ಅಷ್ಟಮಂಗಲದ ಮೂಲಕ ಸಿಕ್ತು ಪರಿಹಾರ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಒಪ್ಪಿಗೆ! | Puttur Mahalingeshwara Temple Development Approved by Astamangala

ಅಷ್ಟಮಂಗಲದ ಮೂಲಕ ಸಿಕ್ತು ಪರಿಹಾರ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಒಪ್ಪಿಗೆ! | Puttur Mahalingeshwara Temple Development Approved by Astamangala

Last Updated:

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಅಷ್ಟಮಂಗಲದ ಮೂಲಕ ದೇವರ ಅನುಮತಿ ಪಡೆದಿದ್ದಾರೆ. ಭಕ್ತರಿಂದ ಧನಸಂಗ್ರಹ ಮಾಡಿ ಜೀರ್ಣೋದ್ಧಾರ ನಡೆಸಲು ತೀರ್ಮಾನಿಸಲಾಗಿದೆ.

X

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಅಷ್ಟಮಂಗಲ ಒಂದು ದೈವೀಕ ಪ್ರಕ್ರಿಯೆ. ಮೊದಲು ಕೇರಳದ ತಲಸ್ಸೆರಿ ಕುಟುಂಬಕ್ಕೆ ಸೀಮಿತವಾಗಿದ್ದ ಈ ಪ್ರಕ್ರಿಯೆ ತುಳುನಾಡಿನ ವೈದಿಕರೂ ತಿಳಿದುಕೊಂಡು ಲೋಕ ಪ್ರಖ್ಯಾತವಾಗಿದೆ. ಈಗಂತೂ ದೇವಾಲಯದ (Temple) ಪ್ರಮುಖ ವಿಷಯಗಳಿಗೆ ಅಷ್ಟಮಂಗಲದ ಅಗತ್ಯವಿದೆ. ಅಂತೆಯೇ ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ (Develpment) ಕಾಮಗಾರಿಗಳಿಗೆ ದೇವರ ಒಪ್ಪಿಗೆ ಇದೆಯೇ? ಎನ್ನುವುದನ್ನು ಪ್ರಶ್ನಿಸಲು ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಲಾಗಿದೆ. ಕಾರ್ಕಳದ ವೇದಮೂರ್ತಿ ನಿಟ್ಟೆ ಪ್ರಸನ್ನಕುಮಾರ್ ಅಷ್ಟಮಂಗಲ ಪ್ರಶ್ನೆಯನ್ನು ಇಡುವ ಮೂಲಕ ಭಕ್ತರ ಮತ್ತು ಆಡಳಿತ ಮಂಡಳಿಯ ಹಲವು ಸಂಶಯಗಳಿಗೆ ಪರಿಹಾರವನ್ನೂ ಪಡೆಯಲಾಗಿದೆ.

ದೇವಸ್ಥಾನದ ಆವರಣದಲ್ಲಿ ದೇಶದ ಬೃಹತ್ ಧ್ವಜ!

ಪುತ್ತೂರು ಶಾಸಕ ಅಶೋಕ್‍ಕುಮಾರ್ ರೈ ನೇತೃತ್ವದಲ್ಲಿ ಈ ಅಭಿವೃದ್ಧಿ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ. ದೇವಸ್ಥಾನದ ಎದುರು ಭಾಗದಲ್ಲಿರುವ ಅಯ್ಯಪ್ಪ ಗುಡಿಯ ಸ್ಥಳಾಂತರ, ನಾಗನ ಕಟ್ಟೆಯನ್ನು ನೆಲ್ಲಿಕಟ್ಟೆ ಬಳಿಯಿರುವ ಮೂಲನಾಗನ ಕಟ್ಟೆಗೆ ಸ್ಥಳಾಂತರ, ವೆಟ್ ವೇಸ್ಟ್ ಗೆ ಪ್ರತ್ಯೇಕ ವ್ಯವಸ್ಥೆ, ದೇಶದ ಬೃಹತ್ ಧ್ವಜ ಅಳವಡಿಕೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಶ್ನೆಯಲ್ಲಿ ಪರಿಹಾರಕ್ಕಾಗಿ ಇಡಲಾಗಿದೆ.

ಈ ಎಲ್ಲಾ ವಿಚಾರಗಳಿಗೆ ಪ್ರಶ್ನೆಯಲ್ಲಿ ಪರಿಹಾರವನ್ನೂ ಕಂಡುಕೊಳ್ಳಲಾಗಿದೆ. ಅಯ್ಯಪ್ಪ ಗುಡಿ ಮತ್ತು ನವಗ್ರಹ ಗುಡಿಯನ್ನು ದೇವಸ್ಥಾನದ ಆವರಣದ ಒಳಗೆ ಇರುವಂತಹ ಶಾರದಾ ಮಂದಿರದ ಪಕ್ಕಕ್ಕೆ ಸ್ಥಳಾಂತರಿಸಲು ಪ್ರಶ್ನೆಯಲ್ಲಿ ಅನುಮತಿ ದೊರೆತಿದೆ.

ಭಕ್ತರ ಕೈಯಿಂದಲೇ ಅಭಿವೃದ್ಧಿಗೆ ಹಣ, ಕಟ್ಟಡಗಳ ನವೀಕರಣ

ಈ ನಡುವೆ ಶಾಸಕ ಅಶೋಕ್ ಕುಮಾರ್ ರೈ ಅಷ್ಟ ಮಂಗಲ ಪ್ರಶ್ನೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಶ್ನೆ ಇಡುವ ವೇದಮೂರ್ತಿಗಳಲ್ಲಿ ದೇವಸ್ಥಾನದ ಮುಂಭಾಗದಲ್ಲಿರುವ ಸಭಾಂಗಣದ ಕಟ್ಟಡವನ್ನು ತೆರವುಗೊಳಿಸಲು ದೇವರ ಅನುಮತಿ ಇದೆಯೇ ಎನ್ನುವ ಪ್ರಶ್ನೆಯನ್ನು ಕೇಳಿದರು. ಆ ಸಂದರ್ಭದಲ್ಲಿ ಅಷ್ಟಮಂಗಳದಲ್ಲಿ ಕಟ್ಟಡ ತೆಗೆಯಲು ಯಾವುದೇ ರೀತಿಯ ತೊಂದರೆ ಇಲ್ಲ, ದೇವರ ಅನುಮತಿ ಇದೆ ಎನ್ನುವ ಉತ್ತರ ಬಂದ ಹಿನ್ನಲೆಯಲ್ಲಿ ಅಭಿವೃದ್ಧಿ ಸಮಯದಲ್ಲಿ ಸಭಾಂಗಣ ಕಟ್ಟಡವನ್ನೂ ತೆರವುಗೊಳಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Dakshina Kannada: ತುಳುನಾಡಿನಲ್ಲಿ ಆಷಾಢಕ್ಕೆ ಅಂಟಿಕೊಂಡ ಆಟಿ ಆಚರಣೆ ಈ ಕಷಾಯ ಪಾನ!

ದೇವಸ್ಥಾನ ಕೆರೆಯ ಕಟ್ಟೆಯನ್ನು ಇನ್ನಷ್ಟು ಎತ್ತರಕ್ಕೇರಿಸಿ ಕೆರೆಯ ನಡುವೆ ಕಾರಂಜಿ ವ್ಯವಸ್ಥೆಯನ್ನೂ ಕೈಗೊಳ್ಳಲು ನಿರ್ಧರಿಸಲಾಗಿದೆ. ಮುಂದಿನ ಕೆಲವೇ ತಿಂಗಳಿನಲ್ಲಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಪ್ರಾರಂಭಗೊಳ್ಳಲಿದ್ದು, ಸರಕಾರದ ಹಣದ ಬದಲಿಗೆ ಹೆಚ್ಚಾಗಿ ಭಕ್ತರ ಮೂಲಕವೇ ಧನಸಂಗ್ರಹ ನಡೆಸಿ ಜೀರ್ಣೋದ್ಧಾರ ನಡೆಸುವ ಸೂಚನೆಯನ್ನು ಶಾಸಕ ಅಶೋಕ್‍ಕುಮಾರ್ ರೈ ತಿಳಿಸಿದ್ದಾರೆ.