Last Updated:
ದಕ್ಷಿಣ ಕನ್ನಡದ ಕರಾವಳಿಯಲ್ಲಿ ಕಂಡ ವಸಾಯಿ ಸಂಪ್ರದಾಯದಲ್ಲಿ ಪೂಕರೆ ಅಥವಾ ಬಾಳೆಗಿಡ ನೆಡುವುದು, ದೈವಗಳ ಪಾಲ್ಗೊಳ್ಳುವಿಕೆ, ಕೋಲ್ತಿರಿ ಬೆಳಕು, ಬ್ರಹ್ಮೆರೆ ದೈವದ ಕಟ್ಟಲೆ ಪ್ರಮುಖ.
ದಕ್ಷಿಣ ಕನ್ನಡ: ಕೃಷಿ ಪ್ರಧಾನ ಕರಾವಳಿ (Coastal) ಭಾಗದಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಒಂದಕ್ಕಿಂತ ಒಂದು ಭಿನ್ನವಾದ ಆಚರಣಾ ಪದ್ಧತಿಗಳಿವೆ. ಕರಾವಳಿಯ ಜನ ಹಿಂದಿನಿಂದಲೂ ಭತ್ತದ (Paddy) ಕೃಷಿಯನ್ನೇ (Agriculture) ನೆಚ್ಚಿಕೊಂಡು ಬಂದಿದ್ದರಾದರೂ, ಇಂದು ವಾಣಿಜ್ಯ ಬೆಳೆಯಾದ ಅಡಿಕೆ, ರಬ್ಬರ್ ನಂತಹ ಬೆಳೆಗಳತ್ತ (Crop) ಮುಖ ಮಾಡಿದ ಕಾರಣ ಭತ್ತದ ಗದ್ದೆಗಳು ಇಂದು ಕಾಣೆಯಾಗಲಾರಂಭಿಸಿದೆ. ಆ ಗದ್ದೆಗಳ ಜೊತೆಗೆ ಕೆಲವು ಸಂಪ್ರದಾಯೂ ಮರೆಯಾಗುತ್ತಿದ್ದು, ಇಂತ ಸಂಪ್ರದಾಯಗಳಲ್ಲಿ ಕಂಡ ವಸಾಯಿ ಕೂಡಾ ಒಂದು. ಏನಿದು ಕಂಡ ವಸಾಯಿ? ಏನಿದರ ಆಚರಣೆ ನೋಡೋಣ ಬನ್ನಿ.
ಗದ್ದೆಯನ್ನು ತುಳು ಭಾಷೆಯಲ್ಲಿ ಕಂಡ ಎಂದರೆ ಸುತ್ತು ಹಾಕೋದಕ್ಕೆ ತುಳುವಿನಲ್ಲಿ ವಲಸರಿ ಎನ್ನಲಾಗುತ್ತದೆ. ಮನೆ ಮನೆಯಲ್ಲಿ ಇದ್ದ ಭತ್ತದ ಗದ್ದೆಗಳು ಮಾಯವಾದ ಕಾರಣ ಇಂದು ಗ್ರಾಮದ ಜನರನ್ನ ಸೇರಿಸಿಕೊಂಡು ಈ ಸಂಪ್ರದಾಯವನ್ನು ಆಚರಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಅದರಲ್ಲೂ ಕಂಬಳದ ಗದ್ದೆಯಲ್ಲಿ ಈ ಕಂಡ ವಸಾಯಿ ಯನ್ನು ಕಡ್ಡಾಯವಾಗಿ ಮಾಡುತ್ತಿದ್ದು, ನಾಟಿ ಮಾಡುವ ಮೊದಲು ಕೋಣಗಳನ್ನ ಗದ್ದೆಯಲ್ಲಿ ಓಡಿಸಲಾಗುತ್ತದೆ. ಆ ಬಳಿಕ ಆ ಗದ್ದೆಯ ಮಧ್ಯೆ ಪೂಕರೆ ಅಥವಾ ಬಾಳೆಗಿಡವನ್ನು ನೆಡುವ ಪದ್ಧತಿಯಿದೆ.
ಈ ಸಂಪ್ರದಾಯದಲ್ಲಿ ತುಳುನಾಡಿನ ಅತ್ಯಂತ ಕಾರಣಿಕದ ದೈವಗಳ ಪಾಲ್ಗೊಳ್ಳುವಿಕೆಯೂ ಇದೆ. ಪೂಕರೆ ಅಥವಾ ಬಾಳೆಗಿಡವನ್ನು ಗದ್ದೆಯ ಮಧ್ಯೆ ನೆಡುವ ಹಿಂದಿನ ರಾತ್ರಿ ಆ ಗದ್ದೆಯ ಸುತ್ತ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಆ ಪೂಜೆಗೆ ಕಂಡ ವಸಾಯಿ ಎಂದು ಕರೆಯಲಾಗುತ್ತದೆ. ಊರಿನ ಹಿರಿಯರೆಲ್ಲಾ ಸೇರಿ ರಾತ್ರಿ ನಾಟಿ ಮಾಡುವ ಗದ್ದೆಯ ನಾಲ್ಕು ದಿಕ್ಕುಗಳಲ್ಲಿ ಕೋಲಿನ ಬೆಳಕನ್ನು (ತುಳುವಿನಲ್ಲಿ ಇದಕ್ಕೆ ಕೋಲ್ತಿರಿ ಎನ್ನುತ್ತಾರೆ.) ಹಚ್ಚುತ್ತಾರೆ.
ಗದ್ದೆಯ ನಾಲ್ಕು ಮೂಲೆಗಳಲ್ಲಿ ಮೊದಲಿಗೆ ಬಾಳೆಎಲೆ ಇಟ್ಡು ಅದಕ್ಕೆ ಹಿಂಗಾರವನ್ನು ಇಡಲಾಗುತ್ತದೆ. ಆ ಬಳಿಕ ಕೋಲ್ತಿರಿಯನ್ನು ಮಣ್ಣಿಗೆ ಒತ್ತಿ ಇಡಲಾಗುತ್ತದೆ. ಆ ಬಳಿಕ ಸ್ವಲ್ಪ ಅಕ್ಕಿಯನ್ನು ಗದ್ದೆಗೆ ಹಾಕಿ, ನೀರು ಮತ್ತು ಹಾಲನ್ನು ಗದ್ದೆಗೆ ಸುರಿಯಲಾಗುತ್ತದೆ. ಹುಣ್ಣಿಮೆಯಂದು ಈ ಕಂಡ ವಸಾಯಿಯನ್ನು ಮಾಡಲಾಗುತ್ತದೆ. ರಾತ್ರಿಯ ಈ ಕಂಡ ವಸಾಯಿ ಕಾರ್ಯಕ್ರಮದ ಬಳಿಕ ಮರುದಿನ ಗದ್ದೆ ಮಧ್ಯೆ ಪೂಕರೆ ಅಥವಾ ಬಾಳೆಗಿಡಗಳನ್ನು ನೆಟ್ಟು ಆ ಬಳಿಕ ನಾಟಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ.
ಪೂಕರೆ ಹಾಕುವ ಸಂದರ್ಭದಲ್ಲಿ ಆಯಾಯ ಗ್ರಾಮಕ್ಕೆ ಸಂಬಂಧಪಟ್ಟ ದೈವಗಳ ಉಪಸ್ಥಿತಿಯೂ ಇರುತ್ತದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಕಂಡ ವಸಾಯಿ ಸಂಪ್ರದಾಯದಲ್ಲಿ ಮೂಲ ಬ್ರಹ್ಮೆರೆ ದೈವದ ಕಟ್ಟಲೆ ನಡೆಯುತ್ತದೆ. ಬ್ರಹ್ಮೆರೆ ಬದಲು ಇನ್ನು ಕೆಲವು ಕಡೆಗಳಲ್ಲಿ ಅಂಗತ ಪಂಜುರ್ಲಿ ದೈವದ ಉಪಸ್ಥಿತಿಯೂ ಇರುತ್ತದೆ. ಈ ಸಂಪ್ರದಾಯ ಇಂದು ಕೆಲವು ಕಡೆಗಳಲ್ಲಿ ಬಹುತೇಕ ಮಾಯವಾಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ.
Dakshina Kannada,Karnataka
December 15, 2025 11:59 AM IST