Last Updated:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ‘ಕೆಸರುಡೊಂಜಿ ದಿನ’ ಕಾರ್ಯಕ್ರಮ ಮಳೆಗಾಲದಲ್ಲಿ ನಡೆಯುತ್ತದೆ. ಗ್ರಾಮಸ್ಥರು ಜಾತಿ-ಮತ ಭೇದವಿಲ್ಲದೆ ಭಾಗವಹಿಸುತ್ತಾರೆ. ಬಂಟ್ವಾಳದ ವಾರಣಾಸಿ ಫಾರ್ಮ್ ನಲ್ಲಿ ಈ ಕಾರ್ಯಕ್ರಮ ಪ್ರಸಿದ್ಧ.
ದಕ್ಷಿಣ ಕನ್ನಡ: ಒಂದು ಕಡೆ ಬಿಟ್ಟೂ ಬಿಡದ ಮಳೆ, ಇತ್ತ ಯಾವುದರ ಲಕ್ಷ್ಯವೂ ಇರದೇ ನಡೆಯುತ್ತಿದೆ ಆಟೋಟ. ಕರಾವಳಿಯಲ್ಲಿ (Coastal) ಸುರಿಯುವ ಭಾರೀ ಮಳೆಗೆ (Torrential Rain) ಈ ಭಾಗದ ಜನ ಮಳೆಯಲ್ಲೂ ಒಂದು ರೀತಿಯ ಮನೋರಂಜನೆಯಲ್ಲೂ ತೊಡಗಿಕೊಳ್ಳುತ್ತಾರೆ. ʼಕೆಸರುಡೊಂಜಿ ದಿನʼ (ಕೆಸರಿನಲ್ಲಿ ಒಂದು ದಿನ ) ಎನ್ನುವ ಮನೋರಂಜನಾ (Entertainment) ಕಾರ್ಯಕ್ರಮ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಕೆಸರುಡೊಂಜಿ ದಿನವನ್ನು ಮಳೆಗಾಲದ (Rainy Season) ಜಡಿ ಮಳೆಯ ನಡುವೆ ನಡೆಸುತ್ತಾರೆ.
ಎಳೆಯರಿಂದ ಹಿರಿಯರವರೆಗೆ ಎಲ್ಲಾ ವಯೋಮಾನದವರು ಈ ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸೋದು ಈ ಕಾರ್ಯಕ್ರಮದ ವಿಶೇಷವೂ ಆಗಿದೆ. ಜಾತಿ, ಮೇಲು-ಕೀಳು ಎನ್ನುವ ಭೇಧವಿಲ್ಲದೆ ಗ್ರಾಮದ ಜನರನ್ನೆಲ್ಲಾ ಸೇರಿಸಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇಂತಹುದೇ ಒಂದು ಕಾರ್ಯಕ್ರಮ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ವಾರಣಾಸಿ ಫಾರ್ಮ್ ನಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳಿಂದ ವಾರಣಾಸಿ ಫಾರ್ಮ್ ನಲ್ಲಿ ಈ ಕೆಸರುಡೊಂಜಿ ದಿನವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಕೆಸರಿನಲ್ಲಿ ನಡೆಯುವ ಆಟದ ಜೊತೆಗೆ ಸಾಹಸಮಯ ಆಟಗಳಿಗೂ ಇಲ್ಲಿನ ಕೆಸರುಡೊಂಜಿ ದಿನ ಫೇಮಸ್ ಆಗಿದೆ.
ಭಯ ಬೇಡವೇ ಬೇಡ, ಸುರಕ್ಷೆಯ ಜೊತೆಗೇ ಸೂಪರ್ ಎನ್ನಿಸೋ ಸ್ಪರ್ಧೆಗಳು
ಕೆಸರಿನಲ್ಲಿ ಪುರುಷರಿಗೆ,ಮಹಿಳೆಯರಿಗೆ,ಮಕ್ಕಳಿಗೆ ಹೀಗೆ ವಿವಿಧ ವಯೋಮಾನದವರಿಗೆ ಕೆಸರಿನಲ್ಲಿ ಓಟ, ಕೆಸರಿನಲ್ಲಿ ವಾಲಿಬಾಲ್, ಒಬ್ಬರು ಇನ್ನೊಬ್ಬರನ್ನು ಹೊತ್ತುಕೊಂಡು ಓಡುವ ಸ್ಪರ್ಧೆಯಿದ್ದರೆ, ಸಾಹಸಿಗರಿಗೆ ಇಲ್ಲಿ ನೀರಿನ ಮೇಲೆ ಸುಮಾರು 20 ಮೀಟರ್ ಎತ್ತರದಲ್ಲಿ ಕಟ್ಟಿದ ಹಗ್ಗದಲ್ಲಿ ನಡೆಯುವ ಸ್ಪರ್ಧೆಯನ್ನೂ ನಡೆಸಲಾಗಿದೆ. ಈ ಸಾಹಸ ಕ್ರೀಡೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಬೇಕಾದ ಎಲ್ಲಾ ಸುರಕ್ಷಿತ ವ್ಯವಸ್ಥೆಗಳನ್ನೂ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲಾ ಸ್ಪರ್ಧಿಗಳು ಕೆಸರಿನಲ್ಲಿ ಜಿಗಿದು ,ಕುಪ್ಪಳಿಸಿ ಎಂಜಾಯ್ ಮಾಡಿದ್ದಲ್ಲದೆ, ಮುಂದಿನ ವರ್ಷದ ಕೆಸರುಡೊಂಜಿ ದಿನಕ್ಕೂ ತಾವು ಸಿದ್ಧ ಎನ್ನುವ ಮೆಸೇಜ್ ಅನ್ನೂ ಕಾರ್ಯಕ್ರಮದ ಆಯೋಜಕರಿಗೆ ನೀಡಿದ್ದಾರೆ.
Dakshina Kannada,Karnataka
July 21, 2025 3:34 PM IST