Last Updated:
ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತುಳುವಿನಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿ, ಯುವಕರಿಗೆ ಅಪರಾಧದಿಂದ ದೂರ ಇರಲು ಮನವಿ ಮಾಡಿದ್ದಾರೆ.
ದಕ್ಷಿಣಕನ್ನಡ: ಹುಟ್ಟಿದ್ದು ಆಂಧ್ರದಲ್ಲಿ, ಬೆಳೆದಿದ್ದೂ ಆಂಧ್ರದಲ್ಲಿ, ಆದರೆ ಇವರು ಮಾಡಿದ್ದು ಮಾತ್ರ ಸಮಸ್ತ ತುಳುನಾಡು ಮೆಚ್ಚುವಂತಹ ಕಾರ್ಯ. ಹಿಂದೆ ಅಣ್ಣಾಮಲೈ ಉಡುಪಿ (Udupi) ಜನರ ಮನಸು ಗೆದ್ದಿದ್ದರು. ಈಗ ಸುಧೀರ್ ಕುಮಾರ್ ರೆಡ್ಡಿಯವರ ಸರದಿ. ಪೊಲೀಸ್ ಕಮಿಷನರ್ ಆದ ಶ್ರೀ ಸುಧೀರ್ ಕುಮಾರ್ ರೆಡ್ಡಿಯವರು ಒಂದು ಸೂಕ್ಷ್ಮ ವಿಚಾರವನ್ನು (Subject) ಎಲ್ಲರಿಗೂ ತಿಳಿಯುವಂತೆ ಹೇಳಲು ಒಂದು ಮಹತ್ವದ ಕಾರ್ಯ ಮಾಡಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಪರಾಧಕ್ಕೆ ಕಾರಣವೇ ಮಾದಕ ವಸ್ತು ಎಂದು ಒಂದು ಮೂಲದಿಂದ ಊಹಿಸಲಾಗಿದೆ. ಒಂದಲ್ಲ ಒಂದು ಮಾದಕ ವಸ್ತುವಿನ ಪ್ರಭಾವದಿಂದಾಗಿ ಅಪರಾಧ ಕೃತ್ಯಗಳು ನಡೆಯುತ್ತಿರುತ್ತವೆ. ಇದು ಕೊಲೆಯಾಗಿರಬಹುದು, ಅತ್ಯಾಚಾರವಾಗಿರಬಹುದು, ದರೋಡೆ, ಕಳ್ಳತನ ಹೀಗೆ ಯಾವುದೇ ಕೃತ್ಯವೂ ಆಗಿರಬಹುದು.
ಮಂಗಳೂರು ಪೋಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಇತ್ತೀಚೆಗೆ ಡ್ರಗ್ಸ್ನಿಂದ ದೂರ ಉಳಿಯುವಂತೆ ಮಾಡಿದ ಮನವಿ ಇದಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಈ ಮನವಿಯನ್ನು ಮಾಡದೆ ಜಿಲ್ಲೆಯ ಆಡುಭಾಷೆ ಎಂದೇ ಗುರುತಿಸಲ್ಪಟ್ಟ ತುಳುವಿನಲ್ಲಿ ಕಮಿಷನರ್ ಈ ಮನವಿಯನ್ನು ಮಾಡಿದ್ದಾರೆ.
ಮಾತೆರಗ್ಲಾ ನಮಸ್ಕಾರ, ಕುಡ್ಲದ ಜವನೆರೇ, ಮೂಲು ನಡಪುನಂಚಿನ ಪೂರಾ ಅಪರಾಧೊಡು ಭಾಗವಹಿಸುನಕುಲು ಪೂರೆರ್ಲಾ ಡ್ರಗ್ಸ್ ದ ಪ್ರಭಾವರ್ದ್ ಅಪರಾಧ ಕೃತ್ಯ ಮಂತೊಂದುಲ್ಲೆರ್. ಈ ಡ್ರಗ್ಸ್ ದ ವ್ಯಸನರ್ದ್ ದೂರ ಇತ್ತ್ಂಡ ಜೀವನ ಪೊರ್ಲಾಪುಂಡು, ಇಲ್ಲ್ ಲಾ ಒರಿವುಂಡು, ಸಂಬಂಧಲಾ ಒರಿಯುಂಡು, ಸಮಾಜಲಾ ಎಡ್ಡೆ ಆಪುಂಡು. ಅಂಚಾದ್ ಪೂರೆರ್ಲಾ ಡ್ರಗ್ಸ್ ವಿರುದ್ಧದ ಹೋರಾಟಡ್ ಪೂರೆರ್ಲಾ ಕೈ ಜೋಡಿಸಾವೊಡು ಹೀಗೆ ತುಳುವಿನಲ್ಲೇ ಮಾತನಾಡಿ ಗಮನಸೆಳೆದಿದ್ದಾರೆ.
ಎಲ್ರಿಗೂ ನಮಸ್ಕಾರ, ಮಂಗಳೂರಿನ ಯುವಕರೇ, ಇಲ್ಲಿ ನಡೆಯುತ್ತಿರುವಂತಹ ಎಲ್ಲಾ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡವರು ಮಾದಕವಸ್ತುವಿನ ಪ್ರಭಾವದಿಂದಲೇ ಅಪರಾಧ ಎಸಗುತ್ತಿದ್ದಾರೆ. ಈ ಮಾದಕ ವ್ಯಸನದಿಂದ ದೂರ ಇದ್ದಲ್ಲಿ ಜೀವನ ಸುಂದರವಾಗುತ್ತದೆ, ಮನೆ ಉಳಿಯುತ್ತದೆ, ಸಂಬಂಧಗಳು ಉಳಿಯುತ್ತವೆ, ಸುಂದರ ಸಮಾಜ ನಿರ್ಮಾಣವಾಗುತ್ತೆ. ಎಲ್ಲರೂ ಈ ಮಾದಕವಸ್ತು ವಿರೋಧಿ ಹೋರಾಟದಲ್ಲಿ ನಮ್ಮ ಜೊತೆಗೆ ಕೈಜೋಡಿಸಿ ಎಂದು ತುಳುವಿನಲ್ಲಿ ಮನವಿ ಮಾಡಿದ್ದಾರೆ.
ಜನ-ಮನ ಗೆದ್ದಿರುವ ಅಧಿಕಾರಿ
Dakshina Kannada,Karnataka