Last Updated:
ಮುಂಬೈಗೆ ಕೆಲಸಕ್ಕೆ ತೆರಳಿ 36 ವರ್ಷಗಳ ಬಳಿಕ ಮನೆಗೆ ಮರಳಿದ ಚಂದ್ರಶೇಖರ್, ತಾಯಿಯ ಮಡಿಲು ಸೇರಿದ್ದಾರೆ. ಮಾನಸಿಕ ಆಘಾತದಿಂದ ಬಳಲಿದ ಅವರು, ದೈವದ ಅನುಗ್ರಹದಿಂದ ಮನೆಗೆ ಬಂದಿದ್ದಾರೆ.
ಮಂಗಳೂರು: ಹೊಟ್ಟೆಪಾಡಿಗೆ ಮುಂಬೈಗೆ (Mumbai) ಕೆಲಸಕ್ಕೆ ತೆರಳಿ ಮನೆಯವರ ಸಂಪರ್ಕ ಕಡಿದುಕೊಂಡಿದ್ದ ಮೂಡುಬಿದಿರೆಯ ಇರುವೈಲು ಗ್ರಾಮದ ವ್ಯಕ್ತಿಯೊಬ್ಬರು ಬರೋಬ್ಬರಿ 36 ವರ್ಷಗಳ ಬಳಿಕ ತಾಯಿಯ (Mother) ಮಡಿಲು ಸೇರಿದ್ದಾರೆ. ಇರುವೈಲು ಕೊನ್ನೆಪದವು ಮಧುವನಗಿರಿಯ ಚಂದ್ರು ಯಾನೆ ಚಂದ್ರಶೇಖರ್ 36 ವರ್ಷಗಳ ಬಳಿಕ ಮನೆಗೆ (Home) ಬಂದವರು. ಸಂಕಪ್ಪ ಹಾಗೂ ಗೋಪಿ ದಂಪತಿಯ ಹಿರಿಯ ಪುತ್ರ ಚಂದ್ರಶೇಖರ್ ಅವರು ತಮ್ಮ 25ನೇ ವಯಸ್ಸಿನಲ್ಲಿ ಉದ್ಯೋಗ (Job) ಅರಸಿಕೊಂಡು ಮುಂಬೈಯತ್ತ ತೆರಳಿದ್ದರು. ಆ ಬಳಿಕ ಕೆಲ ತಿಂಗಳು ಪತ್ರದ ಮುಖೇನ ಮನೆಯವರೊಂದಿಗೆ ಸಂಪರ್ಕದಲ್ಲಿದ್ದರು. ಕೆಲ ಸಮಯದ ಬಳಿಕ ಮನೆಯವರೊಂದಿಗೆ ಸಂಪರ್ಕ ಕಡಿದುಕೊಂಡ ಅವರು ಮತ್ತೆ ಎಲ್ಲಿದ್ದಾರೆಂದು ಪತ್ತೆಯೇ ಇರಲಿಲ್ಲ. ಮಾನಸಿಕ ಆಘಾತಗೊಂಡಿದ್ದ ಬಳಿಕ ದೇವಸ್ಥಾನ, ಮಠ, ಮಂದಿರಗಳಲ್ಲಿ ದಿನ ಕಳೆಯುತ್ತಿದ್ದರು ಎನ್ನಲಾಗುತ್ತಿದೆ.
ಮಾನಸಿಕವಾಗಿ ಆಘಾತಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ
ಇವರ ಸ್ಥಿತಿಯನ್ನು ಕಂಡು ಮರುಕಪಟ್ಟು ಮಬೈಯಲ್ಲಿನ ಬಾಲು ಕಾಂಬ್ಳಿ ಎಂಬುವರು ತಮ್ಮ ಮನೆಗೆ ಕರೆದೊಯ್ದು ಆರೈಕೆ ಮಾಡಿ, ಚಿಕಿತ್ಸೆ ಕೊಡಿಸಿದ್ದರು. ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಚಂದ್ರಶೇಖರ್ ಮರಳಿ ಕೆಲಸಕ್ಕೆ ಸೇರಿದ್ದರು. ಜತೆಗೆ ರಾತ್ರಿ ಶಾಲೆಗೆ ಸೇರಿ ಓದು ಮುಂದುವರಿಸಿದ್ದರು. ಆದರೂ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಊರಿಗೂ ಬಂದಿರಲಿಲ್ಲ.
ಮೂರುವರೆ ದಶಕಗಳ ಕಾಲ ಕಾದಿದ್ದ ಹೆತ್ತತಾಯಿ
ಪುತ್ರನಿಗಾಗಿ ಮೂರುವರೆ ದಶಕಗಳ ಕಾಲ ಕಾದಿದ್ದ ಹೆತ್ತತಾಯಿ 2024ರ ಮೇ ತಿಂಗಳಲ್ಲಿ ಮನೆಯಲ್ಲಿ ನಡೆದ ಮಂತ್ರದೇವತೆಯ ದರ್ಶನದಲ್ಲಿ ಪುತ್ರನನ್ನು ಪತ್ತೆ ಮಾಡುವಂತೆ ದೈವದ ಮೊರೆಹೋಗಿದ್ದರು. ಆಗ ಮಂತ್ರದೇವತೆ ದೈವವು ‘ಆತ ಜೀವಂತ ಇದ್ದಾನೆ, ಒಂದು ವರ್ಷದೊಳಗೆ ಮನೆಗೆ ಬರುವಂತೆ ಮಾಡುತ್ತೇನೆ’ ಎಂದು ಅಭಯ ನೀಡಿತ್ತು. ಕೆಲ ದಿನಗಳ ಬಳಿಕ ಮನೆಯವರು ಮುಂಬೈಗೆ ತೆರಳಿ ಅಲ್ಲಿ ಚಂದ್ರಶೇಖರ್ ಆಸರೆ ಪಡೆದಿದ್ದ ಬಾಲು ಕಾಂಬ್ಳಿಯವರ ಮಾಹಿತಿ ಸಂಗ್ರಹಿಸಿ ಹುಡುಕಾಟ ನಡೆಸಿದರು ಪತ್ತೆಯಾಗಿರಲಿಲ್ಲ.
ದೈವದ ಪವಾಡ ಇದು
ಮತ್ತೆ 2025ರ ಮೇ ತಿಂಗಳ ಅಂತ್ಯದಲ್ಲಿ ಇರುವೈಲು ಮಧುವನಗಿರಿಯಲ್ಲಿ ದೈವದ ದರ್ಶನಕ್ಕೆ ದಿನ ನಿಗದಿಯಾಗಿದ್ದು, ಅಂದು ಮತ್ತೆ ದೈವದ ಮೊರೆ ಹೋಗುವುದು ಎಂದು ಮನೆಯವರು ನಿರ್ಧರಿಸಿದ್ದರು. ಆದರೆ ದರ್ಶನಕ್ಕೆ ಮೂರು ದಿನ ಇರುವಾಗಲೇ ಚಂದ್ರಶೇಖರ್ ದಿಢೀರ್ ಎಂದು ಮನೆಗೆ ಬಂದಿದ್ದರು. ಈಗ ಅವರಿಗೆ 60 ವರ್ಷವಾಗಿದೆ.
‘ತಾನು ಮಾನಸಿಕವಾಗಿ ಜರ್ಝರಿತನಾಗಿದ್ದೆ, ಮನೆಮಂದಿಯ ನೆನಪು ಇರಲಿಲ್ಲ. ಮುಂಬೈನ ಹಲವು ದೇವಸ್ಥಾನಗಳನ್ನು ತಿರುಗಾಡಿ ಅಲ್ಲೇ ಉಳಿಯುತ್ತಿದ್ದೆ. ಇತ್ತೀಚೆಗೆ ಮನೆಗೆ ಬರಬೇಕೆಂಬ ಆಸೆ ಉಂಟಾಗಿ ಊರಿಗೆ ಬಂದೆ’ ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಇನ್ನು ಪ್ರತಿ ವರ್ಷ ಮನೆಯಲ್ಲಿ ನಡೆಯುವ ದೈವದ ಕೆಲಸಕ್ಕೆ ಬರುತ್ತೇನೆ ಎಂದಿದ್ದಾರೆ. ಸುಮಾರು ಒಂದು ತಿಂಗಳು ಮನೆಯಲ್ಲಿದ್ದ ಚಂದ್ರಶೇಖರ್ ಜೂನ್ 22ರಂದು ಮುಂಬೈಗೆ ತೆರಳಿದ್ದಾರೆ. ಮನೆಯವರು ಸಂತೋಷದಿಂದಲೇ ಪುತ್ರನನ್ನು ಕಳುಹಿಸಿಕೊಟ್ಟಿದ್ದಾರೆ.
Mangalore,Dakshina Kannada,Karnataka
June 25, 2025 2:13 PM IST