Last Updated:
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸೀಟಿಗಾಗಿ ನಡೆದ ಫೈಟ್ ವಿಚಾರಕ್ಕೆ ಇದೀಗ ಎಫ್ಐಆರ್ (FIR) ದಾಖಲಾಗಿದೆ. ಆರ್ಸಿಬಿ-ಸಿಎಸ್ಕೆ ಪಂದ್ಯದ ವೇಳೆ ನಿಜಕ್ಕೂ ಏನಾಯ್ತು?
ಬೆಂಗಳೂರು (ಮೇ-06): ದೇಶದೆಲ್ಲೆಡೆ ಐಪಿಎಲ್ (IPL) ಫೀವರ್ ಜೋರಾಗಿದೆ. ಮೇ 03ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಬೆಂಗಳೂರು ರಾಯಲ್ ಚಾಲೆಂಜರ್ಸ್ (RCK) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ರೋಚಕ ಪಂದ್ಯ ನಡೆಯಿತು. ಈ ಮ್ಯಾಚ್ ವೀಕ್ಷಿಸಲು ಗಣ್ಯಾತೀಗಣ್ಯರು ಸೇರಿದಂತೆ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಪಂದ್ಯದಲ್ಲಿ ಸಿಎಸ್ಕೆ ಮೇಲೆ ಆರ್ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಅದ್ಭುತ ಮ್ಯಾಚ್ ನೋಡಿ ಆರ್ಸಿಬಿ ಫ್ಯಾನ್ಸ್ ದಿಲ್ ಖುಷ್ ಆಗಿದ್ರು. ಇದರ ನಡುವೆಯೇ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೀಟಿಗಾಗಿ ನಡೆದ ಫೈಟ್ ವಿಚಾರಕ್ಕೆ ಇದೀಗ ಎಫ್ಐಆರ್ (FIR) ದಾಖಲಾಗಿದೆ. ಪಂದ್ಯದ ವೇಳೆ ನಿಜಕ್ಕೂ ಏನಾಯ್ತು?
ಪೊಲೀಸ್ ಅಧಿಕಾರಿ ಮಕ್ಕಳ ಜೊತೆ ಕಿರಿಕ್!
ಆರ್ಸಿಬಿ-ಸಿಎಸ್ಕೆ ಮ್ಯಾಚ್ ನೋಡಲು ಸಿಎಂ ಸಿದ್ದರಾಮಯ್ಯ, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ರು. ಇದೇ ವೇಳೆ ಹಿರಿಯ ಪೊಲೀಸ್ ಅಧಿಕಾರಿ ಮಕ್ಕಳು ಮ್ಯಾಚ್ ನೋಡಲು ಬಂದಿದ್ರು. ಈ ವೇಳೆ ಬಂದ ದಂಪತಿ, ಪೊಲೀಸ್ ಅಧಿಕಾರಿ ಮಕ್ಕಳ ಜೊತೆಯೇ ಸೀಟಿಗಾಗಿ ಕಿರಿಕ್ ತೆಗೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಡೈಮಂಡ್ ಬಾಕ್ಸ್ ನಲ್ಲಿರುವ ಸೀಟಿಗಾಗಿ ಫೈಟ್!
ಎಡಿಜಿಪಿ ದರ್ಜೆ ಅಧಿಕಾರಿ ಮಕ್ಕಳ ಜೊತೆ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ದಂಪತಿ ಕುರ್ಚಿಗಾಗಿ ಕಿರಿಕ್ ತೆಗೆದಿದ್ದಾರೆ ಎನ್ನಲಾಗ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಡೈಮಂಡ್ ಬಾಕ್ಸ್ ನಲ್ಲಿರುವ ಸೀಟಿನ ವಿಚಾರಕ್ಕೆ ಕಿರಿಕ್ ಮಾಡಿದ್ರು ಎನ್ನಲಾಗ್ತಿದೆ.
ಯುವತಿಯನ್ನು ಮುಟ್ಟಿ ಅಸಭ್ಯ ವರ್ತನೆ
ಅವಾಚ್ಯ ಪದ ಬಳಸಿ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ಬೈಯ್ದಿದ್ದಾರಂತೆ. ಅಷ್ಟೇ ಅಲ್ಲದೇ ಬೆದರಿಕೆ ಹಾಕುತ್ತಾ, ಅಸಭ್ಯವಾಗಿ ವರ್ತಿಸಿದ್ದಾರೆಂದು ಮಕ್ಕಳ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮಗಳನ್ನ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ದೂರಿನ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿFIR ಕೂಡ ದಾಖಲಾಗಿದೆ. ಕಿರಿಕ್ ತೆಗೆದ ದಂಪತಿಗೆ ಸಂಕಷ್ಟ ಶುರುವಾಗಿದೆ.
ಆರ್ಸಿಬಿಗೆ ಮೊದಲ ಸ್ಥಾನ
ಮೇ 3ರಂದು ನಡೆದ ಪಂದ್ಯದ ಗೆಲುವು ಆರ್ಸಿಬಿ ಫ್ಯಾನ್ಸ್ಗೆ ಸಖತ್ ಖುಷಿ ಕೊಟ್ಟಿದೆ. 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಸತತ 2 ಬಾರಿ ಸಿಎಸ್ಕೆ ವಿರುದ್ಧ ಗೆದ್ದು ಬೀಗಿದ ಸಾಧನೆ ಮಾಡಿದೆ. ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ನಂ.1 ಸ್ಥಾನಕ್ಕೇರಿದ್ದು, ಪ್ಲೇ ಆಫ್ ಹಾದಿ ಬಹುತೇಕ ಖಚಿತಪಡಿಸಿಕೊಂಡಿದೆ.
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ ಬೆಂಗಳೂರು)
May 06, 2025 10:16 AM IST