Last Updated:
ಪ್ರತಿ ವಿದ್ಯಾರ್ಥಿಗೆ ಅಂದಾಜು 5 ಸಾವಿರ ರೂಪಾಯಿಗಳಷ್ಟು ಶುಲ್ಕ ಕಟ್ಟಬೇಕಾಗಿದ್ದು, ಈ ಎಲ್ಲಾ ಶುಲ್ಕವನ್ನು ಮನ್ನಾ ಮಾಡಿ ಉಚಿತವಾಗಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರ್ಪಡೆಗೊಳಿಸಲಾಗುತ್ತೆ. ಈ ಕಾರಣಕ್ಕಾಗಿ ಈ ಶುಲ್ಕದ ಖರ್ಚನ್ನು ಭರಿಸುವಂತೆ ದಾನಿಗಳ,ಸಂಘ-ಸಂಸ್ಥೆಗಳ ನೆರವನ್ನೂ ಕೋರಲಾಗಿದ್ದು, ಪೂರಕ ಸ್ಪಂದನೆಯೂ ದೊರೆತಿದೆ.
ದಕ್ಷಿಣ ಕನ್ನಡ: ಶಿಕ್ಷಣ ಇಂದು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ(Education Institutions) ಉದ್ಯಮವಾಗಿ ಬಿಟ್ಟಿದೆ. ಈ ಕಾರಣಕ್ಕಾಗಿ ಹಲವು ರೀತಿಯ ವಿನೂತನ ಸೌಲಭ್ಯಗಳನ್ನು ನೀಡುವ ಆಶ್ವಾಸನೆಗಳನ್ನು ನೀಡುತ್ತವೆ. ವಿದ್ಯಾರ್ಥಿಗಳನ್ನು(Students) ಸೆಳೆಯಲು ಖಾಸಗಿ ಶಾಲಾ-ಕಾಲೇಜುಗಳು(School- Colleges) ತರತರಹದ ಆಫರ್ ಗಳನ್ನು ನೀಡುತ್ತವೆ. ಆದರೆ ಸರಕಾರಿ ಕಾಲೇಜುಗಳಲ್ಲಿ(Government College) ಈ ರೀತಿ ಆಫರ್ ಗಳನ್ನು ನೀಡಿರೋದು ಬಹಳ ಕಡಿಮೆಯೇ. ಇಲ್ಲೊಂದು ಕಾಲೇಜು ತಮ್ಮ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಆಫರ್ ನೀಡುವ ಮೂಲಕ ಸುದ್ಧಿಯಲ್ಲಿದೆ. ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳ ಕಾಲೇಜು ಶುಲ್ಕವೆಲ್ಲವನ್ನೂ ಭರಿಸುವ ವ್ಯವಸ್ಥೆಗೆ ಈ ಕಾಲೇಜು ಮುಂದಾಗಿದೆ.
ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಿಂದ ಸ್ವಲ್ಪ ದೂರದಲ್ಲಿರುವ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷದಿಂದ ಆರಂಭಗೊಂಡ ಆಫರ್. ವಿದ್ಯಾರ್ಥಿಗಳಿಗೆ ಕಲಿಯಲು ಪ್ರಶಾಂತವಾದ ವಾತಾವರಣವಿರಲಿ ಎನ್ನುವ ಕಾರಣಕ್ಕೆ ಈ ಕಾಲೇಜನ್ನು ಪುತ್ತೂರು ನಗರದಿಂದ ಹೊರ ಭಾಗದಲ್ಲಿ ಈ ಕಾಲೇಜನ್ನು ನಿರ್ಮಿಸಲಾಗಿದೆ. ಸುಸಜ್ಜಿತ ಕಟ್ಟಡದ ಜೊತೆಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನೂ ಹೊಂದಿರುವ ಈ ಕಾಲೇಜಿಗೆ ಮಾತ್ರ ಇತ್ತೀಚಿನ ಕೆಲವು ವರ್ಷಗಳಿಂದ ಹೊಸ ವಿದ್ಯಾರ್ಥಿಗಳ ಸೇರ್ಪಡೆಯ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ.
ಇದನ್ನೂ ಓದಿ: Achievement: ಇಂಡಿಯಾ ಬುಕ್ ಆಫ್ ರೆಕಾರ್ಡ್ ಬರೆದ ಸುಳ್ಯದ ಬಾಲಕ!
B.A B.COM, BCA ಕೋರ್ಸ್ ಇರುವ ಈ ಕಾಲೇಜಿನಲ್ಲಿ ಪ್ರಸ್ತುತ ಇರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ 36. ಸರಕಾರ ಪ್ರಶಾಂತ ವಾತಾವರಣದಲ್ಲಿ ಕಾಲೇಜನ್ನು ಆರಂಭಿಸಿದ್ದರೂ, ಕಾಲೇಜಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಈವರೆಗೂ ಕಲ್ಪಿಸದ ಪರಿಣಾಮ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನಲಾಗಿದೆ. ಈ ಕೊರತೆಗಳ ನಡುವೆ ಈ ಬಾರಿ ಕಾಲೇಜಿಗೆ ಸೇರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಉಚಿತ ಮಧ್ಯಾಹ್ನದ ಊಟ ಸೇರಿದಂತೆ ಹಲವು ರೀತಿಯ ವ್ಯವಸ್ಥೆಗಳನ್ನು ಕಾಲೇಜು ವತಿಯಿಂದ ಮಾಡಲಾಗಿದೆ.
ಪ್ರತಿ ವಿದ್ಯಾರ್ಥಿಗೆ ಅಂದಾಜು 5 ಸಾವಿರ ರೂಪಾಯಿಗಳಷ್ಟು ಶುಲ್ಕ ಕಟ್ಟಬೇಕಾಗಿದ್ದು, ಈ ಎಲ್ಲಾ ಶುಲ್ಕವನ್ನು ಮನ್ನಾ ಮಾಡಿ ಉಚಿತವಾಗಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರ್ಪಡೆಗೊಳಿಸಲಾಗುತ್ತೆ. ಈ ಕಾರಣಕ್ಕಾಗಿ ಈ ಶುಲ್ಕದ ಖರ್ಚನ್ನು ಭರಿಸುವಂತೆ ದಾನಿಗಳ,ಸಂಘ-ಸಂಸ್ಥೆಗಳ ನೆರವನ್ನೂ ಕೋರಲಾಗಿದ್ದು, ಪೂರಕ ಸ್ಪಂದನೆಯೂ ದೊರೆತಿದೆ. ಈ ಕಾಲೇಜಿಗೆ ಸಂಪರ್ಕ ಕಲ್ಪಿಸಲು ಕೇವಲ ಒಂದು ಸರಕಾರಿ ಬಸ್ ನ ವ್ಯವಸ್ಥೆ ಮಾತ್ರವಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಚರ್ಚಿಸಿ ಹೆಚ್ಚಿನ ಬಸ್ ಸಂಪರ್ಕವನ್ನೂ ಕಲ್ಪಿಸುವ ನಿಟ್ಡಿನಲ್ಲಿ ಕಾಲೇಜು ಆಡಳಿತ ಶ್ರಮಿಸುತ್ತಿದೆ.
ಸರಕಾರಿ ವ್ಯವಸ್ಥೆಯಲ್ಲಿರುವವರಿಗೆ ತಿಂಗಳಿಗೆ ಸಂಬಳ ಬಂದರೆ ಸಾಕು. ವಿದ್ಯಾರ್ಥಿಗಳು ಬರಲಿ, ಬರದಿರಲಿ ಅದರ ಉಸಾಬರಿ ತಮಗೇಕೆ ಎನ್ನುವ ಜನರೇ ಹೆಚ್ಚಿರುತ್ತಾರೆ. ಆದರೆ ಈ ಕಾಲೇಜು ಮಾತ್ರ ಈ ರೀತಿಯ ಯೋಚನೆಯಿಂದ ಹೊರಬಂದು ವಿದ್ಯಾರ್ಥಿಗಳ, ಕಾಲೇಜಿನ ಭವಿಷ್ಯದ ಬಗ್ಗೆ ಶ್ರಮವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರವೇ ಆಗಿದೆ.
Dakshina Kannada,Karnataka
April 05, 2025 12:20 PM IST