Last Updated:
ಮಾಸ್ಕ್ಮ್ಯಾನ್ ಚಿನ್ನಯ್ಯನಿಗೆ ಮೂರು ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ ಮಾಸ್ಕ್ಮ್ಯಾನ್ ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಿದೆ.
ದಕ್ಷಿಣ ಕನ್ನಡ: ಧರ್ಮಸ್ಥಳ ಗ್ರಾಮದದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ ಆರೋಪಿಸಿದ್ದ ಪ್ರಕರಣ (Dharmasthala Case) ರಾಜ್ಯ ಮಾತ್ರವಲ್ಲ, ಇಡೀ ದೇಶದ ಗಮನ ಸೆಳೆದಿತ್ತು. ಮಾಸ್ಕ್ ಹಾಕಿಕ್ಕೊಂಡು, ತಲೆ ಬುರುಡೆ ಹಿಡಿದು ಧರ್ಮಸ್ಥಳಕ್ಕೆ ನಿಗೂಢವಾಗಿ ಬಂದಿದ್ದ ವ್ಯಕ್ತಿ ನೂರಾರು ಶವ ಹೂತಿಟ್ಟಿರುವ ಜಾಗ ತೋರಿಸುತ್ತೇನೆ ಎಂದು ಹೇಳಿದ್ದನು, ಅನಾಮಿಕ ವ್ಯಕ್ತಿಯ ಹೇಳಿಕೆಯಂತೆ ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಇರುವ ಕಾಡು ಮೇಡುಗಳನ್ನು ಅಗೆದು ಎಸ್ಐಟಿ ತಂಡ (SIT) ಉತ್ಖನನ ನಡೆಸಿತ್ತು.
ಆದರೆ, ಎಷ್ಟೇ ಅಗೆದರೂ ಕೂಡ ಏನೂ ಸಿಗಲಿಲ್ಲ, ನಂತರ ಇದು ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರ, ಇದರ ಹಿಂದೆ ಬುರುಡೆ ಗ್ಯಾಂಗ್ ಇದೆ ಎಂದು ಜಗ್ಜಾಹೀರಾಗಿತ್ತು. ಜೊತೆಗೆ ಮಾಸ್ಕ್ಮ್ಯಾನ್ನ ಮುಖವಾಡ ಕೂಡ ಕಳಿಚಿ ಬಿದ್ದಿತ್ತು. ಬಳಿಕ ಎಸ್ಐಟಿ ತಂಡ ಮಾಸ್ಕ್ ಮ್ಯಾನ್ ಚಿನ್ನಯ್ಯನ್ನ (Mask man Chinnaiah) ಬಂಧಿಸಿ ಜೈಲಿಗಟ್ಟಿದ್ದರು.
ಕಳೆದ ಆಗಸ್ಟ್ ತಿಂಗಳಿನಲ್ಲಿ SITಯಿಂದ ಬಂಧನವಾಗಿದ್ದ ಮಾಸ್ಕ್ಮ್ಯಾನ್ ಚಿನ್ನಯ್ಯನಿಗೆ ಮೂರು ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ ಮಾಸ್ಕ್ಮ್ಯಾನ್ ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಿದೆ.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ದೂರುದಾರನಾಗಿ ಬಂದಿದ್ದ ಚಿನ್ನಯ್ಯನನ್ನ ತಾನೆ ತೋಡಿದ್ದ ಹಳ್ಳಕ್ಕೆ ಬಿದ್ದು ಅರೆಸ್ಟ್ ಆಗಿದ್ದನು. ಜೊತೆಗೆ ಎಸ್ಐಟಿ ತನಿಖೆಯಲ್ಲಿ ಇಡೀ ಬುರುಡೆ ಗ್ಯಾಂಗ್ನ ಷಡ್ಯಂತ್ರಗಳು ಬಟಾಬಯಲಾಗಿತ್ತು. ಸದ್ಯ, ಮಾಸ್ಕ್ಮ್ಯಾನ್ ದಕ್ಷಿಣ ಕನ್ನಡ ಜಿಲ್ಲಾ ಸತ್ರಾ ನ್ಯಾಯಾಲಯ 1 ಲಕ್ಷ ಬಾಂಡ್ ಇಡೋದನ್ನು ಸೇರಿ ಒಟ್ಟು 12 ಷರತ್ತುಗಳನ್ನು ವಿಧಿಸಿ ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಿದೆ.
ಧರ್ಮಸ್ಥಳ ತಲೆಬುರುಡೆ ಕೇಸ್ ಒಂದು ಹಂತಕ್ಕೆ ಬಂದು ತಲುಪಿದ್ದು, ಮೂರು ತಿಂಗಳುಗಳಿಂದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ, ಬೆಳ್ತಂಗಡಿ ಕೋರ್ಟ್ಗೆ ಬರೋಬ್ಬರಿ 4 ಸಾವಿರ ಪುಟಗಳ ತನಿಖಾ ವರದಿ ಸಲ್ಲಿಸಿದೆ. SIT ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ಅವರು ನವೆಂಬರ್ 20ರಂದು ಬೆಳ್ತಂಗಡಿ ಕೋರ್ಟ್ಗೆ ತನಿಖಾ ವರದಿ ಸಲ್ಲಿಕೆ ಮಾಡಿದ್ದಾರೆ. ಈ ತನಿಖಾ ವರದಿಯಲ್ಲಿ ಅನೇಕ ಸ್ಫೋಟಕ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಬುರುಡೆ ಮ್ಯಾನ್ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸುಜಾತಾ ಭಟ್ ಸೇರಿ ಒಟ್ಟು 6 ಜನರ ಹೆಸರನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿ: ಕಿಶನ್ ಶೆಟ್ಟಿ, ನ್ಯೂಸ್ 18 ಕನ್ನಡ, ದಕ್ಷಿಣ ಕನ್ನಡ
Mangalore,Dakshina Kannada,Karnataka
November 24, 2025 6:58 PM IST