Last Updated:
ಮಂಗಳೂರಿಗೆ ಟಿ-55 ಯುದ್ಧ ಟ್ಯಾಂಕ್ ಹಾಗೂ 303 ರೈಫಲ್ ಆಗಮಿಸಿದ್ದು, ಕದ್ರಿ ಯುದ್ಧಸ್ಮಾರಕದಲ್ಲಿ ಸ್ಥಾಪನೆಗೊಳ್ಳಲಿದೆ. 1965 ಮತ್ತು 1971ರ ಪಾಕಿಸ್ತಾನ ಯುದ್ಧದಲ್ಲಿ ಬಳಸಿದ ಟ್ಯಾಂಕ್, ಯುವಜನತೆಗೆ ಸೇನೆ ಸೇರುವ ಸ್ಫೂರ್ತಿ ನೀಡಲಿದೆ.
ದಕ್ಷಿಣಕನ್ನಡ: 1965 ರ ಯುದ್ಧ ಹಾಗೆಯೇ 1971 ರ ಯುದ್ಧದ (War) ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ಆದರೆ ಈಗ ಅದರ ಕಥೆ ಹೇಳುವ ಜನ (People) ಸಿಗುವುದು ಕಡಿಮೆ. ಸಾಮಾನ್ಯವಾಗಿ ದೇಶದ ಜನರಿಗೆ ಯುದ್ಧವೆಂದರೆ ಅದೊಂದು ಅಡ್ರಿನಲಿನ್ ರಶ್! ಆ ರೋಚಕತೆಯ ಬಗ್ಗೆ ಈ ಹಿಂದೆಯಷ್ಟೇ ಜನರು ಅನುಭವ ಪಡೆದುಕೊಂಡಿದ್ದಾರೆ. ತ್ಯಾಗ, ರೋಷ, ದೇಶಭಕ್ತಿ ಹಾಗೂ ಕರ್ತವ್ಯದ (Duty) ಸಾರ ತುಂಬಿಕೊಂಡಿರುವ ಯುದ್ಧದ ಒಂದು ಸಣ್ಣ ವಸ್ತುವು ನಮ್ಮ ಕಣ್ಮುಂದೆ ನೋಡಲು ಸಿಕ್ಕರೆ ನಾವು ಅದಕ್ಕೆ ಮಹಾನ್ ಗೌರವ (Respect) ಕೊಡುತ್ತೇವೆ. ಹೀಗೊಂದು ಸದಾವಕಾಶ ಈಗ ಮಂಗಳೂರಿನ ಜನರಿಗೆ ಒಲಿದಿದೆ.
ಕಡಲ ನಗರಿ ಮಂಗಳೂರಿಗೆ ವಿಶೇಷ ಆಕರ್ಷಣೆಯಾಗಿ ಯುದ್ಧ ಟ್ಯಾಂಕ್ (ಟಿ-55) ಹಾಗೂ 303 ರೈಫಲ್ ಆಗಮಿಸಿದೆ. ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿ ಪಡೆದ ಟ್ಯಾಂಕ್ ಮತ್ತಿತರ ಸೇನೆಯ ಆಯುಧಗಳನ್ನು ವಾರ್ ಟ್ರೋಫಿ (ಯುದ್ಧ ಸ್ಮರಣಿಕೆ) ರೀತಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅದೇ ರೀತಿ ಮಂಗಳೂರಿಗೆ ಟ್ಯಾಂಕ್ ಅನ್ನು ನೀಡುವಂತೆ ಸಂಸದ ಕ್ಯಾ|ಬ್ರಿಜೇಶ್ ಚೌಟ ರಕ್ಷಣಾ ಸಚಿವಾಲಯಕ್ಕೆ ಮನವಿ ಮೇರೆಗೆ ಯುದ್ಧ ಟ್ಯಾಂಕ್ ಮಂಗಳೂರು ತಲುಪಿದೆ.
ಮಂಗಳೂರಿನ ಕದ್ರಿ ಯುದ್ಧಸ್ಮಾರಕ ಅಥವಾ ಸರ್ಕಿಟ್ ಹೌಸ್ ಮುಂಭಾಗ ಅಥವಾ ಇತರ ಯೋಗ್ಯ ಸ್ಥಳದಲ್ಲಿ ಟ್ಯಾಂಕ್ ಅನ್ನು ಇರಿಸಲಾಗುವುದು. ಅದಕ್ಕಾಗಿ ಪ್ರತ್ಯೇಕ ವೇದಿಕೆ ನಿರ್ಮಿಸುವ ಕೆಲಸವನ್ನು ಮಹಾನಗರಪಾಲಿಕೆ ಮಾಡಲಿದೆ. ಟಿ-55 ಟ್ಯಾಂಕ್ ಹಿಂದೆ ಯುದ್ಧದಲ್ಲಿ ಬಳಕೆಯಾಗಿದ್ದು, ಸದ್ಯ ಬಳಸುವ ಸ್ಥಿತಿಯಲ್ಲಿಲ್ಲ. ಅಂತಹವುಗಳನ್ನು ದೇಶದ ವಿವಿಧೆಡೆ ಆಸಕ್ತ ಸಂಸ್ಥೆಗಳಿಗೆ ದೇಶದಲ್ಲಿ “ಸ್ಪೂರ್ತಿದಾಯಕ’ವಾಗಿ ಪ್ರದರ್ಶಿಸಲು ನೀಡಲಾಗುತ್ತದೆ. ಅದರಂತೆ ಮೂರು ತಿಂಗಳ ಹಿಂದೆ ಮಹಾನಗರಪಾಲಿಕೆಗೆ ಈ ಟ್ಯಾಂಕರ್ ಅನ್ನು ಉಚಿತವಾಗಿ ನೀಡಲು ರಕ್ಷಣಾ ಇಲಾಖೆ ಒಪ್ಪಿದೆ. ಪುಣೆಯ ಕಿರ್ಕಿ ಎಂಬಲ್ಲಿನ ಡಿಪೋದಿಂದ ಈ ಟಿ-55 ಟ್ಯಾಂಕ್ ತರಲಾಗಿದೆ.
ಭಾರತೀಯರ ಶೌರ್ಯದ ಪ್ರತೀಕ ಈ ಟ್ಯಾಂಕರ್
ಸುಮಾರು 40 ಟನ್ ತೂಕವಿರುವ ಟ್ಯಾಂಕ್ ಇದಾಗಿದ್ದು, ಯುದ್ಧ ಬಳಕೆಯ ಟ್ಯಾಂಕ್ ಮಂಗಳೂರು ಪ್ರವಾಸೋದ್ಯಮಕ್ಕೂ ಆಕರ್ಷಣೆ ತುಂಬಲಿದೆ. ನಗರದಲ್ಲಿ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಲಿದ್ದು, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡುವಂತಹ ಶೆಡ್ ಒದಗಿಸಬೇಕಿದೆ. ಟಿ- 55 ಟ್ಯಾಂಕ್ಗಳನ್ನು 1965 ಹಾಗೂ 1971ರ ಪಾಕಿಸ್ತಾನ ಯುದ್ಧದಲ್ಲಿ ಬಳಸಲಾಗಿತ್ತು. ಸಂಸತ್ತಿಗೆ ಭಯೋತ್ಪಾದಕರ ಆಕ್ರಮಣದ ನಂತರ ನಡೆದ ಆಪರೇಷನ್ ಪರಾಕ್ರಮದಲ್ಲೂ ಈ ಟ್ಯಾಂಕ್ ಭಾಗಿಯಾಗಿದೆ. ಭಾರತದ ಮಿಲಿಟರಿ ಪಡೆಯ ಶೌರ್ಯದ ಪ್ರತೀಕವಾಗಿ ಈ ಟ್ಯಾಂಕ್ಗಳನ್ನು ಪ್ರಸ್ತುತ ವಿವಿಧ ಕಡೆಗಳಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಇದರ ವೀಕ್ಷಣೆಯಿಂದ ಯುವಜನತೆಗೆ ಸೇನೆ ಸೇರುವ ಸ್ಫೂರ್ತಿ ಸಿಗಬೇಕು ಎನ್ನುವುದು ಇದರ ಉದ್ದೇಶ.
Mangalore,Dakshina Kannada,Karnataka
August 11, 2025 10:30 AM IST