Last Updated:
ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ ಅನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನೊಂದಿಗೆ ಪ್ರಾರಂಭಿಸಿತ್ತಾದರು. ನಂತರದ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ಬಾರದೆ ಕಳಪೆ ಪ್ರದರ್ಶನದ ಮೂಲಕ ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ರಲ್ಲಿ ಈಗಾಗಲೇ ಲೀಗ್ ಹಂತದಲ್ಲಿ ಬಹುತೇಕ ತಂಡಗಳು 9 ಪಂದ್ಯಗಳನ್ನು ಆಡಿವೆ. ಸೆಮಿಫೈನಲ್ (Semi-Final) ಲೆಕ್ಕಾಚಾರ ಕೂಡ ಆರಂಭವಾಗಿದೆ. ಈ ನಡುವೆ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಕಳಪೆ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಜೊತೆಗೆ ಎಂಎಸ್ ಧೋನಿ (MS Dhoni) ಅವರ ಬ್ಯಾಟಿಂಗ್ ಕುರಿತು ಅನೇಕ ಹಿರಿಯ ಆಟಗಾರರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಟಾಪ್ ಆರ್ಡರ್ನಲ್ಲಿ ಬಂದು ಆಡಲು ಧೋನಿ ಹಿಂದೇಟು
ನಿಖರವಾಗಿ ಹೇಳುವುದಾದರೆ, ಇಡೀ ತಂಡದ ಬ್ಯಾಟಿಂಗ್ ಲೈನ್ಅಪ್ ಕಳಪೆಯಾಗಿದೆ. ಯಾವುದೇ ಒಬ್ಬ ಬ್ಯಾಟರ್ ಕೂಡ ನಿರೀಕ್ಷೆಗೆ ತಕ್ಕಂತೆ ಆಟವಾಡುತ್ತಿಲ್ಲ. ಇನ್ನೂ ಎಂಎಸ್ ಧೋನಿ ಅವರು ಟಾಪ್ ಆರ್ಡರ್ನಲ್ಲಿ ಬಂದು ಬ್ಯಾಟ್ ಬೀಸಲು ಹಿಂದೇಟು ಹಾಕುತ್ತಿದ್ದು, ಈ ಬಾರಿ ಅವರ ಬ್ಯಾಟ್ನಿಂದ ಬಿಗ್ ಶಾಟ್ಗಳು ಕೂಡ ಮೂಡಿ ಬರುತ್ತಿಲ್ಲ. ಈ ನಡುವೆ ಅವರ ಬ್ಯಾಟಿಂಗ್ ಕುರಿತು ಟೀಕೆಯ ಜೊತೆಗೆ ನಿವೃತ್ತಿ ಆಗಿ, ಸಾಕು ಎಂದು ಅನೇಕ ಹಿರಿಯ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
9 ಪಂದ್ಯದಲ್ಲಿ 7 ಸೋಲು 2 ಗೆಲುವು
ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ ಅನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನೊಂದಿಗೆ ಪ್ರಾರಂಭಿಸಿತ್ತಾದರು. ನಂತರದ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ಬಾರದೆ ಕಳಪೆ ಪ್ರದರ್ಶನದ ಮೂಲಕ ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೆ ಅವರು ಪ್ಲೇ ಆಪ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ.
ಧೋನಿ ನಿವೃತ್ತಿ ಕುರಿತು ಆಡಂ ಗಿಲ್ಕ್ರಿಸ್ಟ್ ಹೇಳಿದ್ದೇನು
ಈ ನಡುವೆ ಆಸ್ಟ್ರೇಲಿಯಾದ ಮಾಜಿ ಲೆಜೆಂಡ್ ವಿಕೆಟ್ಕೀಪರ್-ಬ್ಯಾಟರ್ ಆಡಮ್ ಗಿಲ್ಕ್ರಿಸ್ಟ್ ಧೋನಿ ಕುರಿತು ಮಾತನಾಡಿದ್ದು, ಮುಂದಿನ ಸೀಸನ್ನಲ್ಲಿ ಸಿಎಸ್ಕೆ ತಂಡವನ್ನು ಹೊಸದಾಗಿ ಕಟ್ಟುವ ಅಗತ್ಯವಿದೆ. ಇನ್ನೂ ಈ ಸಂದರ್ಭದಲ್ಲಿ ಧೋನಿ ಅವರು ಕೂಡ ತಂಡದಿಂದ ಹೊರಗುಳಿಯುವುದು ಉತ್ತಮ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಧೋನಿ ಒಬ್ಬರು. ಆದ್ರೆ, ಅವರಿಗೆ ಈಗ ನಿವೃತ್ತಿ ಸಮಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ನಾನು ನಿನ್ನನ್ನು ಪ್ರೀತಿಸುತ್ತೇನೆ ಆದ್ರೆ, ನೀವು ನಿವೃತ್ತಿ ತೆಗೆದುಕೊಳ್ಳಿ
ಕ್ರಿಕ್ಬಜ್ ಜೊತೆ ಮಾತನಾಡಿದ ಗಿಲ್ಕ್ರಿಸ್ಟ್, ಎಂಎಸ್ ಧೋನಿ ಅವರು ಆಟದಲ್ಲಿ ಇನ್ನೂ ಸಾಧಿಸಬೇಕಾಗಿರುವುದು ಏನು ಇಲ್ಲ. ಅವರು ಸಾಧ್ಯವಿರುವ ಎಲ್ಲವನ್ನೂ ಸಾಧಿಸಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ಏನು ಮಾಡಬೇಕೆಂದು ಅವರಿಗೆ ತಿಳಿದಿದೆ. ಆದರೆ ನಾನು ಸಿಎಸ್ಕೆ ಭವಿಷ್ಯದ ದೃಷ್ಟಿಯಿಂದ ಹೇಳುತ್ತಿದ್ದೇನೆ. ಅವರು ಸಿಎಸ್ಕೆ ತಂಡಕ್ಕೆ ಹೊರೆಯಾಗುತ್ತಿದ್ದಾರೆ. ಹಾಗಾಗಿ ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವುದು ಉತ್ತಮ ಎಂದರು. ಮುಂದುವರೆದು ಮಾತನಾಡಿದ ಅವರು, ‘ನಾನು ನಿನ್ನನ್ನು ಪ್ರೀತಿಸುತ್ತೇನೆ, ಎಂಎಸ್ ನೀವು ಚಾಂಪಿಯನ್, ಐಕಾನ್’ ಆದ್ರೆ, ನೀವು ನಿವೃತ್ತಿ ತೆಗೆದುಕೊಳ್ಳಲು ಇದು ಉತ್ತಮ ಸಮಯ ಎಂದು ಹೇಳಿದರು.
ಸಿಎಸ್ಕೆಗೆ ಗಾಯದ ಮೇಲೆ ಬರೆ
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗಾಯದ ಮೇಲೆ ಬರೆ ಎಂಬಂತೆ ಇಡೀ ತಂಡದಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇದ್ದ ನಾಯಕ ರುತುರಾಜ್ ಗಾಯಕ್ವಾಡ್ ಅವರು ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದರು. ಆ ಬಳಿಕ ನಾಯಕತ್ವವನ್ನು ಎಂಎಸ್ ಧೋನಿ ವಹಿಸಿಕೊಂಡರು. ಆದ್ರೂ ಕೂಡ ತಂಡದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ.
April 30, 2025 5:28 PM IST