Last Updated:
ಮೂರ್ತಿ ತಯಾರಿಗೆ ಬೇಕಾದ ಮಣ್ಣಿನ ಸಹಿತ ಎಲ್ಲವನ್ನೂ ಬಂಗಾಳದಿಂದಲೇ ತರಲಾಗುತ್ತದೆ. ಮೂರ್ತಿಯ ಮೇಲಿನ ಪದರಕ್ಕೆ ವಿಶೇಷವಾಗಿ ಗಂಗಾನದಿಯ ಉತ್ತಮವಾದ ಜೇಡಿಮಣ್ಣಿನಿಂದಲೇ ಫಿನಿಶಿಂಗ್ ಟಚ್ ಕೊಡಲಾಗುತ್ತದೆ.
ಎಲ್ಲಿಯ ಕೊಲ್ಕತ್ತಾ(Kolkata) ಎಲ್ಲಿಯ ಕುಡ್ಲ(Kudla). ಆದರೂ ಕುಡ್ಲದಲ್ಲಿ ನಡೆಯುತ್ತೆ ಬಂಗಾಳಿಗಳ ದುರ್ಗಾಪೂಜೆ(Durga Puja). ಇಲ್ಲಿ ದುರ್ಗೆಯ ಮೂರ್ತಿಯನ್ನು ರಚಿಸಿ ವೈಶಿಷ್ಟ್ಯಪೂರ್ಣವಾಗಿ ಬಂಗಾಳಿಗಳಿಂದ ದಸರಾ ಮಹೋತ್ಸವ(Dasara Festival) ಆಚರಣೆಗೊಳ್ಳುತ್ತದೆ.
ಹೌದು… ನಗರದ ಮಣ್ಣಗುಡ್ಡದ ಹಿಂದಿ ಪ್ರಚಾರ ಸಭಾಭವನದಲ್ಲಿ ಶ್ರೀದುರ್ಗಾಪೂಜಾ ಕಮಿಟಿಯಿಂದ ದುರ್ಗಾಪೂಜೆ ನಡೆಯುತ್ತಿದೆ. ಉದ್ಯೋಗ, ಉದ್ಯಮ ನಿಮಿತ್ತ ಮಂಗಳೂರಿನಲ್ಲಿ ಸಾಕಷ್ಟು ಬಂಗಾಳಿಗಳು ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ದಸರಾ ಸಂದರ್ಭ ಮಂಗಳೂರಿನಲ್ಲಿಯೇ ದುರ್ಗಾಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಈ ಬಾರಿ 41ನೇ ವರ್ಷದ ದುರ್ಗಾಪೂಜೆ ನಡೆಯಿತು.
ಇದನ್ನೂ ಓದಿ: Uttara Kannada: ಮುಂಡಗೋಡಿನ ಗೌಳಿ ಸಮುದಾಯದವರ ದೈವಾರಾಧನೆ ಇತರರಿಗಿಂತ ವಿಭಿನ್ನ!
ಬಂಗಾಳಿಗಳ ಪ್ರಕಾರ ಮಾ ದುರ್ಗೆಯ ಮಕ್ಕಳೇ ಲಕ್ಷ್ಮೀ-ಸರಸ್ವತಿ, ಹಾಗೂ ಗಣೇಶ-ಸುಬ್ರಹ್ಮಣ್ಯರು. ದಾನವ ಮಹಿಷನ ಮರ್ದಿಸಲು ಈ ಮಕ್ಕಳು ದುರ್ಗೆಗೆ ಸಹಕರಿಸುತ್ತಾರಂತೆ. ಅದಕ್ಕಾಗಿ ದಸರಾ ಸಂದರ್ಭ 10ಕೈಗಳು ಹೊಂದಿರುವ ದುರ್ಗೆಯೊಂದಿಗೆ ಲಕ್ಷ್ಮೀ-ಸರಸ್ವತಿ, ಹಾಗೂ ಗಣೇಶ-ಸುಬ್ರಹ್ಮಣ್ಯರು ಸೇರಿ 5 ಮೂರ್ತಿಗಳಿಗೆ ಆರಾಧನೆ ನಡೆಯುತ್ತದೆ. ಈ ಮೂರ್ತಿಗಳ ತಯಾರಿಕೆಗೆ ಬಂಗಾಳದಿಂದಲೇ ಜನ ಬರುತ್ತಾರೆ. ಮೂರ್ತಿ ತಯಾರಿಗೆ ಬೇಕಾದ ಮಣ್ಣಿನ ಸಹಿತ ಎಲ್ಲವನ್ನೂ ಬಂಗಾಳದಿಂದಲೇ ತರಲಾಗುತ್ತದೆ. ಮೂರ್ತಿಯ ಮೇಲಿನ ಪದರಕ್ಕೆ ವಿಶೇಷವಾಗಿ ಗಂಗಾನದಿಯ ಉತ್ತಮವಾದ ಜೇಡಿಮಣ್ಣಿನಿಂದಲೇ ಫಿನಿಶಿಂಗ್ ಟಚ್ ಕೊಡಲಾಗುತ್ತದೆ.
ಬಂಗಾಳಿಗಳಲ್ಲಿ ನವರಾತ್ರಿಯ ಕಲ್ಪನೆಯಿಲ್ಲ. ಆದ್ದರಿಂದ ಇವರ ದುರ್ಗಾಪೂಜೆ ಕೇವಲ ಐದೇ ದಿನಗಳ ಕಾಲ ನಡೆಯುತ್ತದೆ. ದೇವಿಗೆ ಹಾಗೂ ಇತರ ಮೂರ್ತಿಗಳಿಗೆ ಅದ್ಭುತವಾಗಿ ಅಲಂಕಾರ ಮಾಡಿ ಸಿಹಿತಿನಿಸು, ಹಣ್ಣುಹಂಪಲು, ವಿವಿಧ ಖಾದ್ಯ, ಭಕ್ಷ್ಯಗಳನ್ನು ಅರ್ಪಿಸಿ ಪೂಜೆ ನೆರವೇರಿಸುತ್ತಾರೆ. ವಿಜಯದಶಮಿಯಂದು ವೈಭವಯುತವಾಗಿ ಮೆರವಣಿಗೆ ಮಾಡಿ ಸುಲ್ತಾನ್ಬತ್ತೇರಿಯ ನದಿಯಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ.
ಒಟ್ಟಿನಲ್ಲಿ ಮಂಗಳೂರು ಕೂಡಾ ಬಂಗಾಲದ ದುರ್ಗಾಪೂಜೆಗೆ ಸಾಕ್ಷಿಯಾಗುತ್ತಿರುವುದು ವಿಶೇಷವೆನಿಸಿದೆ.
Dakshina Kannada,Karnataka
October 16, 2024 2:23 PM IST