Last Updated:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಂಜದಲ್ಲಿ ಅಪರೂಪದ ಚಿಪ್ಪುಹಂದಿಯನ್ನು ಸ್ಥಳೀಯರು ನಾಯಿ ದಾಳಿಯಿಂದ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದರು.
ದಕ್ಷಿಣ ಕನ್ನಡ: ನಾಯಿ (Dog) ಬಾಯಿಗೆ ಸಿಕ್ಕಿ ಹಾಕಿಕೊಂಡಿದ್ದ ಅಪರೂಪದ ಚಿಪ್ಪುಹಂದಿಯೊಂದನ್ನು (Porcupine) ಸ್ಥಳೀಯರು ರಕ್ಷಿಸಿದ್ದಾರೆ (Save). ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಗಡಿ ತಾಲೂಕಿನ ಬಳಂಜ ಎಂಬಲ್ಲಿ ಕಾಡಿನಂಚಿಗೆ ದಾರಿ ತಪ್ಪಿ ತೋಟವೊಂದಕ್ಕೆ ಬಂದಿದ್ದ ಈ ಚಿಪ್ಪುಹಂದಿಯನ್ನು ಹಿಡಿಯಲು ನಾಯಿಯೊಂದು ಹೊಂಚು ಹಾಕುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಸಮಯಪ್ರಜ್ಞೆ ತೋರಿ ಚಿಪ್ಪುಹಂದಿಯನ್ನು ರಕ್ಷಿಸಿ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದ್ದಾರೆ.
ಬಳಂಜ ಗ್ರಾಮದ ತಾರಿದೊಟ್ಟು ನಿವಾಸಿ ಹರೀಶ್ ರೈ ಎಂಬವರ ತೋಟಕ್ಕೆ ಈ ಚಿಪ್ಪುಹಂದಿಯನ್ನು ನಾಯಿ ಗಮನಿಸಿ, ಅದನ್ನ ಹಿಡಿಯಲು ನಾಯಿ ಹೊಂಚು ಹಾಕಿದ ಸಂದರ್ಭದಲ್ಲಿ ತೋಟದ ಮಾಲಕರಾದ ಹರೀಶ್ ರೈ ತಕ್ಷಣವೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಸ್ಥಳೀಯರು ತಕ್ಷಣವೇ ಈ ವಿಚಾರವನ್ನು ವೇಣೂರು ವಲಯ ಅರಣ್ಯಾಧಿಕಾರಿ ಭರತ್ .ಯು.ಜಿ ರವರನ್ನು ಸಂಪರ್ಕಿಸಿದ್ದಾರೆ. ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ ವಲಯ ಅರಣ್ಯಾಧಿಕಾರಿಗಳು ಸ್ಥಳೀಯರ ಸಹಕಾರದಿಂದ ಚಿಪ್ಪುಹಂದಿಯನ್ನು ಹಿಡಿದು ಬೋನಿಗೆ ಹಾಕಿ ರಕ್ಷಿಸಿದ್ದಾರೆ.
ಚಿಪ್ಪುಹಂದಿ ಅತ್ಯಂತ ಮೃದು ಸ್ವಭಾವದ ಪ್ರಾಣಿಯಾಗಿದ್ದು, ಅಪರೂಪವಾಗಿ ಕಾಣಸಿಗುವ ಪ್ರಾಣಿಯಾಗಿದೆ. ಗೆದ್ದಲು, ಇರುವೆಗಳನ್ನೇ ತಿಂದು ಜೀವಿಸುವ ಈ ಚಿಪ್ಪುಹಂದಿ ತನ್ನನ್ನು ರಕ್ಷಿಸಿಕೊಳ್ಳಲೆಂದೇ ವಿಶಿಷ್ಟ ದೇಹಾಕಾರವನ್ನೂ ಇದು ಹೊಂದಿದೆ. ಈ ಪ್ರಾಣಿಯ ದೇಹದ ಮೇಲ್ಭಾಗ ಕಲ್ಲಿನ ಚಿಪ್ಪಿನಾಕೃತಿಯಲ್ಲಿದ್ದು, ಇತರ ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಚೆಂಡಿನಾಕೃತಿಗೆ ತನ್ನ ದೇಹವನ್ನು ಇದು ಬದಲಾಯಿಸಿಕೊಳ್ಳುತ್ತದೆ. ಕಾಡಿನ ಪ್ರಾಣಿಗಳು ಈ ಪ್ರಾಣಿ ಎದುರು ಬಂದ ತಕ್ಷಣವೇ ಈ ಚಿಪ್ಪುಹಂದಿ ಬಾಲ್ ತರಹ ಬದಲಾಗುತ್ತದೆ. ಆ ಬಳಿಕ ಯಾವ ಪ್ರಾಣಿಗೂ ಇದೊಂದು ಪ್ರಾಣಿ ಎಂದು ಗುರುತಿಸಲಾರದಷ್ಟರ ಮಟ್ಟಿಗೆ ಇದು ತನ್ನ ಆಕಾರವನ್ನು ಬದಲಾಯಿಸುತ್ತದೆ.
Dakshina Kannada,Karnataka
November 08, 2025 2:49 PM IST