Last Updated:
ಪುತ್ತೂರಿನ ಭರತನಾಟ್ಯ ಕಲಾವಿದ ಬಿ. ದೀಪಕ್ ಕುಮಾರ್ ಅವರು 30 ವರ್ಷಗಳ ಬಳಿಕ ತಮ್ಮ ರಂಗಪ್ರವೇಶದ ನೃತ್ಯಗಳನ್ನು ಪುನಃ ಪ್ರಸ್ತುತಪಡಿಸಿ ಕಲಾರಾಧಕರನ್ನು ಮಂತ್ರಮುಗ್ದಗೊಳಿಸಿದರು.
ದಕ್ಷಿಣ ಕನ್ನಡ: 30 ವರ್ಷದ ಹಿಂದೆ 17 ರ ತರುಣನಾಗಿದ್ದು ಪುತ್ತೂರಿನ (Puutur) ಖ್ಯಾತ ಭರತನಾಟ್ಯ ಕಲಾವಿದ (Bharatanatya Artist) ಬಿ. ದೀಪಕ್ ಕುಮಾರ್ ಅವರು ತನ್ನ ರಂಗಪ್ರವೇಶದ ಕ್ಷಣವನ್ನು 30 ವರ್ಷದ ಬಳಿಕ (30 Years) ಮತ್ತೊಮ್ಮೆ ಅದೇ ನೃತ್ಯಗಳನ್ನು ಯಶಸ್ವಿಯಾಗಿ ಪ್ರಸ್ತುತ ಪಡಿಸಿದ್ದಾರೆ. ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ನೃತ್ಯೋತ್ಕ್ರಮಣ ಕಾರ್ಯಕ್ರಮ ಮೂಲಕ ಅವರು ಕಲಾರಾಧಕರನ್ನು ಮಂತ್ರಮುಗ್ದಗೊಳಿಸಿದ್ದಾರೆ. ನೃತ್ಯದ ಕೊನೆಯ ತಿಲ್ಲಾನದಲ್ಲಿ ತುಂಬಿದ ಸಭೆಯೇ ಎದ್ದು ನಿಂತು ಚಪ್ಪಾಳೆಯೊಂದಿಗೆ ಕಲೆಗೆ ಗೌರವ ನೀಡಿರುವುದು ವಿದ್ವಾನ್ ದೀಪಕ್ ಕುಮಾರ್ ಅವರ ಸಾಧನೆಗೆ ಸಿಕ್ಕ ಗೌರವವಾಗಿದೆ.
1996 ರ ಜನವರಿ 12 ರಂದು ಮಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ರಂಗಪ್ರವೇಶವನ್ನು 30 ವರ್ಷಗಳ ಬಳಿಕ ಮತ್ತೆ ಅದನ್ನೇ ನೆನಪಿಸಿ ಮರುಸೃಷ್ಟಿಸುವ ಮೂಲಕ ಮತ್ತೊಮ್ಮೆ ಅವರು ಹದಿನೇಳರ ತರುಣರಾಗಿ ಕಲೆಯನ್ನು ಅರ್ಪಣೆ ಮಾಡಿದರು.
ವಿದ್ವಾನ್ ದೀಪಕ್ ಕುಮಾರ್ ಅವರ ರಂಗಪ್ರವೇಶಕ್ಕೆ ಹಿನ್ನೆಲೆ ನುಡಿಸಿದವರ ಪೈಕಿ ಮೃದಂಗ ವಾದನ ಮಾಡಿದ ಕರ್ನಾಟಕ ಕಲಾಶ್ರೀ ಜಿ ಗುರುಮೂರ್ತಿ ಬೆಂಗಳೂರು ಅವರು 30 ವರ್ಷದ ಬಳಿಕ ದೀಪಕ್ ಕುಮಾರ್ ಗೆ ಮತ್ತೊಮ್ಮೆ ಮೃದಂಗ ನುಡಿಸಿದರು. ಅದೇ ರೀತಿ ಅಂದು ನೃತ್ಯದ ಅಮೂಲ್ಯ ಕ್ಷಣಗಳನ್ನು ಸೆರಹಿಡಿದ ಯಜ್ಞ ಮಂಗಳೂರು ಅವರು ನೃತ್ಯದ ಕ್ಷಣಗಳನ್ನು ಮತ್ತೊಮ್ಮೆ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ದೀಪಕ್ ಕುಮಾರ್ ಅವರ ನೃತ್ಯ ಗುರುಗಳಾದ ಡಾ. ವೀಣಾ ಮೂರ್ತಿ ವಿಜಯ್ ಬೆಂಗಳೂರು ಮತ್ತು ವಿದುಷಿ ರಾಜಶ್ರೀ ಉಳ್ಳಾಲ ಮಂಗಳೂರು, ವಿದ್ವಾನ್ ಉಳ್ಳಾಲ್ ಮೋಹನ್ ಕುಮಾರ್ ಅವರ ಪುತ್ರಿ ರಾಜಶ್ರೀ ಉಳ್ಳಾಲ್ ಸಹಿತ ಪುತ್ತೂರಿನ ಅನೇಕ ಹಿರಿಯ, ಕಿರಿಯ ನೃತ್ಯಗುರುಗಳು, ಗಣ್ಯರು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು.
ರಂಗ್ರಪವೇಶದ ಸಂದರ್ಭ ಗುರು ವಿದುಷಿ ಶ್ರೀಮತಿ ನರ್ಮದಾ ಅವರ ನಿದೇರ್ಶನದಲ್ಲಿ ಖಚಿತ ಹಸ್ತಮುದ್ರೆ, ಆಕರ್ಷಕ ಉಡುವುಗಳ ಮೂಲಕ ಪ್ರಾರಂಭದಲ್ಲಿ ದೇವರು, ಭೂದೇವಿ, ಗುರುಗಳು ಹಾಗೂ ಸಭಾಸದನಲ್ಲಿ ನೆರೆದಿದ್ದ ಪ್ರೇಕ್ಷಕರಿಗೂ ಸವಿನಯವಾಗಿ ನೃತ್ಯದ ಮೂಲಕ ವಂದನೆ ಸಲ್ಲಿಸಿದರು.
ಖಂಡತ್ರಿಪುಟದಲ್ಲಿ ಸಾಂಪ್ರದಾಯಿಕ `ಅಲಾರಿಪು’ವನ್ನು ಖಚಿತ ಹಸ್ತಮುದ್ರೆ, ಆಕರ್ಷಕ ಅಡವುಗಳ ಸುಂದರ ಅಭಿವ್ಯಕ್ತಿಯಲ್ಲಿ ಪ್ರಾರ್ಥನಾ ರೂಪದ ನೃತ್ಯವನ್ನು ಅರ್ಪಿಸಿದರು. ಬಳಿಕ ನಾಟರಾಗ ಆದಿತಾಳದಲ್ಲಿ ಆನಂದ ನರ್ತನ ಮಾಡಿದರು. ದೀಪಕ್ ಕುಮಾರ್ ಅವರ ಜೀವನದ ಸುಂದರ ಮತ್ತು ಕ್ಲಿಷ್ಟಕರ ಜತಿಸ್ವರದಲ್ಲಿ ಒಂದಾದ ಅಬೋಗಜತಿಸ್ವರದಲ್ಲಿ ತೋಡಿರಾಗ ಆದಿತಾಳದಲ್ಲಿ ‘ಆದಿಶಿವನೆ’ ಎಂಬ ಶಿವಸ್ತುತಿಯಲ್ಲಿ ಸುಮಾರು ಅರ್ಧ ಗಂಟೆಯ ‘ವರ್ಣ’ದಲ್ಲಿ ಶಿವನ ಸಂಪೂರ್ಣ ಚಿತ್ರಣ ಮುಂದಿಟ್ಟರು. ಬಳಿಕ ತನ್ನದೇ ನಿರ್ದೇಶನದ ಯಮನ್ ಕಲ್ಯಾಣಿ ಮಿಶ್ರಬಾವು ತಾಳದಲ್ಲಿ ಶ್ರೀರಾಮಚಂದ್ರ ಭಜನ್ ನೃತ್ಯ, ನೃತ್ಯೋತ್ಕøಮಣದ ಅಂತಿಮ ಭಾಗದಲ್ಲಿ ವೃತ್ತ ಪ್ರಮುಖವಾದ ‘ತಿಲ್ಲಾನ’ವನ್ನು ಧನುಶ್ರೀ ರಾಗ-ಆದಿತಾಳದಲ್ಲಿ ಅಪೂರ್ವ ಜತಿಗಳ ಪ್ರದರ್ಶನದೊಂದಿಗೆ ನೃತ್ಯ ರಸಧಾರೆಯನ್ನು ಹರಿಸಿದರು.
Dakshina Kannada,Karnataka
Jan 23, 2026 11:13 AM IST