ಒಂದು ಕಾಲದಲ್ಲಿ ಎರಡೂ ರಾಷ್ಟ್ರಗಳು ನಿಯಮಿತವಾಗಿ ದ್ವಿಪಕ್ಷೀಯ ಸರಣಿಗಳನ್ನು ಆಡುತ್ತಿದ್ದವು, ಎರಡೂ ಕಡೆಯ ಅಭಿಮಾನಿಗಳಿಗೆ ಮರೆಯಲಾಗದ ಕ್ರಿಕೆಟ್ ನೆನಪುಗಳನ್ನು ಸೃಷ್ಟಿಸುತ್ತಿದ್ದವು. ಪಂದ್ಯ ಎಷ್ಟೇ ಗಂಭೀರ ಹಾಗೂ ಬಿರುಸಿನಿಂದ ಕೂಡಿದ್ದರೂ ಎರಡೂ ದೇಶಗಳ ಆಟಗಾರರು ಒಬ್ಬರಿಗೊಬ್ಬರು ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ ಆಟದ ನಡುವೆ ಮನರಂಜನೆ ಪಡೆದುಕೊಳ್ಳುತ್ತಿದ್ದರು ಎಂಬುದಕ್ಕೆ ಭಾರತದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಹಂಚಿಕೊಂಡಿರುವ ಒಂದು ಘಟನೆಯೇ ಸಾಕ್ಷಿಯಾಗಿದೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಪಾಕಿಸ್ತಾನದ ಮಾಜಿ ವೇಗಿ ಬೌಲರ್ ಶೋಯೆಬ್ ಅಖ್ತರ್ ನಡುವಿನ ಹಾಸ್ಯಮಯ ಘಟನೆಯನ್ನು ನೆನಪಿಸಿಕೊಂಡರು.
ಹಾಸ್ಯದ ಸನ್ನಿವೇಶ ನೆನಪಿಸಿಕೊಂಡ ವೀರೇಂದ್ರ ಸೆಹ್ವಾಗ್, ಕುಡಿದ ಮತ್ತಿನಲ್ಲಿದ್ದ ಶೋಯೆಬ್ ಸಚಿನ್ ಅವರನ್ನು ಮೇಲೆತ್ತಲು ಯತ್ನಿಸಿದರು. ಆದರೆ ಶೋಯೆಬ್ ಹಿಡಿತದಿಂದ ಸಚಿನ್ ಕೆಳಕ್ಕೆ ಬಿದ್ದು ಬಿಟ್ಟರು. ಒಟ್ಟಿನಲ್ಲಿ ಈ ಸನ್ನಿವೇಶ ಆಟಗಾರರಿಗೆ ಮನರಂಜನೆಯನ್ನೊದಗಿಸಿತ್ತು ಹಾಗೂ ಶೋಯೆಬ್ ಇದರಿಂದ ತುಂಬಾ ಹೆದರಿಕೊಂಡಿದ್ದರು ಎಂದು ಸೆಹ್ವಾಗ್ ನೆನಪಿಸಿಕೊಳ್ಳುತ್ತಾರೆ.
ಲಕ್ನೋದಲ್ಲಿ ಭಾರತ ಮತ್ತು ಪಾಕಿಸ್ತಾನಿ ಕ್ರಿಕೆಟಿಗರಿಗಾಗಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ, ಅಖ್ತರ್ ಒಂದು ಬಾರಿ ತುಂಬಾ ಮದ್ಯ ಸೇವಿಸಿ ಸಚಿನ್ ಅವರನ್ನು ಎತ್ತಲು ಪ್ರಯತ್ನಿಸಿದರು. ಆದರೆ, ಸಚಿನ್ ಭಾರವನ್ನು ಶೋಯೆಬ್ಗೆ ತಡೆದುಕೊಳ್ಳಲಾಗಲಿಲ್ಲ, ಮತ್ತು ಇಬ್ಬರೂ ನೆಲಕ್ಕೆ ಬಿದ್ದರು. ಆ ಘಟನೆಯನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ ಎಂದಿದ್ದಾರೆ.
ಈ ಸಮಯದಲ್ಲಿ ಸೆಹ್ವಾಗ್ ಶೋಯೆಬ್ ಅವರನ್ನು ಕಿಚಾಯಿಸುತ್ತಾ ಕೀಟಲೆ ಮಾಡುತ್ತಾ ಸಚಿನ್ಗೆ ಗಾಯಗಳುಂಟಾದರೆ ಶೋಯೆಬ್ ವೃತ್ತಿಜೀವನವೇ ಕೊನೆಯಾಗಬಹುದು ಎಂದು ಹೆದರಿಸಿದ್ದರು. ಎಲ್ಲಿಯಾದರೂ ಸಚಿನ್ ಬಿಸಿಸಿಐಗೆ ದೂರು ನೀಡಿದರೆ ಎಂದು ಹೆದರಿ ಶೋಯೆಬ್ ಅಖ್ತರ್ ಕ್ಷಮೆಯಾಚಿಸಿದ್ದರು.
ನಾನು ಆತನನ್ನು ತುಂಬಾ ಹೆದರಿಸಿಬಿಟ್ಟಿದ್ದೆ ಎಂದು ಸೆಹ್ವಾಗ್ ಹೇಳಿದ್ದು, ನಿನಗೆ ಇನ್ನು ಕ್ರಿಕೆಟ್ ಆಡಲಾಗುವುದಿಲ್ಲ ಏಕೆಂದರೆ ನೀನು ನಮ್ಮ ತಂಡದ ಉತ್ತಮ ಆಟಗಾರನನ್ನೇ ಕೆಳಕ್ಕೆ ಬೀಳಿಸಿದ್ದೀಯಾ, ಆತನಿಗೆ ಗಾಯಗಳುಂಟಾದರೆ ಅದಕ್ಕೆ ನೀನೇ ಹೊಣೆ ಎಂದಿದ್ದೆ. ಇದಾದ ಮೇಲೆ ಸಚಿನ್ ಎಲ್ಲೇ ಹೋದರೂ ಶೋಯೆಬ್ ಹಿಂಬಾಲಿಸುತ್ತಿದ್ದ ಹಾಗೂ ಕ್ಷಮೆ ಕೇಳುತ್ತಿದ್ದ, ಹೆಚ್ಚೆಂದರೆ ಶೋಯೆಬ್ ಸಚಿನ್ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದೂ ಇದೆ. ಈಗಲೂ ನಾನು ಹಾಗೂ ಸಚಿನ್ ಭೇಟಿಯಾದಾಗ ಆ ಸನ್ನಿವೇಶ ನೆನೆದು ನಗುತ್ತಿರುತ್ತೇವೆ ಎಂದಿದ್ದಾರೆ.
ಇದಕ್ಕೂ ಮೊದಲು, ಸ್ಪೋರ್ಟ್ಸ್ಕೀಡಾ ಜೊತೆಗಿನ ಸಂಭಾಷಣೆಯ ಸಂದರ್ಭದಲ್ಲಿ ಅಖ್ತರ್ ಕೂಡ ಈ ಸನ್ನಿವೇಶದ ಬಗ್ಗೆ ಹೇಳಿಕೊಂಡಿದ್ದು ಅಲ್ಲಿ ಏನು ನಡೆಯಿತು ಎಂಬುದನ್ನು ತಿಳಿಸಿದ್ದಾರೆ.
ಸಚಿನ್ರನ್ನು ತಾನು ಎತ್ತಿಕೊಂಡಿದ್ದೆ ಆದರೆ ಅವರು ನನ್ನ ಕೈಯಿಂದ ಜಾರಿದರು, ಸಚಿನ್ ಕೆಳಗೆ ಬೀಳಬೇಕಾಯಿತು, ಅವರಿಗೆ ಗಾಯಗಳೇನು ಆಗಿರಲಿಲ್ಲ ಆದರೆ ನಾನಂತೂ ತುಂಬ ಭಯಭೀತನಾಗಿದ್ದೆ ಎಂದಿದ್ದಾರೆ.
ನನಗೆ ಭಾರತೀಯ ವೀಸಾ ದೊರೆಯುವುದಿಲ್ಲ ಹಾಗೂ ಭಾರತೀಯರು ನನಗೆ ದೇಶದೊಳಕ್ಕೆ ಪ್ರವೇಶಿಸಲು ಬಿಡುವುದಿಲ್ಲ, ಇಲ್ಲವೇ ನನ್ನನ್ನು ಜೀವಂತ ಸುಡಬಹುದು ಎಂದು ಹೆದರಿದ್ದೆ ಎಂದಿದ್ದರು.
ಅಲ್ಲಿ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಕೂಡ ಇದ್ದರು ನೀನು ಏನು ಮಾಡುತ್ತಿದ್ದೀಯಾ ಎಂದು ಕೇಳಿದ್ದರು ಅದಕ್ಕೆ ನಾನು ನಿಜವಾಗಿಯೂ ನಾನು ಬೇಕೆಂದು ಮಾಡಿದ್ದಲ್ಲ, ಆಕಸ್ಮಿಕವಾಗಿ ನಡೆಯಿತು ಎಂದು ಉತ್ತರಿಸಿದ್ದಾಗಿ ಹೇಳಿದ್ದರು. ಒಟ್ಟಿನಲ್ಲಿ ಆ ದಿನ ಅವರೆಲ್ಲರೂ ಶೋಯೆಬ್ ರನ್ನು ಸಾಕಷ್ಟು ಹೆದರಿಸಿಬಿಟ್ಟಿದ್ದರು.
July 12, 2025 11:27 PM IST
Sachin Tendulkar-Akhtar: ಸಚಿನ್ ತೆಂಡೂಲ್ಕರ್ ಎತ್ತಲು ಹೋಗಿ ಬೀಳಿಸಿದ್ದ ಶೋಯೆಬ್ ಅಖ್ತರ್! ನನ್ನ ಕ್ರಿಕೆಟ್ ಕರಿಯರ್ ಮುಗಿಯಿತು ಎಂದು ಹೆದರಿದ್ರಂತೆ ಪಾಕ್ ವೇಗಿ