Last Updated:
ಪುತ್ತೂರಿನ ಶಾರದಾ ಉತ್ಸವ ವಿಗ್ರಹ ವಿಸರ್ಜನೆಗೆ ಲಿಫ್ಟ್ ಮಾದರಿಯ ಉಪಕರಣ ಬಳಸಿ ಪಾವಿತ್ರ್ಯ ಮತ್ತು ಗೌರವ ಕಾಪಾಡಲಾಗಿದೆ ಇದು ದಕ್ಷಿಣ ಕನ್ನಡದ ಅನುಕರಣೀಯ ವಿಧಾನ.
ದಕ್ಷಿಣ ಕನ್ನಡ: ತುಂಡಾದ ಗಣೇಶನ ವಿಗ್ರಹ, ಅರೆ ಬರೆ ತೇಲುವ ಡೊಳ್ಳುಹೊಟ್ಟೆಯ ಭಗ್ನ ಮೂರ್ತಿಗಳು ಇವೆಲ್ಲಾ ಪ್ರತೀ ಉತ್ಸವದ ನಂತರವೂ ರೀಲ್ಸ್ ಗಳಲ್ಲಿ (Reels) ವೈರಲ್ ಆಗುತ್ತಾ ಬಂದಿವೆ. ಸಾರ್ವಜನಿಕ ಉತ್ಸವದ ಪೆಂಡಾಲುಗಳಲ್ಲಿ ವಿಗ್ರಹಗಳನ್ನು (Idols) ಕೂರಿಸುವಾಗ ಇರುವ ಉತ್ಸಾಹ ವಿಸರ್ಜನೆ ವೇಳೆಗೆ ಕರಗುತ್ತದೆ ಆದರೆ ವಿಗ್ರಹಗಳು ಕರಗದೇ ಉಳಿದು ಬಿಡುತ್ತವೆ. ಇನ್ನೂ ಕೆಲವು ಕಡೆ ಮೂರ್ತಿಗಳನ್ನು ಎತ್ತಿ ಎಸೆಯುತ್ತಾರೆ ಅದು ಕೂಡ ಖೇದಕರ ಸಂಗತಿ. ಗಣೇಶ, ರಾಮ, ಕೃಷ್ಣ, ದುರ್ಗಾ, ಶಾರದಾ ವಿಗ್ರಹಗಳನ್ನು ಆಯಾ ಪ್ರಾಂತ್ಯದಲ್ಲಿ ಕೂರಿಸಿಕೊಂಡು ಬಂದಿದ್ದರೂ ಎಲ್ಲಾ ಕಡೆ ಇರುವ ಸಮಸ್ಯೆ (Problem) ವಿಗ್ರಹ ವಿಸರ್ಜನೆಯದ್ದೇ. ಮಂಗಳೂರಿನ ಜನ ಇದಕ್ಕೆ ಶಾಶ್ವತ ಪರಿಹಾರ (Remedy) ಕಂಡುಕೊಂಡಿದ್ದಾರೆ.
ದೇಶದೆಲ್ಲೆಡೆ ನಡೆದ ಸಂಭ್ರಮದ ದಸರಾ ಉತ್ಸವಕ್ಕೆ ತೆರೆ ಬಿದ್ದಿದೆ. ದಸರಾ ಆಚರಣೆಯ ಕೊನೆಯ ಭಾಗವಾಗಿ ಕೆಲವು ಕಡೆಗಳಲ್ಲಿ ಶಾರದಾ ದೇವಿಯ ವಿಗ್ರಹದ ವಿಸರ್ಜನೆಯೂ ನಡೆಯುತ್ತದೆ. ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜಿಸಲ್ಪಟ್ಟ ವಿಗ್ರಹವನ್ನು ವಿಸರ್ಜನೆ ಮಾಡುವ ಸಮಯದಲ್ಲಿ ಅದರ ಪಾವಿತ್ರ್ಯತೆಗೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತದೆ ಎನ್ನುವ ಆರೋಪವೂ ಕೇಳಿ ಬರುತ್ತವೆ.
ವಿಗ್ರಹವನ್ನು ಕೆರೆಯಲ್ಲೋ, ಸಮುದ್ರದಲ್ಲೋ ವಿಸರ್ಜಿಸುವ ಸಂದರ್ಭದಲ್ಲಿ ವಿಗ್ರಹಗಳನ್ನು ನೀರಿಗೆ ಎಸೆಯುವ, ನೀರಲ್ಲಿ ಮುಳುಗದ ವಿಗ್ರಹವನ್ನು ಏನೆಲ್ಲಾ ಅವಾಂತರಗಳನ್ನು ಮಾಡಿಕೊಂಡು ಮುಳುಗಿಸುವಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹರಿದಾಡುತ್ತೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯುವ ಶಾರದಾ ವಿಗ್ರಹ ವಿಸರ್ಜನೆ ವೇಳೆಗೆ ಈ ರೀತಿಯ ಯಾವುದೇ ಲೋಪಗಳು ನಡೆಯದಂತೆ ನೋಡಿಕೊಳ್ಳಲಾಗುತ್ತದೆ. ವಿಗ್ರಹವನ್ನು ಕೆರೆಗೆ ಇಳಿಸಲೆಂದೇ ವಿಶೇಷ ರೀತಿಯ ಲಿಫ್ಟ್ ಮಾದರಿಯ ಉಪಕರಣವನ್ನು ಇಲ್ಲಿ ಬಳಸಲಾಗುತ್ತದೆ.
ಕೆರೆಯ ಆಳದವರೆಗೂ ಈ ಲಿಫ್ಟ್ ಚಲಿಸುವಂತಹ ವ್ಯವಸ್ಥೆಯನ್ನು ಈ ಉಪಕರಣದಲ್ಲಿ ಜೋಡಿಸಲಾಗಿದೆ. ಎರಡು ಕಬ್ಬಿಣದ ರಾಡ್ಗಳನ್ನು ಕೆರೆಯ ಆಳಕ್ಕೆ ಇಳಿಸಿ, ಅದಕ್ಕೆ ಬೆಡ್ ಮಾದರಿಯ ಇನ್ನೊಂದು ಪಾರ್ಟ್ ಅಳವಡಿಸಿ, ಬೆಡ್ನಲ್ಲಿ ದೇವಿಯ ವಿಗ್ರಹವನ್ನು ಇಟ್ಟು, ಹಗ್ಗದ ಸಹಾಯದಲ್ಲಿ ಕೆಳಗೆ ಇಳಿಸಲಾಗುತ್ತದೆ.
ಅಡೆತಡೆ ನಿವಾರಿಸಿದ ಅದ್ಭುತ ಉಪಕರಣ
ಇದರಿಂದ ವಿಗ್ರಹವು ನೇರವಾಗಿ ಕೆರೆಯ ನೀರಿನೊಳಗೆ ಮುಳುಗುತ್ತದಲ್ಲದೆ, ಕೆರೆಗೆ ಇಳಿದು ಮುಳುಗಿಸಬೇಕಾದ ಅನಿವಾರ್ಯತೆಯನ್ನೂ ಇದು ತಡೆಯುತ್ತದೆ. ಪುತ್ತೂರಿನ ಶಾರದಾ ಮಾತೆಯ ವಿಗ್ರಹದ ವಿಸರ್ಜನೆಗೆಂದೇ ಈ ಉಪಕರಣವನ್ನು ಶಾರದೋತ್ಸವ ಸಮಿತಿಯ ತಮ್ಮ ಬಳಿ ಇರಿಸಿಕೊಂಡಿದ್ದು, ವಿಸರ್ಜನೆಯ ವೇಳೆ ನಡೆಯಬಹುದಾದ ಅವಾಂತರಗಳನ್ನು ಈ ಉಪಕರಣ ಸಂಪೂರ್ಣ ಕೊನೆಗೊಳಿಸಿದೆ.
Dakshina Kannada,Karnataka
October 05, 2025 9:45 AM IST