Last Updated:
ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸೆಪ್ಟಂಬರ್ 15ರಿಂದ ವಿದ್ಯುತ್ ಚಾಲಿತ ರೈಲು ಆರಂಭವಾಗಲಿದೆ. ಇದು 46 ವರ್ಷಗಳ ಕರಾವಳಿ ರೈಲು ಹಳಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು.
ದಕ್ಷಿಣ ಕನ್ನಡ: ಮಂಗಳೂರು-ಬೆಂಗಳೂರು (Mangaluru-Bengaluru) ರೈಲು (Train) ಮಾರ್ಗದಲ್ಲಿ ದಕ್ಷಿಣ ಕನ್ನಡ (Dakshina Kannada) ಭಾಗವಾಗಿರುವ ಮಂಗಳೂರು ಸುಬ್ರಹ್ಮಣ್ಯ ಮಧ್ಯೆ ವಿದ್ಯುತ್ ಚಾಲಿತ (Electric Powered) ರೈಲು ಸೆಪ್ಟಂಬರ್ 15 ರಿಂದ ಆರಂಭಗೊಳ್ಳಲಿದ್ದು, ಇದು 46 ವರ್ಷಗಳ ಕರಾವಳಿ ರೈಲು ಹಳಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. ಮಂಗಳೂರು- ಸುಬ್ರಹ್ಮಣ್ಯ ರೋಡ್ (Road) ಮಧ್ಯೆ ಪ್ರಸ್ತುತ ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ಪ್ಯಾಸೆಂಜರ್ ರೈಲು ಸೇವೆ ಇದೆ. ಡೀಸೆಲ್ ಮೂಲಕ ಓಡುವ ಈ ರೈಲುಗಳು ಇನ್ನು ವಿದ್ಯುತ್ ಎಂಜಿನ್ನಲ್ಲಿ ಓಡಲಿವೆ. ಮಂಗಳೂರು- ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಲು ಈ ಬೆಳವಣಿಗೆ ಮುನ್ನುಡಿಯಾಗಲಿದೆ.
ಸುಬ್ರಹ್ಮಣ್ಯ ರೋಡ್ ನಿಲ್ದಾಣದಿಂದ ಸಕಲೇಶಪುರ ನಿಲ್ದಾಣವರೆಗಿನ ವಿಭಾಗದಲ್ಲಿ ಶೇ.25 ಹಳಿ ವಿದ್ಯುದೀಕರಣ ಕಾರ್ಯ ಮುಗಿದಿದೆ. ಸುಬ್ರಹ್ಮಣ್ಯ ರೋಡ್-ಶಿರಿಬಾಗಿಲು ನಡುವಿನ 14 ಕಿ.ಮೀ. ಮತ್ತು ದೋಣಿಗಲ್- ಸಕಲೇಶಪುರ ನಡುವಿನ 9 ಕಿ.ಮೀ. ವಿದ್ಯುದೀಕರಣ ಕಾಮಗಾರಿ ಕಳೆದ ಏಪ್ರಿಲ್ನಲ್ಲಿ ಮುಗಿದಿದೆ. ಶಿರಿಬಾಗಿಲು- ದೋಣಿಗಲ್ ನಡುವಿನ 32 ಕಿ.ಮೀ. ವಿದ್ಯುದೀಕರಣ ಕಾರ್ಯ ಪ್ರಸ್ತುತ ನಡೆಯುತ್ತಿದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸುಬ್ರಹ್ಮಣ್ಯ ರೋಡ್ ವರೆಗಿನ ಹಳಿ ವಿದ್ಯುದೀಕರಣ ಪೂರ್ಣಗೊಂಡು ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ. ಸೆ.15 ರಿಂದ 3 ಪ್ಯಾಸೆಂಜರ್ ರೈಲುಗಳು ವಿದ್ಯುತ್ ಮೂಲಕ ಚಲಿಸಲಿವೆ. ಹಳಿಯ ಮೇಲ್ಬಾಗದಲ್ಲಿ ವಿದ್ಯುತ್ ತಂತಿ ಎಳೆಯಲಾಗಿದ್ದು, ಇದನ್ನು ರೈಲು ಎಂಜಿನ್ಗೆ ಮತ್ತೊಂದು ತಂತಿಯ ಮೂಲಕ ಜೋಡಿಸಲಾಗುತ್ತದೆ. ರೈಲು ಚಲಿಸುತ್ತಿದ್ದಂತೆ ಈ ಸಂಪರ್ಕಿತ ತಂತಿಯೂ ವಿದ್ಯುತ್ ಸ್ವೀಕರಿಸುತ್ತಲೇ ಚಲಿಸುತ್ತದೆ.
1979 ರಲ್ಲಿ ಮೊದಲ ಬಾರಿಗೆ ಮಂಗಳೂರು ಪುತ್ತೂರು- ಸುಬ್ರಹ್ಮಣ್ಯ ಮೀಟರ್ಗೇಜ್ ರೈಲು ಸೇವೆ ಆರಂಭವಾಗಿತ್ತು. ಬಳಿಕ 1995 ರಲ್ಲಿ ಈ ಹಳಿಯನ್ನು ಬ್ರಾಡ್ಗೇಜ್ ಹಳಿಯಾಗಿ ಪರಿವರ್ತನೆಗಾಗಿತ್ತು. ಇದರಿಂದಾಗಿ ಮಂಗಳೂರು-ಪುತ್ತೂರು- ಸುಬ್ರಹ್ಮಣ್ಯ ಮೀಟರ್ ಗೇಜ್ ಸೇವೆಯೂ ಸ್ಥಗಿತಗೊಂಡಿದೆ. 2003: ಪುತ್ತೂರು- ಸುಬ್ರಹ್ಮಣ್ಯ ರೋಡ್ ಬ್ರಾಡ್ ಗೇಜ್ ಹಳಿ ಪರಿವರ್ತನೆ ಕಾಮಗಾರಿ ಪೂರ್ಣಗೊಂಡಿದೆ. 2006 ರಲ್ಲಿ ಸುಬ್ರಹ್ಮಣ್ಯ ರೋಡ್-ಸಕಲೇಶಪುರ ಘಾಟಿ ವಿಭಾಗದ ಬ್ರಾಡ್ಗೇಜ್ ಪೂರ್ಣಗೊಂಡು ಈ ಹಳಿಯಲ್ಲಿ ಗೂಡ್ಸ್ ರೈಲು ಸಂಚಾರ ಆರಂಭಗೊಂಡಿತ್ತು.
2007 ರಲ್ಲಿ ಬ್ರಾಡ್ಗೇಜ್ ಹಳಿಯಲ್ಲಿ ಮಂಗಳೂರು-ಬೆಂಗಳೂರು ಪ್ಯಾಸೆಂಜರ್ ರೈಲು ಸೇವೆ ಆರಂಭವಾಗಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ಮತ್ತು ಅರೆಬೆಟ್ಟ ಕ್ರಾಸಿಂಗ್ ಸ್ಟೇಷನ್ ಕಾಮಗಾರಿ ಮುಗಿದ ಬೆನ್ನಲ್ಲೇ ವಂದೇ ಭಾರತ್ ಸೇವೆ ಆರಂಭಗೊಳ್ಳುವ ನಿರೀಕ್ಷೆ ಇದೆ. 2023 ರಲ್ಲಿ ಕಾಸರಗೋಡು- ತಿರುವನಂತಪುರ ಮಧ್ಯೆ ಆರಂಭಗೊಂಡ ವಂದೇ ಭಾರತ್ ರೈಲನ್ನು 2024 ರಲ್ಲಿ ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸಲಾಗಿತ್ತು. ಪ್ರಸ್ತುತ ಮಂಗಳೂರು- ತಿರುವನಂತಪುರ ಹಾಗೂ ಮಂಗಳೂರು-ಗೋವಾ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ಕರಾವಳಿ ಭಾರತದ ಪ್ರಮುಖ ಸೇವೆಯಾಗಿದೆ.
ಹಳಿ ವಿದ್ಯುದೀಕರಣದ ಕಾಮಗಾರಿಯನ್ನು ಶಿರಾಡಿಘಾಟ್ ನಲ್ಲಿ ಮಳೆಗಾಲದ ಸಮಯದಲ್ಲಿ ಆರಂಭಿಸಲಾಗಿದೆ. ದುರ್ಗಮ ಘಾಟಿ ಪ್ರದೇಶವಾಗಿರುವ ಕಾರಣ ಸಲಕರಣೆಗಗಳ ಸಾಗಾಟ ಮತ್ತು ಕಾಮಗಾರಿ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಜೂನ್ 1ರಿಂದ ಮಂಗಳೂರು-ಬೆಂಗಳೂರು ಹಗಲು ರೈಲುಗಳ ಸಂಚಾರ ಸ್ಥಗಿತಗೊಳಿಸಿ ಹಗಲು ಹೊತ್ತು ಕೆಲಸ ಮಾಡಲಾಗುತ್ತಿದೆ. ರಾತ್ರಿ ರೈಲು ಮಾತ್ರ ಸಂಚರಿಸುತ್ತಿದೆ. 154 ದಿನಗಳ ನಿಬರ್ಂಧ ವಿಧಿಸಲಾಗಿದ್ದು, ಅಕ್ಟೋಬರ್ ಕೊನೆಯ ವೇಳೆಗೆ ವಿದ್ಯುದೀಕರಣ ಕಾಮಗಾರಿ ಮುಗಿಯುವ ಸಾಧ್ಯತೆಯಿದೆ.
Dakshina Kannada,Karnataka
September 13, 2025 2:41 PM IST