Last Updated:
ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಪಣೋಲಿಬೈಲು ಕ್ರಾಸ್ ಬಳಿ ಕಸದ ಗಬ್ಬು ವಾಸನೆ, ಬೀದಿ ನಾಯಿಗಳ ಸಮಸ್ಯೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ನೆಗೆಟಿವ್ ಇಮೇಜ್.
ದಕ್ಷಿಣ ಕನ್ನಡ: ಜಗತ್ತಿನ ಒಂದೊಂದು ಪ್ರದೇಶ (Place) ತನ್ನ ವಿಶೇಷತೆಗಳಿಂದಾಗಿ ಎಲ್ಲೆಡೆ ಗುರುತಿಸಿಕೊಳ್ಳುತ್ತವೆ. ಅದೇ ರೀತಿ ನಮ್ಮ ದಕ್ಷಿಣ ಕನ್ನಡದಲ್ಲಿ(Dakshina Kannada) ಇದೇ ರೀತಿಯ ಹಲವಾರು ವಿಶೇಷತೆಯ ಪ್ರದೇಶಗಳಿವೆ. ಈ ಪ್ರದೇಶಗಳಲ್ಲಿ ಕೆಲವು ಪಾಸಿಟಿವ್ ವಿಚಾರಗಳಿಗಾಗಿ (Positive) ಗುರುತಿಸಿಕೊಂಡರೆ, ಇನ್ನು ಕೆಲವು ನೆಗೆಟಿವ್ ವಿಚಾರದಲ್ಲಿ ಗುರುತಿಸಿಕೊಂಡಿದೆ. ಇಂತಹ ನೆಗೆಟಿವ್ ಇಮೇಜ್ ಕೊಡುವ ಪ್ರದೇಶಗಳಲ್ಲಿ ಬಂಟ್ವಾಳ (Bantwal) ತಾಲೂಕಿನ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಇಂತಹುದೊಂದು ಸ್ಪಾಟ್ ಇದೆ.
ಮುಡಿಪು ಜಂಕ್ಷನ್ನಿಂದ ಮೆಲ್ಕಾರ್ ಸಂಪರ್ಕಿಸುವ ರಸ್ತೆಯ ಪಣೋಲಿಬೈಲು ಕ್ರಾಸ್ ಬಳಿ, ರಸ್ತೆಯ ಎರಡೂ ಪಕ್ಕದಲ್ಲಿ ಈ ಗ್ರಾಮದ ಎಲ್ಲಾ ಮನೆಗಳ ಒಣ ಕಸ, ಹಸಿ ಕಸ ಹೀಗೆ ಎಲ್ಲಾ ರೀತಿಯ ಕಸಗಳು ಡಂಪ್ ಆಗುವ ಸ್ಪಾಟ್ ಇದು. ವಿಶೇಷವೆಂದರೆ ಈ ಸ್ಪಾಟ್ನ ಕೂಗಳತೆಯ ದೂರದಲ್ಲೇ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಇದೆ. ಇಲ್ಲಿ ಶೇಖರಣೆಯಾದ ಕಸದ ಗಬ್ಬು ವಾಸನೆ ಗ್ರಾಮ ಪಂಚಾಯತ್ ಬಳಿಯೂ ಹಬ್ಬುವಷ್ಟು ದೂರದಲ್ಲಿ ಈ ಕಸದ ಸ್ಪಾಟ್ ಇದ್ದರೂ, ಪಂಚಾಯತ್ನ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳು ಮೂಗಿಲ್ಲದಂತೆ ವರ್ತಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ.
ಮನೆ, ಹೋಟೆಲ್, ಸಮಾರಂಭದಲ್ಲಿ ಬಾಕಿ ಉಳಿದ ಹಸಿ ಕಸಗಳನ್ನು ಟನ್ ಗಟ್ಟಲೆ ಇಲ್ಲಿ ಸುರಿಯಲಾಗುತ್ತಿದ್ದು, ಬೀದಿ ನಾಯಿಗಳು ಇಲ್ಲಿ ಹೆಚ್ಚಾಗಿವೆ. ಅಲ್ಲದೆ ಕಸದ ಜೊತೆಗೆ ಪ್ಲಾಸ್ಟಿಕ್ ಅನ್ನೂ ಇಲ್ಲಿ ಜಾನುವಾರುಗಳು ತಿನ್ನುತ್ತಿದ್ದು, ಇದು ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆಗಳು ಹೆಚ್ಚಾಗಿವೆ. ಪ್ರತಿಬಾರಿಯೂ ಇಲ್ಲಿ ಲೋಡುಗಟ್ಟಲೆ ಕಸ ಸುರಿದ ಬಳಿಕ ಪಂಚಾಯತ್ ಇಲ್ಲಿ ಕಸಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದೆ.
ಅದೇ ಹಣದಲ್ಲಿ ಈ ಪ್ರದೇಶದಲ್ಲಿ ಒಂದು ಕ್ಯಾಮೆರಾ ಅಳವಡಿಸಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಲ್ಲಿ ಪಂಚಾಯತ್ಗೆ ಕಸ ಎಸೆಯುವವರ ಮೇಲೆ ಹಾಕುವ ದಂಡದಿಂದಲೇ ಪಂಚಾಯತ್ ಅನ್ನು ನಿರ್ವಹಣೆ ಮಾಡುವಷ್ಟು ಪ್ರಕರಣಗಳು ಇಲ್ಲಿವೆ. ಪಂಚಾಯತ್ ಆಡಳಿತದ ಬೇಜವಾಬ್ದಾರಿಯನ್ನು ಕಸ ಎಸೆಯುವ ಮಂದಿ ತಮ್ಮ ಲೈಸೆನ್ಸ್ ಎಂದು ಪರಿಗಣಿಸಿದ ಕಾರಣಕ್ಕಾಗಿಯೇ ಇಲ್ಲಿ ಈ ಸ್ಥಿತಿ ನಿರ್ಮಾಣಗೊಂಡಿದೆ.
ಪಣೋಲಿಬೈಲು ಜಾಗತಿಕವಾಗಿ ಅಪ್ಪೆ ಕಲ್ಲುರ್ಟಿಯ ಕಾರಣಿಕದಿಂದ ಗುರುತಿಸಿಕೊಂಡಿದೆ, ಇಲ್ಲಿ ದಿನವೂ ಜನ ಬಂದು ಅಗೇಲು ಕೊಡುತ್ತಾರೆ. ಅದೂ ಕೂಡ ಬರೀ ದಕ್ಷಿಣ ಕನ್ನಡದವರಲ್ಲ ಇಡೀ ಭಾರತದ ಜನ, ಹೀಗೆ ಬರುವವರು ಈ ರಸ್ತೆ ದಾಟಲೇಬೇಕು, ಸ್ಮಾರ್ಟ್ ಸಿಟಿಯ ಪರಿಕಲ್ಪನೆ ಹೊತ್ತು ಬಂದ ಪ್ರವಾಸಿಗರಿಗೆ ಈ ಪ್ರದೇಶ ಮುಜುಗರ ತರುವುದಿಲ್ಲವೇ ಎಂಬ ಸಾಮಾನ್ಯ ಪ್ರಜ್ಞೆ ಅಧಿಕಾರಿಗಳಲ್ಲಿಲ್ಲ ಎಂಬುದು ವಿಪರ್ಯಾಸ
Dakshina Kannada,Karnataka