Last Updated:
ಪುತ್ತೂರಿನ ಪವಿತ್ರಾ ಸಂಜೀವಿನಿ ಒಕ್ಕೂಟದಿಂದ ಸಾಲ ಪಡೆದು ಬೇಕರಿ ಉದ್ಯಮ ಆರಂಭಿಸಿ 10 ಮಹಿಳೆಯರಿಗೆ ಉದ್ಯೋಗ ನೀಡಿದ್ದು, ವರ್ಷಕ್ಕೆ ಎರಡು ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ: ಮಹಿಳೆ (Women) ಪುರುಷರಿಗಿಂತ ಯಾವ ಕ್ಷೇತ್ರದಲ್ಲೂ ಹಿಂದೆ ಉಳಿಯಬಾರದು. ಮಹಿಳೆ ಸ್ವ ಉದ್ಯೋಗದಲ್ಲಿ (Self Employed) ತೊಡಗಿಕೊಳ್ಳುವ ಮೂಲಕ ಸ್ವಾವಲಂಭಿಯಾಗಿ ಬದುಕಬೇಕು ಎನ್ನುವ ಉದ್ಧೇಶದಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಹಿಳೆಯರಿಗಾಗಿಯೇ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರಕಾರದ (Central Govt) ದೀನ್ ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ಸಂಜೀವಿನಿ ಸಂಘಗಳ ಮೂಲಕ ಸಾಲ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಸಾಲವನ್ನು ಪಡೆದ ಮಹಿಳೆಯೋರ್ವರು ಇಂದು 10 ಕ್ಕೂ ಮಿಕ್ಕಿದ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಕರೋಡ್ ಪತಿ ದೀದಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೋಡಿಂಬಾಡಿ ನಿವಾಸಿ ಪವಿತ್ರ ಕಳೆದ 9 ವರ್ಷದ ಹಿಂದೆ ಕೋಡಿಂಬಾಡಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟವನ್ನು ಸೇರಿದ್ದರು. ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು ಎಂದು ಸಂಜೀವಿನಿ ಒಕ್ಕೂಟದಿಂದ ಮೊದಲ ಬಾರಿಗೆ 75 ಸಾವಿರ ರೂಪಾಯಿ ಸಾಲ ಪಡೆದು ಬೇಕರಿ ತಿಂಡಿಗಳ ಸಣ್ಣದೊಂದು ಘಟಕವನ್ನು ಆರಂಭಿಸಿದ್ದರು. ಆ ಬಳಿಕ ಪಿಎಮ್ಎಫ್ಎಮ್ ಮೂಲಕ 40 ಸಾವಿರ ರೂಪಾಯಿ ಸಾಲ ಪಡೆದು ಘಟಕಕ್ಕೆ ಬೇಕಾದ ಪರಿಕರಗಳನ್ನು ಪಡೆದಿದ್ದರು.
ಉದ್ಯಮವನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಪಿಎಮ್ಎಫ್ಎಮ್ ಮೂಲಕ ದೊಡ್ಡ ಮಟ್ಟದ ಸಾಲವನ್ನು ಪಡೆದು ಇಂದು ಹತ್ತು ಮಹಿಳೆಯರಿಗೆ ಉದ್ಯೋಗ ನೀಡುತ್ತಿದ್ದಾರೆ. ಸಂಜೀವಿನಿ ಒಕ್ಕೂಟದ ಮಹಿಳೆಯರನ್ನೇ ಸೇರಿಸಿಕೊಂಡು ಬೇಕರಿ ಉದ್ಯಮ ನಡೆಸುತ್ತಿರುವ ಪವಿತ್ರ ಇಂದು ಓರ್ವ ಯಶಸ್ವೀ ಉದ್ಯಮಿಯಾಗಿ ರೂಪುಗೊಂಡಿದ್ದು, ವರ್ಷಕ್ಕೆ ಎರಡು ಕೋಟಿಗೂ ಮಿಕ್ಕಿದ ವ್ಯವಹಾರವನ್ನು ಮಾಡುವ ಮೂಲಕ ಕರೋಡ್ ಪತಿ ದೀದಿಯಾಗಿ ಹೊರಹೊಮ್ಮಿದ್ದಾರೆ.
ಫ್ರೆಂಡ್ಸ್ ಎನ್ನುವ ಬೇಕರಿ ಉತ್ಪನ್ನಗಳ ತಯಾರಿಸುತ್ತಿರುವ ಪವಿತ್ರರಿಗೆ ಅವರ ಪತಿ ಶೇಖರ್ ಕೂಡಾ ಸಾಥ್ ನೀಡಿದ್ದಾರೆ. ದಂಪತಿಗಳು ಸೇರಿ ಬೇಕರಿ ಉದ್ಯಮವನ್ನು ಯಶಸ್ವಿ ಹಂತಕ್ಕೆ ತಲುಪಿಸಿದ್ದು, 50 ಕ್ಕೂ ಮಿಕ್ಕಿದ ವಿವಿಧ ಬೇಕರಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಪುತ್ತೂರಿನ ರೈಲ್ವೇ ನಿಲ್ದಾಣದ ಬಳಿ ಬೇಕರಿ ತಿಂಡಿಗಳನ್ನು ತಯಾರಿಸುವ ಘಟಕದ ಜೊತೆಗೆ ಬೇಕರಿಯನ್ನೂ ಪ್ರಾರಂಭಿಸಿರುವ ಪವಿತ್ರಾ ಸುಳ್ಯ, ಕಡಬ,ಬೆಳ್ತಂಗಡಿ ಭಾಗಕ್ಕೆ ಪ್ರತಿದಿನ ಬೇಕರಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಸುಮಾರು ಐದು ಔಟ್ ಲೆಟ್ ಗಳನ್ನೂ ತೆರೆದಿದ್ದಾರೆ. ದಿನಕ್ಕೆ ಸುಮಾರು 3 ಕ್ವಿಂಟಾಲ್ ಬೇಕರಿ ತಿನಿಸುಗಳು ಮಾರಾಟವಾಗುತ್ತಿದ್ದು, ಬೇಡಿಕೆ ಉತ್ತಮವಾಗಿರುವುದರಿಂದ ತಯಾರಿಯನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ.
Dakshina Kannada,Karnataka
November 05, 2025 4:11 PM IST