Last Updated:
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಸಂಭ್ರಮ, ಬ್ರಹ್ಮ ರಥೋತ್ಸವ, ಮಡೆಸ್ನಾನ, ಭದ್ರಾ ತೀರ್ಥದ ಮಹತ್ವ ಹಾಗೂ ಸುಬ್ರಹ್ಮಣ್ಯ ದೇವರ ವರದ ಕಥೆ ಭಕ್ತರನ್ನು ಆಕರ್ಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ (Holy Place) ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಸಂಭ್ರಮ (Celebration) ಮುಗಿಲು ಮುಟ್ಟಿದೆ. ಷಷ್ಠಿಯ ವಾರ್ಷಿಕ ಉತ್ಸವಕ್ಕಾಗಿ ಕ್ಷೇತ್ರ ಸಂಪೂರ್ಣ ಅಲಂಕೃತ ವಾಗಿದೆ. ಷಷ್ಠಿ ಮಹೋತ್ಸವ ಪ್ರಯುಕ್ತ ಮಧ್ಯಾಹ್ನ ಒಂದು ಗಂಟೆಗೆ ದೇವರ ಬ್ರಹ್ಮ ರಥೋತ್ಸವ (Car Festival) ನಡೆದಿದೆ.
ಮಹಾಶೇಷ, ಮಹಾವಿಷ್ಣು, ಸುಬ್ರಹ್ಮಣ್ಯ ಸ್ವಾಮಿಯ ಪ್ರಧಾನ ಸಾನಿಧ್ಯಗಳಿರುವ ಕುಡುಪು ಕ್ಷೇತ್ರದಲ್ಲಿ ಸಾವಿರಾರು ಭಕ್ತರಿಂದ ನಡೆಯುವ ಮಡೆಸ್ನಾನ ಹಾಗೂ ಷಷ್ಠಿ ಮತ್ತು ಕಿರುಷಷ್ಠಿ ದಿನ ನಡೆಯುವ ಮಡೆ ಸ್ನಾನ ಸೇವೆ ವಿಶೇಷವಾಗಿದೆ.
ಕುಡುಪು ಕ್ಷೇತ್ರದ ಹಿನ್ನಲೆಯೇ ವಿಶೇಷ. ಪುತ್ರ ಸಂತಾನವಿಲ್ಲದೆ ದಿಕ್ಕೆಟ್ಟಿದ್ದ ಕೇದಾರನೆಂಬ ಬ್ರಾಹ್ಮಣನಿಗೆ ಸುಬ್ರಹ್ಮಣ್ಯ ದೇವರು ವರವನ್ನು ಕರುಣಿಸಿರುವುದನ್ನು ಕ್ಷೇತ್ರ ಮಹಾತ್ಮೆಯಲ್ಲಿ ಹೇಳಲಾಗಿದೆ. ಮಹಾಶೇಷ, ಮಹಾವಿಷ್ಣು, ಸುಬ್ರಹ್ಮಣ್ಯ ಸ್ವಾಮಿಯು ಲೋಕಕಲ್ಯಾಣಕ್ಕಾಗಿ ತತ್ತಿಯ ರೂಪದಲ್ಲಿ ಬ್ರಾಹ್ಮಣನ ಗರ್ಭದಲ್ಲಿ ಅವತರಿಸುತ್ತಾರೆ. ಆ ಮೊಟ್ಟೆಗಳನ್ನು ಬ್ರಾಹ್ಮಣನು ಕಾಡುಬಳ್ಳಿಗಳಿಂದ ಹಣೆದ ಕುಡುಪು (ಬುಟ್ಟಿ) ಯಲ್ಲಿ ಜೋಪಾನವಾಗಿಟ್ಟು ಪ್ರತಿಷ್ಠೆ ಮಾಡಿದನು. ಆ ಸ್ಥಳದಲ್ಲಿ ಈಗ ಬೃಹತ್ತಾಗಿ ಹುತ್ತ ಬೆಳೆದಿದೆ.
ಇಂದಿಗೂ ಕ್ಷೇತ್ರದ ಭದ್ರಾತೀರ್ಥದಲ್ಲಿ ಮಿಂದು ಪ್ರಾರ್ಥಿಸಿದವರಿಗೆ ಸಂತಾನ ಪ್ರಾಪ್ತಿಯಾಗುವುದು, ಸಕಲ ಖಾಯಿಲೆಗಳೂ ವಾಸಿಯಾಗುತ್ತದೆ. ಅಭೀಷ್ಠೆಗಳು ಕೈಗೂಡುತ್ತದೆ ಎಂಬ ಬಲವಾದ ನಂಬಿಕೆ ಇದೆ. ಈಗಲೂ ಕುಡುಪು ಕ್ಷೇತ್ರದ ವ್ಯಾಪ್ತಿಯ ಪ್ರತೀ ಮನೆಯಲ್ಲೂ ಕಾಡುಬಳ್ಳಿಯಿಂದ ತಯಾರಿಸಿದ ಕುಡುಪು ಇದ್ದು, ಇದು ಸ್ವಾಮಿಯ ನಂಬಿಕೆಯ ಪ್ರತೀಕವಾಗಿದೆ.
ಷಷ್ಠಿಯ ಪ್ರಯುಕ್ತ ಕಳೆಗಟ್ಟಿದ ಕುಡುಪು
ಷಷ್ಠಿಯ ಪ್ರಯುಕ್ತ ಕ್ಷೇತ್ರದಲ್ಲಿ ಇಡೀ ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ನವೆಂಬರ್ 26 ರಿಂದ ಆರಂಭವಾಗುವ ಕಾರ್ಯಕ್ರಮಗಳು ಜನವರಿ ಐದನೇ ತಾರೀಖುವರೆಗೆ ನಡೆಯಲಿದೆ. ಕುಡುಪು ಷಷ್ಠಿ ಮಹೋತ್ಸವಕ್ಕೆ ಸಾವಿರಾರು ಜನ ಭಾಗವಹಿಸುತ್ತಿದ್ದು, ದೇವರ ಕಾರಣಿಕ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಅನಂತ ಪದ್ಮನಾಭ ದೇವರು ನಂಬಿದವರ ಕಷ್ಟವನ್ನು ದೂರಮಾಡುವ ಮಹಾಶಕ್ತಿಯಾಗಿದ್ದು, ಇಂದಿಗೂ ಕಾರಣಿಕದ ಮೂಲಕವೇ ಭಕ್ತರನ್ನು ಸೆಳೆಯುತ್ತಿದೆ.
Dakshina Kannada,Karnataka
November 29, 2025 12:35 PM IST