Last Updated:
ತುಳುನಾಡಿನ ಆಟಿ ಅಮಾವಾಸ್ಯೆ ದಿನ ಪಾಲೆ ಮರದ ಕೆತ್ತೆಯ ಕಷಾಯ ಕುಡಿದು, ಮೆಂತೆ-ತೆಂಗಿನಕಾಯಿ ಗಂಜಿ ಸೇವಿಸುವುದು ಪ್ರಚಲಿತ. ಮೆಂತೆ ಗಂಜಿ ಪೌಷ್ಟಿಕಾಂಶಭರಿತ, ದೇಹ ತಂಪಾಗಿಸಲು, ರಕ್ತ ಶುದ್ದೀಕರಣಕ್ಕೆ, ಮಧುಮೇಹ ನಿವಾರಣೆಗೆ ಸಹಾಯಕ.
ದಕ್ಷಿಣ ಕನ್ನಡ: ತುಳುನಾಡಿನ ಜನರ ಆಹಾರ ಪದ್ಧತಿ (Diet) ಲೋಕ ಪ್ರಸಿದ್ಧ. ಅದರಲ್ಲೂ ಮಾಸ ಮಾಸಗಳಲ್ಲಿ ಬಂದೊದಗೋ ಕಷಾಯ, ಮೂಡೆ, ಗಂಜಿ, ಪೆಲಕಾಯಿದ ಗಟ್ಟಿಗಳು ರುಚಿಯ ಜೊತೆ ದೇಹಕ್ಕೆ ಹಿತ, ನಾಲಿಗೆಗೆ ರುಚಿ ನೀಡುವಂತಹವು. ಈಗ ತುಳುನಾಡಿನಲ್ಲಿ(Tulunadu) ಆಟಿ ಅಮಾವಾಸ್ಯೆ ದಿನ ಪಾಲೆ (ಹಾಲೆ) ಮರದ ಕೆತ್ತೆಯ ಕಷಾಯ ಸೇವಿಸುವುದು ಎಲ್ಲರಿಗೂ ಗೊತ್ತಿದೆ. ಕಷಾಯ ಕುಡಿದ ಬಳಿಕ ತೆಂಗಿನಕಾಯಿ-ಮೆಂತೆ ಗಂಜಿಯನ್ನು ಸೇವಿಸುವುದು ತುಳುವರ ಕ್ರಮ. ಈ ಮೆಂತೆ-ತೆಂಗಿನಕಾಯಿ ಮಿಶ್ರಿತ ಗಂಜಿ ಎಷ್ಟು ರುಚಿ ಎಂದರೆ ಹಿಂದಿನ ಕಾಲದಲ್ಲಿ ಕೆಲವು ಮಕ್ಕಳು (Children) ಇದರ ಆಸೆಯಿಂದಾಗಿಯೇ ಕಹಿ ಕಹಿ (Bitter) ಕಷಾಯವನ್ನು ಯಾವುದೇ ತಗಾದೆ ಇಲ್ಲದೇ ಕುಡಿಯುತ್ತಿದ್ದರು.
ನಮ್ಮ ಪೂರ್ವಜರು ಋತುಮಾನ ಮತ್ತು ಒಂದಕ್ಕೊಂದು ಪೂರಕವಾಗಿ ರೂಪಿಸಿದ ಎಲ್ಲ ಆಹಾರ ಪದ್ಧತಿಗಳು ವೈಜ್ಞಾನಿಕವಾಗಿಯೇ ಇದ್ದವು ಎನ್ನುವುದಕ್ಕೆ ಮೆಂತೆ ಗಂಜಿಯೂ ಒಂದು ಉದಾಹರಣೆ. ತುಳುನಾಡಿನಲ್ಲಿ ಆಷಾಢವನ್ನು ಆಟಿ ಎಂದು ಕರೆಯುತ್ತಾರೆ. ಆಟಿಯಲ್ಲಿ ತಯಾರಿಸುವ ಈ ಮೆಂತೆ ಗಂಜಿ ಆಟಿ ಗಂಜಿ ಎಂದೂ ಜನಪ್ರಿಯವಾಗಿದೆ. ಮೆಂತೆ ಗಂಜಿಯು ಪೌಷ್ಟಿಕಾಂಶಭರಿತ ಆಹಾರವಾಗಿದ್ದು, ದೇಹವನ್ನು ತಂಪುಗೊಳಿಸಲು ಉಪಯೋಗಿಸಲಾಗುತ್ತದೆ.
ಪಾಲೆದ ಕೆತ್ತೆಯ ಕಷಾಯ ಕಹಿ ಮತ್ತು ಉಷ್ಣ ಅದರ ಜತೆಗೆ ಆಟಿಯಲ್ಲಿ ಆಗಾಗ ತಯಾರಿಸಲಾಗುವ ಕೆಸುವಿನ ಪತ್ತೊಡೆ ಕೂಡಾ ಉಷ್ಣಕರ. ಹೀಗಾಗಿ ಇದೆಲ್ಲದರ ಪರಿಣಾಮವನ್ನು ಸ್ವಲ್ಪ ನಿಯಂತ್ರಣದಲ್ಲಿಡಲು ಆಟಿ ಗಂಜಿಯನ್ನು ಕುಡಿದು ದೇಹ ತಂಪುಗೊಳಿಸಲಾಗುತ್ತಿತ್ತು. ಈಗಲೂ ಆಟಿ ಅಮಾವಾಸ್ಯೆ ದಿನ ಮೆಂತೆ ಗಂಜಿ ಸೇವಿಸುತ್ತಾರೆ. ಇದರ ಮಹತ್ವ ತಿಳಿದು ಬೇರೆ ಕಾಲದಲ್ಲೂ ಬಳಸುತ್ತಿದ್ದಾರೆ.
ಹೆಣ್ಣಿಗೆ ಬೆಸ್ಟ್ ಔಷಧಿ, ಕೊಬ್ಬು ಕರಗಿಸುವ ಖಾದ್ಯ
ಈ ಮೆಂತೆ ಗಂಜಿ ಸೇವಿಸುವುದರಿಂದ ಆಟಿ ಕಷಾಯದ ಉಷ್ಣವನ್ನು ಕಡಿತ ಮೆಂತೆ-ತೆಂಗಿನಕಾಯಿ ಗಂಜಿ ತುಂಬಾ ಒಳ್ಳೆಯದು. ಮೆಂತೆ ಬೀಜಗಳು ವಿಟಮಿನ್ ಬಿ ಯನ್ನು ಯಥೇಚ್ಚವಾಗಿ ಹೊಂದಿವೆ. ರಕ್ತ ಶುದ್ದೀಕರಣಕ್ಕೆ ಉತ್ತಮ.ಮೊಡವೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಗಂಜಿ ಸೇವನೆಯಿಂದ ಮಧುಮೇಹ ಮತ್ತು ಕೊಲೆಸ್ಟರಾಲ್ ಸಮಸ್ಯೆಯೂ ನಿವಾರಣೆ ಆಗುತ್ತದೆ. ಬಾಣಂತಿ ಮಹಿಳೆಯರಲ್ಲಿ ಎದೆಹಾಲು ಕಡಿಮೆ ಇದ್ದಾಗ ಮೆಂತೆ ಗಂಜಿ ಕೊಡಲಾಗುತ್ತದೆ.ಗಂಜಿಗೆ ತೆಂಗಿನ ಹಾಲು ಸೇರಿವುದರಿಂದ ಹೆಚ್ಚುವರಿ ಪರಿಮಳ ಮತ್ತು ಕೂದಲಿನ ಬೆಳವಣಿಗೆಗೂ ಪೂರಕ.ಮೆಂತೆ ಗಂಜಿ, ಕಷಾಯ ಸೇವನೆಯಿಂದ ಹೊಟ್ಟೆ ನೋವು ಕೂಡಾ ನಿವಾರಣೆಯಾಗುತ್ತದೆ.
Disclaimer
ಇಲ್ಲಿ ಔಷಧಿ ಮತ್ತು ಚಿಕಿತ್ಸೆಯ ಕುರಿತಾಗಿ ನೀಡಿರುವ ಎಲ್ಲಾ ಮಾಹಿತಿ ತಜ್ಞರನ್ನು ಸಂಪರ್ಕಿಸಿದ ನಂತರವೇ ನೀಡಲಾಗಿದೆ. ಇದು ಕೇವಲ ಸಾಮಾನ್ಯ ಮಾಹಿತಿಯಾಗಿದ್ದು ವ್ಯಕ್ತಿಗತವಾದ ಸಲಹೆ ಅಲ್ಲ. ಆದ್ದರಿಂದ ಇವುಗಳನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಲೋಕಲ್ 18 ಈ ಮಾಹಿತಿಯ ಬಳಕೆಯಿಂದ ಉಂಟಾದ ಯಾವುದೇ ಹಾನಿ/ನಷ್ಟಕ್ಕೆ ಜವಾಬ್ದಾರರಲ್ಲ.
Dakshina Kannada,Karnataka
July 25, 2025 7:18 AM IST