Last Updated:
ಮಳೆಗಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಹಾವುಗಳು ಬಿಸಿ ವಾತಾವರಣ ಹುಡುಕಿಕೊಂಡು ಮನೆ, ಬೈಕ್, ಕಾರುಗಳಲ್ಲಿ ನುಗ್ಗುತ್ತವೆ. ಪುತ್ತೂರಿನಲ್ಲಿ ಬೈಕ್ ಗೆ ನಾಗರಹಾವಿನ ಮರಿಯೊಂದು ನುಗ್ಗಿದ್ದು, ಉರಗತಜ್ಞ ತೇಜಸ್ ಬನ್ನೂರು ರಕ್ಷಣೆ ಮಾಡಿದ್ದಾರೆ.
ದಕ್ಷಿಣ ಕನ್ನಡ: ಮಳೆಗಾಲ (Monsoon Rains) ಬಂತೆಂದರೆ ಕೇವಲ ನೀರಿನ ಸಮಸ್ಯೆ ಮಾತ್ರವಲ್ಲ, ಕೆಲವೊಮ್ಮೆ ಅದಕ್ಕಿಂತ ಅಪಾಯಕಾರಿ ಅತಿಥಿ ಮನೆಯೊಳಗೆ, ಬೈಕೊಳಗೆ, ಕಾರಿನೊಳಗೆ (Car and Bike) ಹೀಗೆ ಎಲ್ಲೆಂದರಲ್ಲಿ ಬಂದು ಭೀತಿ ಹುಟ್ಟಿಸಬಹುದು. ಹೌದು ಹಾವುಗಳು ಮಳೆ-ಛಳಿಯಿಂದ ಪಾರಾಗಲು, ಬಿಸಿ ವಾತಾವರಣವನ್ನು ಅರಸಿಕೊಂಡು ಎಲ್ಲೆಂದರಲ್ಲಿ ನುಗ್ಗಿ ಜನರ ಪ್ರಾಣಕ್ಕೆ ಕಂಟಕ ತರಬಹುದು. ಈ ಹಾವುಗಳಲ್ಲಿ (Snake) ಕೆಲವೊಂದು ವಿಷವಿಲ್ಲದ ಹಾವುಗಳಿದ್ದರೆ, ಇನ್ನು ಕೆಲವು ವಿಷವಿರುವ ಹಾವುಗಳೂ ಇರುತ್ತವೆ. ಈ ಕಾರಣಕ್ಕಾಗಿಯೇ ಮಳೆಗಾಲದ ಸಮಯದಲ್ಲಿ ಯಾವ ರೀತಿ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಸುಬ್ಬಂದಿಗಳಿಗೆ ಕೆಲಸವಿರುತ್ತೋ, ಅದೇ ರೀತಿಯ ಕೆಲಸ ಉರಗತಜ್ಞರಿಗೂ ಇರುತ್ತದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಕಾಡು,ತೋಟ ಹಾಗೂ ನಗರವನ್ನೂ ಹೊಂದಿರುವ ಪ್ರದೇಶ. ಕೃಷಿತೋಟ ಮತ್ತು ಕಾಡಿನಂಚಿನಲ್ಲಿರುವ ಮನೆಗಳಿಗೆ ಹಾವುಗಳು ಮಳೆಗಾಲದಲ್ಲಿ ಬರೋದು ಸಾಮಾನ್ಯವಾಗಿದ್ದು, ಇತ್ತೀಚೆಗೆ ದಿನಗಳಲ್ಲಿ ನಗರದ ಮಧ್ಯೆಯೂ ಈ ಹಾವುಗಳ ಸಮಸ್ಯೆ ಕಂಡು ಬರುತ್ತಿದೆ. ಪುತ್ತೂರಿನ ಜಿ.ಎಲ್ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ಬೈಕ್ ಒಂದಕ್ಕೆ ನಾಗರಹಾವಿನ ಮರಿಯೊಂದು ನುಗ್ಗಿ ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಜನ ಎಷ್ಟೇ ಪ್ರಯತ್ನ ಪಟ್ಟರೂ ಹಾವಿನ ಮರಿಯನ್ನು ಬೈಕ್ ನಿಂದ ಹೊರಗಡೆ ಓಡಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪುತ್ತೂರಿನ ಉರಗತಜ್ಞ ತೇಜಸ್ ಬನ್ನೂರಿಗೆ ಸ್ಥಳೀಯರು ಕರೆ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಾಗರಹಾವಿನ ಮರಿಯನ್ನು ಹುಡುಕಾಡಿದ ತೇಜಸ್ ಗೆ ಹಾವು ಬೈಕ್ ನ ಹೆಡ್ ಲೈಟ್ ಪಕ್ಕದಲ್ಲಿ ಬೆಚ್ಚನೆ ಕುಳಿತಿರೋದು ಪತ್ತೆಯಾಗಿದೆ. ಆ ವೇಳೆಗಾಗಲೇ ಬೈಕ್ ನ ಎಲ್ಲಾ ಪಾರ್ಟ್ ಗಳನ್ನು ಬಿಡಿಸಿ, ಕೇವಲ ಬೈಕ್ ಅಸ್ತಿಪಂಜರ ಮಾತ್ರ ಕಾಣುವ ಹಂತಕ್ಕೆ ತಲುಪಿತ್ತು.
ಬೈಕ್ ನಿಂದ ನಾಗರಹಾವಿನ ಮರಿಯನ್ನು ತೆಗೆದ ತಕ್ಷಣವೇ ಮನೆಯೊಂದರ ಬೆಡ್ ರೂಂ ಗೆ ನಾಗರಹಾವು ನುಗ್ಗಿದ ಬಗ್ಗೆ ಕರೆ ಬಂದಿದೆ. ಹಾವಿನ ಮರಿಯನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ, ಕರೆ ಬಂದ ಮನೆಗೆ ತೆರಳಿ, ಅಲ್ಲಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಮಳೆಗಾಲದ ಸಮಯದಲ್ಲಿ ಹಾವುಗಳು ಬೆಚ್ಚಗಿನ ವಾತಾವರಣ ಹುಡುಕಿಕೊಂಡು ಹೋಗೋದು ಸಾಮಾನ್ಯ. ಈ ಸಂದರ್ಭದಲ್ಲಿ ಜನರು ಗಾಬರಿಪಡದೆ ಹಾವುಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವ ಕೆಲಸವನ್ನು ಮಾಡಬೇಕು ಎಂದು ತೇಜಸ್ ಬನ್ನೂರು ಮನವಿ ಮಾಡಿದ್ದಾರೆ.
Dakshina Kannada,Karnataka
July 13, 2025 1:45 PM IST