Last Updated:
ದಕ್ಷಿಣ ಕನ್ನಡ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜು.29 ರಂದು ನಾಗರ ಪಂಚಮಿಯ ವಿಶೇಷ ಕಾರ್ಯಕ್ರಮದಲ್ಲಿ ತುಪ್ಪ ದೀಪ ಸೇವೆ ಪ್ರಥಮ ಬಾರಿಗೆ ಆರಂಭಗೊಂಡಿದೆ.
ದಕ್ಷಿಣ ಕನ್ನಡ: ಒಂದೊಂದು ಊರಲ್ಲಿ ಒಂದೊಂದು ಆಚರಣೆಗಳು ಜಾರಿಯಲ್ಲಿರುತ್ತವೆ. ಅಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ಜನ ಆಚರಣೆಗಳು ಮಾಡುತ್ತಾರೆ. ಅದರಂತೆ ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ (Dakshina Kannada) ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ (Temple) ವಾಸುಕಿ ನಾಗ ಸನ್ನಿಧಿ ಮತ್ತು ಮೂಲ ನಾಗ ಸನ್ನಿಧಿಯಲ್ಲಿ ಜು.29 ರಂದು ನಾಗರ ಪಂಚಮಿಯ (Nagara Panchami) ವಿಶೇಷ ಕಾರ್ಯಕ್ರಮದಲ್ಲಿ ಭಕ್ತರ ಬೇಡಿಕೆಯಂತೆ ದೇವಳದ ಒಳಾಂಗಣದಲ್ಲಿ ಶ್ರೀ ದೇವರಿಗೆ ತುಪ್ಪ ದೀಪ (Ghee Deepa) ಸೇವೆಯು ಪ್ರಥಮ ಬಾರಿಗೆ ಆರಂಭಗೊಂಡಿದೆ. ಜೊತೆಗೆ ಶುದ್ಧ ಕುಂಕುಮ ವಿತರಣೆಯು ಆರಂಭಗೊಂಡಿದೆ.
ಶ್ರೀ ದೇವರ ಬೆಳಗಿನ ಪೂಜೆಯ ಬಳಿಕ ತುಪ್ಪ ದೀಪ ಬೆಳಗಿಸುವ ಮೂಲಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಚಾಲನೆ ನೀಡಿದ್ದಾರೆ. ದೇವಳದ ಪ್ರಧಾನ ಅರ್ಚಕ ವೇದ ಮೂರ್ತಿ ವಸಂತ ಕೆದಿಲಾಯ ಸೇವೆ ಆರಂಭದ ಪ್ರಯುಕ್ರ ವಿಶೇಷ ಪ್ರಾರ್ಥನೆ ನೆರವೇರಿಸಿದ್ದಾರೆ. ಶ್ರೀ ದುರ್ಗಾ ಗುಡಿಯ ಮುಂದೆ ಶುದ್ಧ ಕುಂಕುಮ ಅರ್ಪಣೆ ಸೇವೆಗೂ ಚಾಲನೆ ನೀಡಲಾಗಿದೆ.
ಹೆಚ್ಚಾಗಿ ದೇವಿ ಕ್ಷೇತ್ರಗಳಲ್ಲಿ ಈ ತುಪ್ಪ ದೀಪ ಸೇವೆಯನ್ನು ವಿಶೇಷ ಸೇವೆಯಾಗಿ ಮಾಡಲಾಗುತ್ತದೆ. ಕೇರಳದ ಬಹುತೇಕ ಎಲ್ಲಾ ದೇವಿ ಕ್ಷೇತ್ರಗಳಲ್ಲಿ ಈ ಸೇವೆ ತಲೆತಲಾಂತರಗಳಿಂದ ನಡೆದುಕೊಂದು ಬಂದಿದ್ದು, ಕೇರಳದ ಪ್ರಭಾವಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲೂ ಈ ಸೇವೆಯನ್ನು ನೆರವೇರಿಸಲಾಗುತ್ತಿದೆ.
Dakshina Kannada,Karnataka
July 29, 2025 5:56 PM IST