Last Updated:
ಮಂಗಳೂರು-ಪುತ್ತೂರು ನಡುವೆ ತಡೆರಹಿತ ‘ಪುತ್ತೂರು ಎಕ್ಸ್ಪ್ರೆಸ್’ ಬಸ್ ಸಂಚಾರ ಜು.14ರಿಂದ ಆರಂಭ. 52 ಕಿ.ಮೀ. ದೂರವನ್ನು 1 ಗಂಟೆಯಲ್ಲಿ ಕ್ರಮಿಸಲಿದೆ. 500 ಕೋಟಿ ಶಕ್ತಿ ಯೋಜನೆಯ ಯಶಸ್ಸಿನ ಹಿನ್ನಲೆಯಲ್ಲಿ ಈ ಸೇವೆ.
ದಕ್ಷಿಣಕನ್ನಡ: ಮಂಗಳೂರು(Mangaluru)ಜನರಿಗೆ ಬೊಂಬಾಟ್ ಸುದ್ದಿಯೊಂದು ಕಾದಿದೆ, ಈಗ ಈ ಬಸ್(Bus) ಗಳಿಂದ ನಿಮ್ಮ ಓಡಾಟ ಮತ್ತೂ ಸುಲಭವಾಗಲಿದೆ. ಸುಮಾರು ಐವತ್ತು ಕಿಲೋ ಮೀಟರ್ ಗೆ ಸಾದಾ ಬಸ್ಸುಗಳು ತಾಸುಗಟ್ಟಲೆ ಸಮಯ ತಗೋತಿದ್ವು. ಆದರೆ ಈಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಡುವೆ ಬಹುನಿರೀಕ್ಷಿತ ತಡೆರಹಿತ ಕೆಎಸ್ಆರ್ಟಿಸಿ ಎಕ್ಸ್ಪ್ರೆಸ್(Express Bus)ಬಸ್ ಸಂಚಾರ ಜು.14ರಿಂದ ಆರಂಭಗೊಂಡಿದೆ. ಈ ತಡೆರಹಿತ ಬಸ್ಗಳು ಕಲ್ಲಡ್ಕ, ಮೆಲ್ಕಾರ್ ಹಾಗೂ ಬಿ.ಸಿ.ರೋಡ್ ಮೇಲ್ಲೇತುವೆ ಮೂಲಕ ಸಂಚರಿಸಿ 52 ಕಿ.ಮೀ. ದೂರವನ್ನು ಕೇವಲ ಒಂದು ಗಂಟೆ ಅವಧಿಯಲ್ಲಿ ಕ್ರಮಿಸಲಿವೆ. ಈ ತಡೆರಹಿತ ಸಂಚಾರಕ್ಕೆ(Non-Stop) ‘ಪುತ್ತೂರು ಎಕ್ಸ್ಪ್ರೆಸ್‘ ಎಂದು ನಾಮಕರಣ ಮಾಡಲಾಗಿದ್ದು, ರಾಜ್ಯ ಸರಕಾರದ ಶಕ್ತಿ ಯೋಜನೆಯಡಿ 500 ಕೋಟಿ ಸಲ ಮಹಿಳೆಯರು ಪ್ರಯಾಣಿಸಿದ ಸಂಭ್ರಮದ ಹಿನ್ನಲೆಯಲ್ಲಿ ಈ ನೂತನ ಸೇವೆಯನ್ನು ಆರಂಭಿಸಿಲಾಗಿದೆ.
ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ಪ್ರತಿ 20 ನಿಮಿಷಕ್ಕೊಮ್ಮೆ ಪುತ್ತೂರು ಹಾಗೂ ಸ್ಟೇಟ್ ಬ್ಯಾಂಕ್ನಿಂದ ಪುತ್ತೂರು ಎಕ್ಸ್ಪ್ರೆಸ್ ಸಂಚಾರ ನಡೆಸಲಿದೆ. ಸ್ಟೇಟ್ ಬ್ಯಾಂಕ್ನಿಂದ ಪುತ್ತೂರಿಗೆ ಸಂಜೆ 6.20 ಕ್ಕೆ ಕೊನೆ ಸಂಚಾರ ಇರಲಿದೆ.
ಪ್ರಯಾಣಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಗಮ್ಯಸ್ಥಾನ ಬೇಗನೆ ತಲುಪುವ ಉದ್ದೇಶದಿಂದ ಪುತ್ತೂರು ಎಕ್ಸ್ಪ್ರೆಸ್ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಇಂದಿನಿಂದ ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಸರಕಾರದ ಶಕ್ತಿ ಯೋಜನೆಯ ಬಳಿಕ ಈ ರೂಟ್ ನಲ್ಲಿ ಸಂಚರಿಸುವ ಬಸ್ ಗಳಲ್ಲಿ ಎಲ್ಲಾ ಸಮಯದಲ್ಲೂ ವಿಪರೀತ ಪ್ರಯಾಣಿಕರ ಒತ್ತಡ ಇದ್ದ ಹಿನ್ನಲೆಯಲ್ಲಿ ಈ ಬಸ್ ಸಂಚಾರವನ್ನು ಅರಂಭಿಸಲಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಬಸ್ ಗಳನ್ನೇ ಉಪಯೋಗಿಸುತ್ತಿರುವ ಕಾರಣಕ್ಕಾಗಿ ಪುರುಷ ಪ್ರಯಾಣಿಕರಿಗೆ ಹಲವು ಸಂದರ್ಭಗಳಲ್ಲಿ ಕಿರಿಕಿರಿಯಾಗುತ್ತಿತ್ತು. ಈ ಕಾರಣಕ್ಕೆ ಸ್ಪೆಷಲ್ ಬಸ್ ಓಡಿಸಬೇಕು ಎನ್ನುವ ಒತ್ತಾಯದಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ಸೂಚನೆಯ ಮೇರೆಗೆ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗೀಯ ಕಛೇರಿ ಈ ಸೇವೆಯನ್ನು ಆರಂಭಿಸಿದೆ.
ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲರಿಗೆ ಬೇಗನೆ ತೆರಳಲು ಅನುಕೂಲವಾಗಲು ಪುತ್ತೂರು ಎಕ್ಸ್ಪ್ರೆಸ್ನ್ನು ಆರಂಭಿಸಲಾಗುತ್ತಿದೆ. ವಿದೇಶದಲ್ಲಿ ಸರ್ಕಾರಿ ವಾಹನವನ್ನೇ ಓಡಾಟಕ್ಕೆ ಬಳಸುತ್ತಾರೆ, ನಾವು ಕೂಡ ಸ್ವಂತ ವಾಹನ ಬದಲು ಬಸ್ನಲ್ಲೇ ಪ್ರಯಾಣಿಸುವ ಮೂಲಕ ಸಮಯ ಉಳಿತಾಯವಲ್ಲದೆ, ಮಾಲಿನ್ಯಮುಕ್ತ ಪರಿಸರಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ಜನತೆ ಈ ಸೌಲಭ್ಯದ ಸದ್ಬಳಕೆ ಮಾಡಬೇಕು ಎನ್ನುವ ಉದ್ದೇಶ ಈ ಸೇವೆಯ ಹಿಂದಿದೆ ಅನ್ನೋದು ಶಾಸಕ ಅಶೋಕ್ ಕುಮಾರ್ ರೈ ಅಭಿಪ್ರಾಯವಾಗಿದೆ.
ಬಸ್ ನಿಲುಗಡೆ ಹೀಗಿರಲಿದೆ.
ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಹೊರಡುವ ಈ ಬಸ್ ಕೋರ್ಟ್ ರಸ್ತೆ, ಪೊಲೀಸ್ ಸ್ಟೇಷನ್, ಬೊಳುವಾರು ಹಾಗೂ ನಗರದಲ್ಲಿ ಮಾತ್ರ ನಿಲುಗಡೆ ಇರುತ್ತದೆ, ಬಳಿಕ ಪಡೀಲ್, ಪಂಪ್ವೆಲ್, ಕಂಕನಾಡಿ, ಜ್ಯೋತಿ ಅಂಬೇಡ್ಕರ್ ಸರ್ಕಲ್, ಆರ್ಟಿಒ ಬಳಿಕ ಸ್ಟೇಟ್ ಬ್ಯಾಂಕ್ನಲ್ಲಿ ನಿಲುಗಡೆ ಇರುತ್ತದೆ. ಟಿಕೆಟ್ ಪ್ರಯಾಣ ದರ 71 ರೂ. ಆಗಿದ್ದು, ಚಾಲಕ ಕಂ ನಿರ್ವಾಹಕ (ಡಿಕಂಸಿ) ಒಬ್ಬರೇ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಬಸ್ಗೆ ಎಲ್ಲ ಬಗೆಯ ಪಾಸುಗಳು ಅನ್ವಯವಾಗುತ್ತದೆ ಎಂದು ವಿಭಾಗೀಯ ಸಂಚಾರ ನಿಯಂತ್ರಕ ಜೈಶಾಂತ್ ತಿಳಿಸಿದ್ದಾರೆ.
Mangalore,Dakshina Kannada,Karnataka
July 15, 2025 10:35 AM IST