Last Updated:
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 60 ಕೋಟಿ ವೆಚ್ಚದ ಮಾಸ್ಟರ್ ಪ್ಲಾನ್.
ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ ಪುತ್ತೂರು (Puttur) ಮಹತೋಭಾರ ಶ್ರೀಮಹಾಲಿಂಗೇಶ್ವರ (Mahalingeshwara) ದೇವಸ್ಥಾನದ (Temple) ಜೀರ್ಣೋದ್ಧಾರದ (Restoration) ಮಾಸ್ಟರ್ ಪ್ಲಾನ್ ಬಗ್ಗೆ ಜೀರ್ಣೋದ್ಧಾರ, ಅಭಿವೃದ್ಧಿ ಸಮಿತಿಯ ಮೊದಲ ಸಭೆಯಲ್ಲಿಯೇ ಚರ್ಚೆ ಮಾಡಲಾಯಿತು. ಈಗಾಗಲೇ ಉದ್ಯಮಿಗಳಿಂದ 13.75 ಕೋಟಿ ರೂ.ದೇಣಿಗೆಯ ವಾಗ್ದಾನವಾಗಿದೆ. ದೇವಳದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಯ ಕುರಿತು 25 ಮಂದಿ ಪ್ರಮುಖರನ್ನೊಳಗೊಂಡ ಜೀರ್ಣೋದ್ದಾರ ಸಮಿತಿ ರಚನೆ ಮಾಡಿ ದೇವಳದ ಕಚೇರಿ ಸಭಾಂಗಣದಲ್ಲಿ ಅ.25ರಂದು ಸಂಜೆ ನಡೆದ ಪ್ರಥಮ ಸಭೆಯಲ್ಲಿ ಸಾರ್ವಜನಿಕರ ಸಹಕಾರದ ವಾಗ್ದಾನ ಬಂದಿದೆ. ಸುಮಾರು 60 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ನಡೆಯಲಿದೆ.ಇದರಲ್ಲಿ ಸರಕಾರದಿಂದ ರೂ.11 ಕೋಟಿ ಪ್ರತ್ಯೇಕ ಬರಲಿದೆ. ಮುಂದಿನ ಎರಡು ವರ್ಷದಲ್ಲಿ ದೇವಸ್ಥಾನದ ಪೂರ್ಣ ಜೀರ್ಣೋದ್ಧಾರ ಆಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.
ಮಹಾಲಿಂಗೇಶ್ವರನಿಗೆ ಸೇರಿದ ಜಾಗ ಯಾವುದೆಲ್ಲ ಇದೆಯೋ ಅದೆಲ್ಲವೂ ಮಹಾಲಿಂಗೇಶ್ವರನಿಗೆ ಸೇರಬೇಕೆಂಬುದು ನಮ್ಮ ಆಶಯವಾಗಿತ್ತು. ಸುಮಾರು ಶೇ.60ರಷ್ಟು ಈ ಕೆಲಸ ಆಗಿದೆ. ಕುಟುಂಬ ಸಮೇತ ಸ್ಥಳದಲ್ಲಿ ವಾಸ್ತವ್ಯ ಇರುವವರಿಗೆ ಸಮಯಾವಕಾಶ ನೀಡಲಾಗಿದೆ. ಮುಂದಿನ ದಿನ ಅವರನ್ನು ತೆರವು ಮಾಡಲಾಗುವುದು. ದೇವಳದ ಮಾಸ್ಟರ್ ಪ್ಲಾನ್ನಂತೆ ಕೆಲಸ ಕಾರ್ಯ ಆಗಬೇಕು. ಎಲ್ಲಾ ಪಕ್ಷದವರನ್ನು, ಎಲ್ಲಾ ಉದ್ಯಮಿಗಳನ್ನು ಸೇರಿಸಿಕೊಂಡು ಒಂದು ವ್ಯವಸ್ಥಿತವಾಗಿ ಜೀರ್ಣೋದ್ದಾರ ಸಮಿತಿ ರಚನೆ ಮಾಡಿ ಒಂದು ಸಭೆಯನ್ನು ಮಾಡಿದ್ದೇವೆ ಎಂದು ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ನಾವು 10 ಕೋಟಿ ರೂಪಾಯಿ ವಾಗ್ದಾನದ ನಿರೀಕ್ಷೆಯಲ್ಲಿದ್ದೆವು. ಆದರೆ ಊರಿನ ಉದ್ಯಮಿಗಳಿಂದ 13.75 ಕೋಟಿ ರೂಪಾಯಿಗಳ ವಾಗ್ದಾನ ಲಭಿಸಿದೆ. ಇದರಿಂದ ಮಹಾಲಿಂಗೇಶ್ವರ ದೇವರ ಆಶೀರ್ವಾದ ಇದೆ ಎಂಬುದು ತಿಳಿಯಬಹುದು. ಸರಕಾರದಿಂದ ಸುಮಾರು 11 ಕೋಟಿ ರೂಪಾಯಿ ಮಂಜೂರಾಗಿದೆ. ಅದರಲ್ಲಿ ಕೆರೆಗೆ 3.25 ಕೋಟಿ, ಕೆರೆಯ ಸುತ್ತಮುತ್ತಕ್ಕೆ 2.75 ಕೋಟಿ, ರಸ್ತೆಗೆ 3 ಕೋಟಿ, ತಡೆಗೋಡೆಗೆ 2 ಕೋಟಿ ಎಲ್ಲಾ ಸೇರಿ 11 ಕೋಟಿ ರೂಪಾಯಿ ಆಗಿದೆ.24.57 ಕೋಟಿ ರೂಪಾಯಿ ಅನುದಾನಕ್ಕೆ ವಾಗ್ದಾನ ಆಗಿದೆ. ಒಟ್ಟು ರೂ.60 ಕೋಟಿ ರೂಪಾಯಿಯಲ್ಲಿ ಜೀರ್ಣೋದ್ದಾರದ ಆಲೋಚನೆ ಇದೆ. ಇನ್ನು 30 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗುವುದು ಎಂದಿದ್ದಾರೆ.
ನೆಲ್ಲಿಕಟ್ಟೆಯ 1 ಎಕರೆ ಜಾಗದಲ್ಲಿ ರೂ.25 ಕೋಟಿ ರೂಪಾಯಿಯಲ್ಲಿ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣ ಮಾಡಿ ದೇವಸ್ಥಾನಕ್ಕೆ ತಿಂಗಳಿಗೆ ಕನಿಷ್ಠ ರೂ.25 ಲಕ್ಷ ಬಾಡಿಗೆ ಬರಬೇಕು. ಆ ರೀತಿಯಲ್ಲಿ ಕೆಲಸ ನಡೆಯಲಿದೆ. ಟೂರಿಸಂ ಆಗಿ ಈ ಕ್ಷೇತ್ರ ಬೆಳಗಲಿದೆ. ಹಿಂದೂ ಧರ್ಮದ ಅಭಿವೃದ್ಧಿಗಾಗಿ ಏನು ಕೊಡುಗೆ ಕೊಡಬೇಕೋ ಅದನ್ನು ಅಶೋಕ್ ಕುಮಾರ್ ರೈ ಕೊಡಿಸುವ ಕೆಲಸ ಮಾಡುತ್ತೇನೆ.ಮುಂದಿನ 15 ದಿವಸದೊಳಗೆ ಶಿಲಾನ್ಯಾಸ ಕೆಲಸ ಮಾಡಿ ಕಾಮಗಾರಿ ಆರಂಭಿಸಲಾಗುವುದು. ದೇವಳದ ಎದುರಿನ ನಾಗ ಗುಡಿ, ಅಯ್ಯಪ್ಪನ ಗುಡಿ ಸ್ಥಳಾಂತರ ಆಗಲಿದೆ. ಅದಕ್ಕೆ ಪ್ರತ್ಯೇಕವಾಗಿ ಭಕ್ತರ ಸಭೆ ಕರೆಯಲಾಗುವುದು.ಅದರಲ್ಲೂ ಎಲ್ಲಾ ಅಭಿವೃದ್ಧಿ ಆಗಬೇಕಾದರೆ ಎದುರಿನ ಸಭಾಭವನ ಕಟ್ಟಡ ತೆರವು ಮಾಡಬೇಕಾಗಿದೆ.ಹಾಲ್ ತೆರವು ಮಾಡುವಲ್ಲಿ ನಮಗೆ ನೋವಿದೆ. ಆದರೆ ಮಹಾಲಿಂಗೇಶ್ವರನ ಇಚ್ಚೆ ಏನಿದೆ ಅದನ್ನು ಮಾಡುವ ಕೆಲಸ ಮಾಡುತ್ತೇವೆ. ಹೊಸ ಮಾಸ್ಟರ್ ಪ್ಲಾನ್ನಂತೆ ಕೆಲಸ ಕಾರ್ಯ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.
ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಖ್ಯಾತ ಉದ್ಯಮಿಗಳಾದ ‘ಬಂಜಾರ’ ಪ್ರಕಾಶ್ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ, ‘ಬಿಂದು’ ಸಂಸ್ಥೆಯ ಅಧ್ಯಕ್ಷ ಸತ್ಯಶಂಕರ್, ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಆರ್ಥಿಕ ಸಮಿತಿಯ ಹೊರರಾಜ್ಯದ ಅಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ,ಕಟ್ಟಡ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ರೈ ನಳೀಲು, ಕಾರ್ಯಾಧ್ಯಕ್ಷರಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ದಿಗ್ದರ್ಶಕರಾಗಿ ಕೇಶವಪ್ರಸಾದ್ ಮುಳಿಯ ಸೇರಿದಂತೆ ಒಂದಷ್ಟು ಸಮಿತಿಗಳನ್ನು ರಚನೆ ಮಾಡಲಾಗಿದೆ. ಇನ್ನು ಉಪಸಮಿತಿಗಳನ್ನು ರಚನೆ ಮಾಡಲೂ ಸಿದ್ಧತೆ ನಡೆಸಲಾಗಿದೆ.
Dakshina Kannada,Karnataka
October 28, 2025 4:14 PM IST