Last Updated:
ಪೆರುಂಕಳಿಯಾಟ ಬಹಳ ಖರ್ಚುವೆಚ್ಚ ಬಯಸುವ ಉತ್ಸವ. ಅನ್ನದಾಸೋಹವೇ ಇದರ ವಿಶೇಷತೆ. ಆದ್ದರಿಂದ ಆದೂರಿನ ಭಗವತಿ ಕ್ಷೇತ್ರದಲ್ಲಿ ನಡೆಯುವ ಪೆರುಂಕಳಿಯಾಟ ಉತ್ಸವಕ್ಕೆಂದು ಒಂದು ವರ್ಷಕ್ಕಿಂತ ಮೊದಲೇ ಗದ್ದೆಯಲ್ಲಿ ಬೆಳೆ, ತರಕಾರಿಯನ್ನು ಬೆಳೆಯಲಾಗಿತ್ತಂತೆ.
ದಕ್ಷಿಣ ಕನ್ನಡ: ಕೇರಳ- ಕರ್ನಾಟಕ ಗಡಿ ಪ್ರದೇಶ ಆದೂರು ಶ್ರೀಭಗವತಿ ಕ್ಷೇತ್ರದಲ್ಲಿ(Aduru Bhagawati Kshetra) ಬರೋಬ್ಬರಿ 351ವರ್ಷಗಳ ಬಳಿಕ ಪೆರುಂಕಳಿಯಾಟ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು. ಮೋಯ ಸಮುದಾಯಕ್ಕೆ ಸೇರಿರುವ 11 ಭಗವತಿ ಸ್ಥಾನಗಳಲ್ಲಿ ಆದೂರು ಭಗವತಿ ಕ್ಷೇತ್ರವೂ ಒಂದು. ಸಾಮಾನ್ಯವಾಗಿ ಭಗವತಿ ಕ್ಷೇತ್ರಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಉತ್ಸವವನ್ನು ನಡಾವಳಿ ಎನ್ನಲಾಗುತ್ತದೆ. ಅದೇ ರೀತಿ ತೆಯ್ಯಂ ಕಟ್ಟಿ ಉತ್ಸವ ನಡೆಯುವ ಭಗವತಿ ಕ್ಷೇತ್ರಗಳಲ್ಲಿ ವರ್ಷಂಪ್ರತಿ ಕಳಿಯಾಟ ನಡೆಯುತ್ತದೆ. ಇದೇ ಕಳಿಯಾಟ ವಿಶೇಷ ಸಂದರ್ಭಗಳಲ್ಲಿ, ಸಂಕಲ್ಪವಿದ್ದ ಸಂದರ್ಭಗಳಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಅದನ್ನು ಪೆರುಂಕಳಿಯಾಟ ಮಹೋತ್ಸವ(Perumkaliyattam Celebration) ಎನ್ನುತ್ತಾರೆ. ಹಿರಿಯ ನಡಾವಳಿ ಉತ್ಸವ ಅಥವಾ ಮಹಾನಡಾವಳಿ ಎಂಬರ್ಥದಲ್ಲಿ ಪೆರುಂಕಳಿಯಾಟ ಎನ್ನಲಾಗುತ್ತದೆ.
ಪೆರುಂಕಳಿಯಾಟ ಬಹಳ ಖರ್ಚುವೆಚ್ಚ ಬಯಸುವ ಉತ್ಸವ. ಅನ್ನದಾಸೋಹವೇ ಇದರ ವಿಶೇಷತೆ. ಆದ್ದರಿಂದ ಆದೂರಿನ ಭಗವತಿ ಕ್ಷೇತ್ರದಲ್ಲಿ ನಡೆಯುವ ಪೆರುಂಕಳಿಯಾಟ ಉತ್ಸವಕ್ಕೆಂದು ಒಂದು ವರ್ಷಕ್ಕಿಂತ ಮೊದಲೇ ಗದ್ದೆಯಲ್ಲಿ ಬೆಳೆ, ತರಕಾರಿಯನ್ನು ಬೆಳೆಯಲಾಗಿತ್ತಂತೆ. ಅದಕ್ಕಿಂತಲೂ ದುಪ್ಪಟ್ಟು ಹೊರೆಕಾಣಿಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಆದೂರಿನ ಭಗವತಿ ಕ್ಷೇತ್ರದಲ್ಲಿ ಜನವರಿ 19ರಿಂದ 24ರವರೆಗೆ ಪೆರುಂಕಳಿಯಾಟ ನಡೆದು, ಇಂದಿಗೆ ಸಂಪನ್ನಗೊಂಡಿದೆ.
ಇದನ್ನೂ ಓದಿ: Special Marriage: ಫ್ರಾನ್ಸ್ ದೇಶದ ವಧುವಿಗೆ ಭಾರತೀಯನೇ ವರ- ಗೋಕರ್ಣದಲ್ಲಿ ಸಪ್ತಪದಿ ತುಳಿದ ಅಪರೂಪದ ಜೋಡಿ!
ಕೆಲವೊಂದು ಕಡೆಗಳಲ್ಲಿ ಒಂದು ತಿಂಗಳ ಕಾಲ ಪೆರುಂಕಳಿಯಾಟ ನಡೆಯೋದಿದೆ. ಪೆರುಂಕಳಿಯಾಟದ ಸಂದರ್ಭ ನಿರಂತರ ಅನ್ನದಾಸೋಹ ನಡೆಯಬೇಕೆಂಬ ಕಟ್ಟುಪಾಡಿದೆ. ಅಲ್ಲದೆ ಪ್ರಧಾನ ದೈವಕ್ಕೆ ಪೆರುಂಕಳಿಯಾಟ ಆಗುವ ಮೊದಲು ಆ ಸೀಮೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಪೆರುಂಕಳಿಯಾಟದ ಹಿನ್ನೆಲೆಯಲ್ಲಿ ಪೂಜೆ ನಡೆಯಬೇಕು. ಜೊತೆಗೆ ಆ ಸೀಮೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೈವಸ್ಥಾನಗಳ ತುಳು-ಮಲಯಾಳಂ ದೈವಗಳಿಗೆ ಪೆರುಂಕಳಿಯಾಟ ನಡೆಯುವ ಸ್ಥಳದಲ್ಲಿಯೇ ಕೋಲ ನಡೆಯಬೇಕು.
ಒಂದು ಪೆರುಂಕಳಿಯಾಟ ನಡೆಯುವ ಸ್ಥಳದಲ್ಲಿ ಸಾವಿರದೊಂದು ದೈವಗಳಿಗೆ ನರ್ತನ ಸೇವೆ ನಡೆಯಬೇಕೆಂಬ ನಂಬಿಕೆಯಿದೆ. ಆದ್ದರಿಂದ ಭಾರೀ ಖರ್ಚುವೆಚ್ಚ ಬಯಸುವ ಹಿನ್ನೆಲೆಯಲ್ಲಿ ಪೆರುಂಕಳಿಯಾಟ ನಡೆಯುವುದಕ್ಕೆ ವರ್ಷಾನುಗಟ್ಟಲೆ ಸಮಯ ತಗಲುತ್ತದೆ. ಅದೇ ಕಾರಣದಿಂದ ಆದೂರು ಕ್ಷೇತ್ರದಲ್ಲಿ ಪೆರುಂಕಳಿಯಾಟ ನಡೆಯಲು 351ವರ್ಷಗಳೇ ಬೇಕಾಯ್ತು.
Dakshina Kannada,Karnataka
January 25, 2025 3:33 PM IST