Last Updated:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರಜ್ಞಾ ಆಶ್ರಮದಲ್ಲಿ ವಿಶೇಷ ಮಕ್ಕಳಿಗೆ ಸೇವೆ ಸಲ್ಲಿಸಲಾಗುತ್ತಿದೆ.
ದಕ್ಷಿಣ ಕನ್ನಡ: ಮನೆಯಲ್ಲಿ ಒಂದಿಬ್ಬರು ಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳೋದೇ ಪೋಷಕರಿಗೆ ಒಂದು ತ್ರಾಸದ ಕೆಲಸವೇ ಆಗಿದೆ. ಹೀಗಿರುವಾಗ ಹತ್ತಾರು ವಿಶೇಷ ಚೇತನದ ಮಕ್ಕಳನ್ನು (Special Children’s) ನೋಡಿಕೊಳ್ಳೋದು ಸಾಮಾನ್ಯರ ಊಹೆಗೂ ನಿಲುಕದ ಮಾತು. ಆದರೆ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ವಿಶೇಷ ಚೇತನ ಮಕ್ಕಳನ್ನು ಲಾಲನೆ-ಪಾಲನೆಯಲ್ಲಿ ತೊಡಗಿಕೊಂಡಿದೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಪ್ರಜ್ಞಾ ಆಶ್ರಮ. ಆಶ್ರಮದಲ್ಲಿ ಸಂಘ-ಸಂಸ್ಥೆಗಳು ತಮ್ಮ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಸಂತಸದ ಕ್ಷಣಗಳಲ್ಲಿ ವಿಶೇಷ ಮಕ್ಕಳನ್ನೂ ಸೇರಿಸಿಕೊಳ್ಳುತ್ತಾರೆ. ಇಂತಹುದೇ ಒಂದು ಕಾರ್ಯಕ್ರಮವನ್ನು ಪುತ್ತೂರಿನ ಸಿಟಿ ಆಟ್ರ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಮಕರ ಸಂಕ್ರಾತಿಯ ಹಬ್ಬದ ದಿನದಲ್ಲಿ ಹಮ್ಮಿಕೊಂಡಿತ್ತು. ಮಕ್ಕಳಿಗೆ ಎಳ್ಳು-ಬೆಲ್ಲ ನೀಡುವ ಮೂಲಕ ವಿಶೇಷ ರೀತಿಯ ಕಾರ್ಯಕ್ರಮವನ್ನು ವಿಶೇಷ ಮಕ್ಕಳ ಜೊತೆಗೆ ಆಯೋಜಿಸಿತ್ತು.
ಇತ್ತೀಚೆಗೆ ಸಿಟಿ ಆಟ್ರ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ತನ್ನ ಹದಿನೈದನೇ ವರ್ಷದ ಅಮರ್ ಅಕ್ಬರ್ ಆಂಟೋನಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿತ್ತು. ಈ ಪಂದ್ಯಾಟವನ್ನು ಇದೇ ಪ್ರಜ್ಞಾ ಆಶ್ರಮದ ಮಕ್ಕಳು ಉದ್ಘಾಟಿಸಿದ್ದರು. ಪಂದ್ಯಾಟವನ್ನು ಉದ್ಘಾಟಿಸಿದ ಬಳಿಕ ಯಶಸ್ವಿಯಾಗಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮಕ್ಕಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಮಕ್ಕಳಿಗೆ ಕ್ರಿಕೆಟ್ ನ ಜರ್ಸಿ ನೀಡಿ ಸತ್ಕರಿಸಲಾಗಿದೆ.
ಅಲ್ಲದೇ ಮಕರ ಸಂಕ್ರಮಣದ ಪ್ರಯುಕ್ತ ಎಳ್ಳು-ಬೆಲ್ಲ ನೀಡಿ ಸಂತಸವನ್ನು ಹಂಚಲಾಗಿದೆ. ಪ್ರಜ್ಞಾ ಆಶ್ರಮವು ಇದೀಗ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಸ್ವಂತ ಕಟ್ಟಡ ಬೇಕೆನ್ನುವ ಕನಸು ಮಾತ್ರ ಕನಸಾಗಿಯೇ ಉಳಿದಿದೆ.
Dakshina Kannada,Karnataka