Last Updated:
ಸಜ್ಲ ಇಸ್ಮಾಯಿಲ್, ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ವಿದ್ಯಾರ್ಥಿನಿ, 5 ವರ್ಷಗಳ ಪರಿಶ್ರಮದಿಂದ 30 ಕಾಂಡಗಳ ಕುರ್ಆನ್ನ್ನು 2416 ಗಂಟೆಗಳ ಶ್ರಮದಿಂದ 604 ಪುಟಗಳಲ್ಲಿ ಕೈಬರಹದಲ್ಲಿ ಬರೆದಿದ್ದಾರೆ.
ದಕ್ಷಿಣ ಕನ್ನಡ: ಮುಸ್ಲಿಮರ ಪವಿತ್ರ ಕುರ್ಆನ್ (Quran) ಪ್ರವಾದಿ ಮಹಮ್ಮದ್ ಕಾಲದಲ್ಲಿ ದೇವದೂತರಿಂದ ಬಂದ ನುಡಿ. ಆ ಸಂದರ್ಭದಲ್ಲಿ ಅದನ್ನು ಪಂಡಿತ ಶಿರೋಮಣಿಗಳು ಕೈ ಬರಹದ (Hand-Writing) ಮೂಲಕ ಬರೆದು ಪರಸ್ಪರ ಹಂಚಿಕೊಳ್ಳುತ್ತಿದ್ದರಂತೆ. ಇದೀಗ ಪುತ್ತೂರು (Putturu) ತಾಲೂಕಿನ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ನ ವಿದ್ಯಾರ್ಥಿನಿಯೊಬ್ಬರು (Student) ಏಕಾಗ್ರತೆಯೊಂದಿಗೆ ಸುಮಾರು 5 ವರ್ಷಗಳ ಕಾಲ ನಿರಂತರ ಪರಿಶ್ರಮ ನಡೆಸಿ ಪವಿತ್ರ ಕುರ್ಆನ್ನ 30 ಕಾಂಡಗಳನ್ನು ಬರೆಯುವ ಮೂಲಕ ಗತ ಇತಿಹಾಸವನ್ನು ಮರುಸೃಷ್ಟಿ ಮಾಡಿದ್ದಾರೆ.
ಮರ್ಕಝುಲ್ ಹುದಾ ಮಹಿಳಾ ಕಾಲೇಜ್ನ ವಿದ್ಯಾರ್ಥಿನಿಯಾಗಿದ್ದ ಸಜ್ಲ ಇಸ್ಮಾಯಿಲ್ ಈ ಅಭೂತಪೂರ್ವ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಪುತ್ತೂರು ತಾಲೂಕಿನ ಬೈತಡ್ಕ ನಿವಾಸಿಯಾಗಿರುವ ಇಸ್ಮಾಯಿಲ್ ಹಾಜಿ ಮತ್ತು ಝಹ್ರಾ ಜಾಸ್ಮಿನ್ ದಂಪತಿಯ ಪುತ್ರಿಯಾಗಿರುವ ಸಜ್ಲ ಅವರು ಕುರ್ಆನ್ ಬರವಣಿಗೆ ಕಾಯಕವನ್ನು 2021ರ ಜನವರಿಯಲ್ಲಿ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಅವರು ಇದೇ ಕಾಲೇಜ್ನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ತನ್ನ ಕಲಿಕೆಯ ಜೊತೆಗೆ ಈ ಸಾಹಸಕ್ಕೂ ಕೈ ಹಾಕಿದ ಸಜ್ಲ ಇಸ್ಮಾಯಿಲ್ ಅವರು 2025ರ ಆಗಸ್ಟ್ನಲ್ಲಿ ಬರವಣಿಗೆ ಪೂರ್ಣಗೊಳಿಸಿದ್ದಾರೆ.
2021ರಲ್ಲಿ ಬರವಣಿಗೆ ಆರಂಭಿಸಿದ್ದರೂ ಕೆಲವೊಂದು ಕಾರಣಗಳಿಂದಾಗಿ ಮುಂದುವರಿಸಲು ಸಾಧ್ಯವಾಗದೆ ತನ್ನ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಆದರೆ ತನ್ನ ಹಠ ಬಿಡದ ಸಜ್ಲಾ 2024ರ ಅಕ್ಟೋಬರ್ನಿಂದ ಮತ್ತೆ ತನ್ನ ಬರವಣಿಗೆಯನ್ನು ಪುನರಾರಂಭಿಸಿ 2025ರ ಆಗಸ್ಟ್ನಲ್ಲಿ ಸುಂದರವಾದ ಅಕ್ಷರಗಳನ್ನು ಪೋಣಿಸಿದ ಪವಿತ್ರ ಕುರ್ಆನ್ ಪ್ರತಿಯನ್ನು ಸಿದ್ಧಪಡಿಸಿದ್ದಾರೆ.
2416 ಗಂಟೆಗಳ ಕಠಿಣ ಪರಿಶ್ರಮ!
30 ಕಾಂಡಗಳನ್ನು ಹೊಂದಿರುವ ಈ ಕುರ್ಆನ್ ಆಕರ್ಷಕವಾದ ಕೆಂಪುಬಣ್ಣದ ಜೊತೆಗೆ ಚಿನ್ನಮಿಶ್ರಿತ ಬಣ್ಣದ ಹೊರಪುಟ ಹೊದಿಕೆಯ ವಿನ್ಯಾಸವನ್ನು ಹೊಂದಿದ್ದು, ಜೊತೆಗೆ ಒಟ್ಟು 604 ಪುಟಗಳನ್ನು ಹೊಂದಿದೆ. ಇದನ್ನು ಬರೆದು ಮುಗಿಸಲು ಅವರು ಒಟ್ಟು 392 ದಿನಗಳನ್ನು ಬಳಸಿಕೊಂಡಿದ್ದಾರೆ. ಅವರೇ ಹೇಳುವಂತೆ ಒಂದು ಪೇಜ್ ಬರೆಯಲು 4 ಗಂಟೆಗಳ ಅವಧಿ ಬೇಕಾಗಿತ್ತು. ಕೆಲವೊಂದು ದಿನಗಳಲ್ಲಿ 8 ಗಂಟೆಗಳನ್ನು ಬಳಸಿಕೊಂಡು 2 ಪುಟಗಳನ್ನು ರಚನೆ ಮಾಡಿದ್ದಾರೆ. ಒಟ್ಟಾರೆ ಬರೆದು ಮುಕ್ತಾಯ ಮಾಡಲು ಅವರು 2416 ಗಂಟೆಗಳ ಬಳಕೆಯಾಗಿದೆ. ಇದಕ್ಕಾಗಿ ಬಿಳಿ, ತಿಳಿನೀಲಿ, ತಿಳಿ ಹಸಿರು ಬಣ್ಣದ ಕಾಗದವನ್ನು ಬಳಸಿಕೊಳ್ಳಲಾಗಿದೆ. ಕಪ್ಪು ಬಣ್ಣದ ಕಲಂ ಮತ್ತು ಮಷಿಯಿಂದ ಅಕ್ಷರದ ರೂಪ ಕೊಡಲಾಗಿದೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
August 21, 2025 10:51 AM IST