Last Updated:
ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ಸ್ನಾನಘಟ್ಟದ ಬಳಿಯ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಮಳೆಗೆ ಕಸಕಡ್ಡಿ, ಮರದ ದಿಮ್ಮಿಗಳು ಬಂದು ಸೇರಿಕೊಂಡಿತ್ತು. ಇದನ್ನು ಸ್ವಚ್ಛಗೊಳಿಸುವ ಮೂಲಕ ಈ ಸ್ವಯಂಸೇವಕರ ತಂಡ ಜನಮೆಚ್ಚುಗೆಗೆ ಪಾತ್ರವಾಗಿದೆ.
ದಕ್ಷಿಣ ಕನ್ನಡ: ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ (Kukke Subramanya) ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅವರೆಲ್ಲ ಕುಮಾರಧಾರಾ ನದಿಯ (Kumaradhara River) ಸ್ನಾನಘಟ್ಟದಲ್ಲಿ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಹೀಗಾಗಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೇತೃತ್ವದಲ್ಲಿ 40 ಜನರ ತಂಡವು ಸ್ನಾನಘಟ್ಟದ ಬಳಿಯಿರುವ ಕಿಂಡಿ ಅಣೆಕಟ್ಟನ್ನು(Kindi Dam) ಸ್ವಚ್ಛಗೊಳಿಸಿದ್ದಾರೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು ಇಲ್ಲಿನ ಕುಮಾರಧಾರಾ ನದಿಯ ಸ್ನಾನಘಟ್ಟದಲ್ಲಿ ತೀರ್ಥಸ್ನಾನ ಮಾಡಿ ಬಳಿಕ ದೇವರ ದರ್ಶನವನ್ನು ಪಡೆಯುತ್ತಾರೆ. ಹೀಗಾಗಿ ಕುಮಾರಧಾರಾ ನದಿಯ ಸ್ನಾನಘಟ್ಟದ ಬಳಿ ವರ್ಷಪೂರ್ತಿ ನೀರಿರುವಂತೆ ಮಾಡಲು ಸ್ನಾನಘಟ್ಟದ ಬಳಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆಗೆ ಕುಮಾರಧಾರಾ ನದಿ ತುಂಬಿ ಹರಿದಿತ್ತು. ಈ ವೇಳೆ ನದಿ ನೀರಿನಲ್ಲಿ ದೊಡ್ಡ ದೊಡ್ಡ ಮರದ ತುಂಡುಗಳು, ಅಪಾರ ಪ್ರಮಾಣದ ಕಸಕಡ್ಡಿ, ಕಲ್ಲುಗಳು ತೇಲಿಸಿಕೊಂಡು ಬಂದು ಸ್ನಾನಘಟ್ಟದ ಬಳಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿತ್ತು. ಆದ್ರೆ ಇದನ್ನೆಲ್ಲ ತೆರವುಗೊಳಿಸುವ ಕೆಲಸವನ್ನು ಮಾತ್ರ ಯಾರೂ ಮಾಡುತ್ತಿರಲಿಲ್ಲ. ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡಬೇಕಾದ ಇಲಾಖೆಗಳು ನಿರ್ಲಕ್ಷ್ಯ ವಹಿಸಿದ್ದವು.
ಕಿಂಡಿ ಅಣೆಕಟ್ಟು ಕ್ಲೀನಿಂಗ್
ಹೀಗಾಗಿ, ಸುಬ್ರಹ್ಮಣ್ಯದ ಸಾರ್ವಜನಿಕರೇ ಸೇರಿಕೊಂಡು ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿಗಳು, ಕಲ್ಲು, ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದಾರೆ. ಕಿಂಡಿ ಅಣೆಕಟ್ಟನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
40 ಸ್ವಯಂಸೇವಕರ ತಂಡದಿಂದ ಸ್ವಚ್ಛತಾ ಕಾರ್ಯ
ಹೌದು, ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ರವಿ ಕಕ್ಕೆಪದವು ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ನ ಸುಮಾರು 40 ಸ್ವಯಂಸೇವಕರು ಸೇರಿಕೊಂಡು ಕಿಂಡಿ ಅಣೆಕಟ್ಟಿನ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.
ಇದನ್ನೂ ಓದಿ: Uttara Kannada Humanity Story: ಅಪರಿಚಿತನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಭಟ್ಕಳದ ಹಿರಿಯ ಸಿವಿಲ್ ಜಡ್ಜ್!
ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ
ಅಷ್ಟೇ ಅಲ್ಲದೆ, ಈ ತಂಡ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ಪಾರ್ಕಿಂಗ್, ರಸ್ತೆ ಬದಿಗಳಲ್ಲಿನ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸುವುದು ಸೇರಿದಂತೆ ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಸ್ವಚ್ಛತೆ ಕಾಪಾಡುವ ಪ್ರಯತ್ನವನ್ನು ಈ ತಂಡ ಮಾಡುತ್ತಿದೆ.
ಒಟ್ಟಿನಲ್ಲಿ, ಸಾವಿರಾರು ಭಕ್ತರು ಆಗಮಿಸುವ ಸುಬ್ರಹ್ಮಣ್ಯದ ಸ್ವಚ್ಛತೆ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿದ್ರೂ, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ನ ಸ್ವಯಂಸೇವಕರು ಈ ಸ್ವಚ್ಛತಾ ಕಾರ್ಯಕ್ಕೆ ಇಳಿದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Dakshina Kannada,Karnataka
October 30, 2024 12:46 PM IST