: ಈ ಮಹತ್ವದ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನ ಭಾರತೀಯ ಕ್ರಿಕೆಟ್ ಪಾಳಯದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ತಂಡದ ಸ್ಟಾರ್ ಆರಂಭಿಕ ಆಟಗಾರ ಗಾಯಗೊಂಡಿದ್ದಾರೆ.

ind vs pakind vs pak
ind vs pak

ದುಬೈ: ಏಷ್ಯಾ ಕಪ್ 2025ರ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಡೀ ಕ್ರಿಕೆಟ್ ಜಗತ್ತೇ ಕಾತರದಿಂದ ಎದುರು ನೋಡುತ್ತಿರುವ ಈ ಹೈ-ವೋಲ್ಟೇಜ್ ಪಂದ್ಯವು ಇಂದು (ಭಾನುವಾರ, ಸೆಪ್ಟೆಂಬರ್ 14) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಆದರೆ, ಈ ಮಹತ್ವದ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನ ಭಾರತೀಯ ಕ್ರಿಕೆಟ್ ಪಾಳಯದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ತಂಡದ ಸ್ಟಾರ್ ಆರಂಭಿಕ ಆಟಗಾರ ಶುಭಮನ್ ಗಿಲ್ ಅಭ್ಯಾಸದ ವೇಳೆ ಗಾಯಗೊಂಡಿರುವುದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

ಅಭ್ಯಾಸದ ವೇಳೆ ಆಗಿದ್ದೇನು?

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಶನಿವಾರ ನಡೆದ ನೆಟ್ ಪ್ರಾಕ್ಟೀಸ್ ವೇಳೆ ಶುಭಮನ್ ಗಿಲ್ ಅವರ ಕೈಗೆ ಚೆಂಡು ಬಡಿದಿದೆ. ಗಾಯದ ತೀವ್ರತೆಗೆ ಗಿಲ್ ತೀವ್ರ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ತಕ್ಷಣವೇ ತಂಡದ ಫಿಸಿಯೋಗಳು ಅವರ ನೆರವಿಗೆ ಧಾವಿಸಿ, ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇದಾದ ನಂತರ ಗಿಲ್ ಮೈದಾನದಿಂದ ಹೊರಬಂದು, ಗಾಯಗೊಂಡ ಕೈಯನ್ನು ಹಿಡಿದು ಐಸ್ ಬಾಕ್ಸ್ ಮೇಲೆ ಕುಳಿತಿರುವುದು ಕಂಡುಬಂದಿದೆ. ಈ ದೃಶ್ಯವು ತಂಡದ ಅಭಿಮಾನಿಗಳಲ್ಲಿ ತೀವ್ರ ಕಳವಳ ಮೂಡಿಸಿತ್ತು.

ಈ ಘಟನೆಯ ನಂತರ, ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಇಬ್ಬರೂ ಗಿಲ್ ಜೊತೆ ಸುದೀರ್ಘ ಚರ್ಚೆ ನಡೆಸಿದರು. ಅವರ ಆರಂಭಿಕ ಜೊತೆಗಾರ ಅಭಿಷೇಕ್ ಶರ್ಮಾ, ಗಿಲ್‌ಗೆ ನೀರಿನ ಬಾಟಲಿ ತೆರೆಯಲು ಸಹಾಯ ಮಾಡಿದ್ದು ಅವರ ನೋವಿನ ತೀವ್ರತೆಗೆ ಸಾಕ್ಷಿಯಾಗಿತ್ತು.

ಆದರೆ, ಕೆಲವೇ ನಿಮಿಷಗಳಲ್ಲೇ ಅಭಿಮಾನಿಗಳು ನಿಟ್ಟುಸಿರು ಬಿಡುವಂತಹ ಘಟನೆ ನಡೆಯಿತು. ನೋವಿನ ನಡುವೆಯೂ ಗಿಲ್ ಮತ್ತೆ ನೆಟ್ಸ್‌ಗೆ ಮರಳಿ ಬ್ಯಾಟಿಂಗ್ ಅಭ್ಯಾಸ ಮುಂದುವರಿಸಿದ್ದು, ಪಾಕ್ ವಿರುದ್ಧ ಕಣಕ್ಕಿಳಿಯುವ ವಿಶ್ವಾಸ ಮೂಡಿಸಿದ್ದಾರೆ.

ಒಂದು ವೇಳೆ ಗಿಲ್ ಆಡದಿದ್ದರೆ?

ಶುಭಮನ್ ಗಿಲ್ ಅವರ ಗಾಯ ಗಂಭೀರವಾಗಿದ್ದು, ಒಂದು ವೇಳೆ ಅವರು ಇಂದಿನ ಪಂದ್ಯದಿಂದ ಹೊರಗುಳಿದರೆ, ಅವರ ಸ್ಥಾನವನ್ನು ತುಂಬಲು ಸ್ಫೋಟಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಸಿದ್ಧರಾಗಿದ್ದಾರೆ. ಸದ್ಯ ಟಿ20 ಮಾದರಿಯಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಸಂಜು, ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಕಳೆದ ವರ್ಷ ಟಿ20 ಪಂದ್ಯಗಳಲ್ಲಿ ಆರಂಭಿಕರಾಗಿ ಮೂರು ಶತಕ ಸಿಡಿಸಿರುವ ಕೇರಳದ ಈ ಆಟಗಾರ, ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಯುಎಇ ವಿರುದ್ಧದ ಕಳೆದ ಪಂದ್ಯದಲ್ಲಿ ಸಂಜು ಆಡುವ ಹನ್ನೊಂದರ ಬಳಗದಲ್ಲಿದ್ದರೂ, ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ.

ಬೌಲಿಂಗ್ ವಿಭಾಗದಲ್ಲಿ ಭಾರತ ಬಲಿಷ್ಠ

ಇನ್ನು ಬೌಲಿಂಗ್ ವಿಭಾಗದ ಬಗ್ಗೆ ಹೇಳುವುದಾದರೆ, ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಅರ್ಶದೀಪ್ ಸಿಂಗ್ ಅವರಿಗೆ ಯುಎಇ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು. ಅವರ ಅನುಪಸ್ಥಿತಿಯಲ್ಲಿಯೂ ಭಾರತದ ಬೌಲರ್‌ಗಳು ಮಿಂಚಿದ್ದರು. ಆಲ್‌ರೌಂಡರ್ ಶಿವಂ ದುಬೆ ಕೇವಲ 4 ರನ್‌ ನೀಡಿ 3 ವಿಕೆಟ್ ಪಡೆದರೆ, ಸ್ಪಿನ್ನರ್ ಕುಲದೀಪ್ ಯಾದವ್ ಕೇವಲ 7 ರನ್‌ ನೀಡಿ 4 ವಿಕೆಟ್ ಕಿತ್ತು ಯುಎಇ ತಂಡವನ್ನು ಕಟ್ಟಿಹಾಕಿದ್ದರು.

ಒಟ್ಟಿನಲ್ಲಿ, ಗಿಲ್ ಅವರ ಗಾಯದ ಬಗ್ಗೆ ಸ್ವಲ್ಪ ಆತಂಕವಿದ್ದರೂ, ಅವರು ಆಡುವ ವಿಶ್ವಾಸವಿದೆ. ಒಂದು ವೇಳೆ ಅವರು ಅಲಭ್ಯರಾದರೂ ಸಂಜು ಸ್ಯಾಮ್ಸನ್ ರೂಪದಲ್ಲಿ ಸಮರ್ಥ ಬದಲಿ ಆಟಗಾರನಿದ್ದಾನೆ. ಹೀಗಾಗಿ, ಇಂದಿನ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಕಠಿಣ ಸವಾಲು ನೀಡುವುದು ಖಚಿತ.