Last Updated:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಲ್ಲುರ್ಟಿ ಮತ್ತು ಮಂತ್ರದೇವತೆ ದೈವಗಳ ಆರಾಧನೆ ಪ್ರಸಿದ್ಧ.
ದಕ್ಷಿಣ ಕನ್ನಡ: ಕಲ್ಲುರ್ಟಿ (Kallurti) ಎನ್ನುವ ದೇವಿ ಸ್ವರೂಪಿ ದೈವದ (Daiva) ಆರಾಧನೆ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ದೈವದ ಆರಾಧನೆಯ ಜೊತೆಗೆ ಮಂತ್ರದೇವತೆ (Mantra Devate) ಎನ್ನುವ ಇನ್ನೊಂದು ದೇವಿ ಸ್ವರೂಪದ ದೈವದ ಆರಾಧನೆಯೂ ಕೆಲವು ಕಡೆಗಳಲ್ಲಿ ನಡೆಯುತ್ತದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಮೂಡಬಿದಿರೆ ಕಡೆಗಳಲ್ಲಿ ಮಂತ್ರದೇವತೆ ದೈವವನ್ನು ಆರಾಧಿಸಿಕೊಂಡು ಬರಲಾಗುತ್ತದೆ. ಹಲವು ದೇವಸ್ಥಾನಗಳಲ್ಲಿ ಕಲ್ಲುರ್ಟಿ ದೈವದ ಜೊತೆಗೆ ಮಂತ್ರದೇವತೆಯನ್ನೂ ಆರಾಧಿಸಿಕೊಂಡು ಬಂದರೆ, ಇನ್ನು ಕೆಲವು ದೈವಸ್ಥಾನಗಳಲ್ಲಿ ಮಂತ್ರದೇವತೆ ಪ್ರಧಾನ ದೈವವಾದರೆ, ಕೆಲವೆಡೆ ಕಲ್ಲುರ್ಟಿ ಪ್ರಧಾನ ದೈವವಾಗಿರುತ್ತದೆ.
ಮಂತ್ರಗಳ ಮೂಲಕ ಈ ಶಕ್ತಿಯನ್ನು ಕೇರಳ ಭಾಗದಿಂದ ತುಳುನಾಡಿಗೆ ತರಲಾಯಿತು ಎನ್ನುವುದು ದೈವದ ಪಾರ್ದನದ ಮೂಲಕ ಕಂಡುಬಂದ ವಿಚಾರವಾಗಿದೆ. ಕೇರಳ ಭಾಗಕ್ಕೆ ಸೇರಿದ ಕುಂಟಾರು ತಂತ್ರಿಗಳ ಬಳಿಗೆ ತುಳುನಾಡಿನಿಂದ ಹಲವು ವಿಚಾರಕ್ಕಾಗಿ ತೆರಳುತ್ತಿದ್ದ ಆ ಸಮಯದಲ್ಲಿ ತುಳುನಾಡಿನ ಇರುವೈಲಿನ ಒಂದು ಕುಟುಂಬವೂ ಕುಂಟಾರು ತಂತ್ರಿಗಳ ಬಳಿ ಹೋಗಿತ್ತು. ಆ ಸಂದರ್ಭದಲ್ಲಿ ತಮ್ಮ ಮಂತ್ರಶಕ್ತಿಯಿಂದ ಹಲವಾರು ಶಕ್ತಿಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದ ಕುಂಟಾರಿನ ಅಂದಿನ ತಂತ್ರಿಗಳ ಬಳಿ ಇರುವೈಲು ಮನೆತನದ ಹಿರಿಯರು ಒಂದು ಶಕ್ತಿಯನ್ನು ತಮ್ಮ ಜೊತೆಗೆ ಕಳುಹಿಸಿಕೊಡುವಂತೆ ಕೋರಿದ್ದರಂತೆ.
ಈ ಕೋರಿಕೆಯನ್ನು ಮನ್ನಿಸಿದ್ದ ಕುಂಟಾರಿನ ತಂತ್ರಿಗಳು ಶಕ್ತಿಯೊಂದನ್ನು ಆ ಕುಟುಂಬಕ್ಕೆ ನೀಡಿದ್ದರು. ಮಂತ್ರಶಕ್ತಿಯಿಂದ ಆ ಶಕ್ತಿಯನ್ನು ತುಳುನಾಡಿಗೆ ತಂದಿದ್ದ ಇರುವೈಲು ಕುಟುಂಬದ ಆ ಶಕ್ತಿಯನ್ನು ದೈವದ ರೂಪದಲ್ಲಿ ಆರಾಧಿಸಿಕೊಂಡು ಬರಲಾಗಿದೆ. ಇರುವೈಲು ಮನೆತನದಿಂದ ತುಳುನಾಡಿನ ಎಲ್ಲಾ ಭಾಗಗಳಲ್ಲೂ ಒಂದು ಮಂತ್ರದೇವತೆಯ ಆರಾಧನೆ ನಡೆಯುತ್ತಿದೆ.
ಮಂತ್ರಶಕ್ತಿಯ ಮೂಲಕ ಬಂದಿರುವಂತಹ ಈ ದೈವವು ಮಂತ್ರತಂತ್ರಗಳ ದುಷ್ಪರಿಣಾಮಗಳಿಂದ ಭಕ್ತರನ್ನು ತಡೆಯುತ್ತದೆ ಎನ್ನುವ ನಂಬಿಕೆಯಿದೆ. ಅಲ್ಲದೆ ಈ ದೈವದ ಕೋಲ ನಡೆದ ಬಳಿಕ ಸಿಗುವ ಈ ದೈವದ ಪ್ರಸಾದವನ್ನು ಅಲ್ಲೇ ಬಿಟ್ಟು ಬರಬೇಕು ಎನ್ನುವ ಸಂಪ್ರದಾಯವೂ ತುಳುನಾಡಿನಲ್ಲಿದೆ. ಈ ದೈವದ ಪ್ರಸಾದದ ಜೊತೆಗೆ ಈ ದೈವವೂ ಮನೆಗೆ ಬರುತ್ತೆ ಎನ್ನುವ ಕಾರಣಕ್ಕಾಗಿ ಪ್ರಸಾದವನ್ನು ಅಲ್ಲೇ ಬಿಟ್ಟು ಬರುತ್ತಾರೆ ಅನ್ನೋದು ದೈವಾರಾಧನೆಯಲ್ಲಿ ಸಂಶೋಧನೆ ನಡೆಸಿರುವ ಮತ್ತು ಸ್ವತಹ ದೈವ ನರ್ತಕರಾದ ಡಾ. ರವೀಶ್ ಪಡುಮಲೆ ಅಭಿಮತ.
Dakshina Kannada,Karnataka
December 12, 2025 12:48 PM IST