Last Updated:
ಸುನೀಲ್ ಶೆಟ್ಟಿ ಅವರು ಮಂಗಳೂರು ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿ ಮಗ ಆಹಾನ್ ಶೆಟ್ಟಿ ನಟನೆಯ ಬಾರ್ಡರ್-2 ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯರು ಗೌರವಿಸಿದರು.
ದಕ್ಷಿಣಕನ್ನಡ: ಕೊರಗಜ್ಜನ (Koragajja) ಕರುಣೆಗೆ ಒಳಗಾಗದವರು ಯಾರಿದ್ದಾರೆ? ಕೆ.ಎಲ್. ರಾಹುಲ್, ಕತ್ರಿನಾ ಇಂದ ಹಿಡಿದು ಕನ್ನಡದ ಎಲ್ಲಾ ತಾರೆಗಳು (Stars) ಕೊರಗಜ್ಜನ ಭಕ್ತರು. ಮುಲ್ಕಿಯಲ್ಲಿ ಹುಟ್ಟಿ ಬೆಳೆದು ಮುಂಬೈ ಸಿನಿ ಜಗತ್ತನ್ನು ʼಅಣ್ಣʼನಾಗಿ ಆಳಿದ ಸುನೀಲ್ ಶೆಟ್ಟಿ (Sunil Shetty) ಮೊದಲಿನಿಂದಲೂ ಕೊರಗಜ್ಜನ ಭಕ್ತರು. ಈಗ ಅಳಿಯನ ನಂತರ ಮಾವನೂ ಕೊರಗಜ್ಜನ ಸಾನಿಧ್ಯಕ್ಕೆ (Shrine) ಬಂದಿದ್ದಾರೆ. ಹಾಗಾದರೆ ಸುನೀಲ್ ಶೆಟ್ಟಿ ಇಲ್ಲಿಗೆ ಬರಲು ಕಾರಣವೇನು? ಇಲ್ಲಿದೆ ಸಂಪೂರ್ಣ ವರದಿ.
ಕರಾವಳಿಯ ಕಾರಣಿಕ ಕ್ಷೇತ್ರ, ಮಂಗಳೂರು ಹೊರವಲಯದ ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಸ್ಥಳಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಶುಕ್ರವಾರ ಭೇಟಿ ನೀಡಿ, ತನ್ನ ಮಗನ ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. 90ರ ದಶಕದಲ್ಲಿ ತೆರೆಕಂಡ ಅತ್ಯದ್ಭುತ ಚಿತ್ರ ಸುನೀಲ್ ಶೆಟ್ಟಿಯವರ ಬಾರ್ಡರ್. ಈಗ ಅವರ ಮಗ ಬಾರ್ಡರ್-2 ಹೆಸರಲ್ಲಿ ಚಿತ್ರ ಮಾಡುತ್ತಿದ್ದಾರೆ. ಆ ಚಿತ್ರ ಯಶಸ್ವಿಯಾಗಲಿ ಎಂದು ಸುನೀಲ್ ಶೆಟ್ಟಿ ಇಲ್ಲಿ ಪ್ರಾರ್ಥಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿಗೆ ಯಾರು ಬಂದರೂ ಕೊರಗಜ್ಜನ ಕ್ಷೇತ್ರಕ್ಕೆ ಬಂದೇ ಬರ್ತಾರೆ. ಯಾರೇ ಬಂದರೂ ಕೊರಗಜ್ಜ ಅವರ ಬಯಕೆಗಳನ್ನು ಈಡೇರಿಸುತ್ತಾರೆ. ನನ್ನ ಮಗ, ಮಗಳು, ಅಳಿಯ ಎಲ್ಲರೂ ಇಲ್ಲಿಗೆ ಬಂದಿದ್ದಾರೆ. ನನಗೂ ಇಲ್ಲಿ ಬರಲು ಬಹಳ ಆಸೆ ಇತ್ತು, ಅದು ಇಂದು ನೆರವೇರಿದೆ. ಪುತ್ರ ಅಹಾನ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಬಾರ್ಡರ್-2 ಚಿತ್ರ ಬಿಡುಗಡೆಯಾಗುತ್ತಿದೆ. ಅದರ ಯಶಸ್ಸಿಗಾಗಿ ಆಶೀರ್ವಾದ ಬೇಡಲು ಇಲ್ಲಿಗೆ ಬಂದಿದ್ದೇನೆ ಎಂದರು.
ದೈವಸ್ಥಾನದ ವತಿಯಿಂದ ಬಾಲಿವುಡ್ ಸ್ಟಾರ್ಗೆ ಗೌರವ
ತುಳು ಭಾಷೆ, ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸುವ ಉದ್ದೇಶದಿಂದ ಈಗಾಗಲೇ “ಜೈ” ತುಳು ಸಿನಿಮಾದಲ್ಲಿ ನಟಿಸಿದ್ದೇನೆ. ತುಳು, ಕನ್ನಡ ಸಿನೆಮಾದಲ್ಲಿ ಸದ್ಯಕ್ಕೆ ಬೇರೆ ಯೋಜನೆಗಳಿಲ್ಲ ಎಂದರು. ಕುತ್ತಾರು ಕೊರಗತನಿಯ ಆದಿಸ್ಥಳ ಕ್ಷೇತ್ರದ ಪರವಾಗಿ ನಟ ಸುನಿಲ್ ಶೆಟ್ಟಿ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು. ಮುಂಬೈ ಉದ್ಯಮಿ ವಿವೇಕ್ ಶೆಟ್ಟಿ ಬೊಲ್ಯಗುತ್ತು, ಕುತ್ತಾರು ಕೊರಗತನಿಯ ಆದಿಕ್ಷೇತ್ರದ ಮಹಾಬಲ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ಶ್ರೀರಾಮ್ ರೈ ಮೊದಲಾದವರು ಉಪಸ್ಥಿತರಿದ್ದರು.
Dakshina Kannada,Karnataka
Jan 17, 2026 11:17 AM IST