Last Updated:
ದಕ್ಷಿಣ ಕನ್ನಡ ಗ್ರಾಮೀಣ ಭಾಗದಲ್ಲಿ ಅಂಬಾಸಿಡರ್ ಕಾರುಗಳು ಒಂದು ಕಾಲದಲ್ಲಿ ಪ್ರಮುಖ ಸಾರಿಗೆವಾಗಿದ್ದವು, ಈಗ ಬಸ್ ಸೇವೆ ಮತ್ತು ಸರ್ಕಾರದ ನಿಯಮಗಳಿಂದ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ದಕ್ಷಿಣ ಕನ್ನಡ: ಒಂದು ಕಾಲದಲ್ಲಿ ದೇಶದ (Nation) ಪ್ರಧಾನಿಯಿಂದ ಹಿಡಿದು ಶಾಸಕನವರೆಗೂ ಉಪಯೋಗದಲ್ಲಿದ್ದ ಅಂಬಾಸಿಡರ್ ಕಾರುಗಳು (Car) ಇಂದು ತನ್ನ ಆ ವೈಭವದ ದಿನಗಳಿಂದ ನೇಪಥ್ಯಕ್ಕೆ ಸರಿಯುತ್ತಿವೆ. ಅದರಲ್ಲೂ ದಕ್ಷಿಣಕನ್ನಡ (Dakshina Kannada) ಗ್ರಾಮೀಣ ಭಾಗದ (Rural Village) ಬಹುತೇಕ ಜನ ಮೊದಲ ಬಾರಿಗೆ ಕಾರಿನಲ್ಲಿ ಸಂಚರಿಸಿದ್ದಲ್ಲಿ ಅದು ಅಂಬಾಸಿಡರ್ ಕಾರೇ ಆಗಿತ್ತು ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಹೌದು, ಬಸ್ ಸಂಪರ್ಕ ಅತೀ ವಿರಳ ಇದ್ದ ಆ ದಿನಗಳಲ್ಲಿ ಜಿಲ್ಲೆಯ ಬಹು ಭಾಗದ ಜನರ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದು ಇದೇ ಅಂಬಾಸಿಡರ್ ಕಾರುಗಳು. ಮಂಗಳೂರು- ಬಿ.ಸಿ. ರೋಡ್, ಬಿ.ಸಿ. ರೋಡ್-ಪುತ್ತೂರು, ಬಿ.ಸಿ. ರೋಡ್- ಉಪ್ಪಿನಂಗಡಿ, ಪುತ್ತೂರು- ವಿಟ್ಲ ಹೀಗೆ ಹಲವು ಕಡೆಗಳ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಡ್ರಾಪ್ ಮತ್ತು ಪಿಕ್ ಅಪ್ ಮಾಡುತ್ತಿದ್ದಿದ್ದು ಇದೇ ಕಾರುಗಳು. ಆ ಕಾಲದಲ್ಲಿ ಬಸ್ ವ್ಯವಸ್ಥೆ ಅತೀ ಕಡಿಮೆ ಇದ್ದ ಸಂದರ್ಭದಲ್ಲಿ ಈ ಅಂಬಾಸಿಡರ್ ಸರ್ವೀಸ್ ಕಾರುಗಳದ್ದೇ ಕಾರುಬಾರು.
ಆ ಕಾಲದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ.ರೋಡ್, ವಿಟ್ಲ, ಪುತ್ತೂರು ಭಾಗದಲ್ಲೇ ಸುಮಾರು 2 ಸಾವಿರಕ್ಕೂ ಮಿಕ್ಕಿದ ಅಂಬಾಸಿಡರ್ ಕಾರುಗಳು ತಮ್ಮ ಸೇವೆಯನ್ನು ನೀಡುತ್ತಿದ್ದವು. ಯಾವಾಗ ಈ ಭಾಗದಲ್ಲಿ ಸರಕಾರಿ ಬಸ್ ಸಂಚಾರ ಆರಂಭಗೊಂಡಿತೋ ಅಂದಿನಿಂದ ಅಂಬಾಸಿಡರ್ ಸರ್ವೀಸ್ ಕಾರುಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ.
ಆದರೆ ಅಂಬಾಸಿಡರ್ ಕಾರುಗಳು ಇಂದಿಗೂ ತಮ್ಮ ಗೆಟಪ್ ಅನ್ನ ಇಂದಿಗೂ ಹಾಗೇ ಕಾಯ್ದುಕೊಂಡಿದೆ. ಮಂಗಳೂರು-ಬಿ.ಸಿ. ರೋಡ್, ಬಿ.ಸಿ.ರೋಡ್ ಪುತ್ತೂರು ಮಧ್ಯೆ ದು ಅಂಬಾಸಿಡರ್ ಕಾರುಗಳ ಸಂಖ್ಯೆ ಶೂನ್ಯ ಆಗಿದ್ದರೆ, ವಿಟ್ಲ- ಪುತ್ತೂರು ಮಧ್ಯೆ ಇಂದಿಗೂ ಸುಮಾರು ಹತ್ತರಿಂದ ಹನ್ನೆರಡು ಕಾರುಗಳು ದಿನಂಪ್ರತಿ ಸೇವೆಯನ್ನು ಸದ್ಯಕ್ಕೆ ಮುಂದುವರಿಸಿದೆ. ವಿಟ್ಲ-ಪುತ್ತೂರು ನಡುವಿನ ಮಾರ್ಗದಲ್ಲಿ ಒಂದು ಕಾಲದಲ್ಲಿ 200 ಕ್ಕೂ ಮಿಕ್ಕಿದ ಅಂಬಾಸಿಡರ್ ಕಾರುಗಳಿದ್ದವು.
ಆದರೆ ಇತ್ತೀಚಿನ ದಿನಗಳಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಳ ಒಂದೆಡೆಯಾದರೆ, ಇನ್ನೊಂದೆಡೆ ರಾಜ್ಯ ಸರಕಾರದ ಫ್ರೀ ಬಸ್ ಯೋಜನೆಯೂ ಅಂಬಾಸಿಡರ್ ಕಾರು ಚಾಲಕರ ಹೊಟ್ಟೆಗೆ ಕಲ್ಲು ಹಾಕಿದೆ. ಬಹುತೇಕ ಎಲ್ಲಾ ಅಂಬಾಸಿಡರ್ ಕಾರುಗಳು 20 ವರ್ಷಕ್ಕಿಂತ ಹಿಂದಿನ ಮೋಡಲ್ ಗಳಾಗಿದ್ದು, ಸಾರಿಗೆ ಇಲಾಖೆಯಲ್ಲಿ ಫಿಟ್ನೆಸ್ ಸರ್ಟಿಫಿಕೇಟ್ ಗೆ ಅರ್ಜಿ ಸಲ್ಲಿಸುವ ವೇಳೆ ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.
ಅಂಬಾಸಿಡರ್ ಬರೀ ಕಾರಲ್ಲ, ಅದೊಂದು ಹೆಗ್ಗುರುತು
ಇಂದಿನ ಕಾಲಕ್ಕೆ ತಕ್ಕುದಾದ ಹಲವು ವ್ಯವಸ್ಥೆಗಳನ್ನ ಅಂಬಾಸಿಡರ್ ಕಾರುಗಳಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಚಾಲಕರದ್ದಾಗಿದೆ. ಅಂಬಾಸಿಡರ್ ಕಾರುಗಳನ್ನು ಮಾರಾಟ ಮಾಡಿ ಹೊಸ ಮೋಡಲ್ ಕಾರುಗಳತ್ತ ಹೋಗುವ ಬಗ್ಗೆಯೂ ಚಾಲಕರಲ್ಲಿ ಗೊಂದಲಗಳಿವೆ. ಫ್ರೀ ಬಸ್ ನಿಂದಾಗಿ ಬಾಡಿಗೆ ಸಿಗದಿದ್ದಲ್ಲಿ ವಾಹನಕ್ಕೆ ಮಾಡಿದ ಸಾಲದ ಕಂತು ಕಟ್ಟೋದು ಹೇಗೆ ಎನ್ನುವ ಪ್ರಶ್ನೆ ಹಲವರ ಮುಂದಿದೆ. ಇನ್ನು ಕೆಲವರಿಗೆ ಅಂಬಾಸಿಡರ್ ಕಾರನ್ನು ಬಿಟ್ಟು ಬೇರೆ ಕಾರನ್ನು ಖರೀದಿಸುವ ಮನಸ್ಸಿಲ್ಲ. ಅಂಬಾಸಿಡರ್ ಕಾರಿನಷ್ಟು ಗಟ್ಟಿಯಾದ, ವಿಶ್ವಾಸನೀಯ ಕಾರನ್ನು ಮಾರಾಟ ಮಾಡಲು ಸಿದ್ಧವಿಲ್ಲದ ಹಲವಾರು ಚಾಲಕರು,ಮಾಲಕರು ಇಂದಿಗೂ ಇದ್ದಾರೆ.
Dakshina Kannada,Karnataka