Last Updated:
ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಪ್ರವಾಸದ ವೇಳೆ 1996ರ ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಸದಸ್ಯರನ್ನು ಭೇಟಿಯಾಗಿ, ಸನತ್ ಜಯಸೂರ್ಯ ಜಾಫ್ನಾದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಹಾಯ ಕೇಳಿದರು.
ಕೊಲಂಬೊ: ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ರೀಲಂಕಾ (Sri Lanka) ಪ್ರವಾಸ ಕೈಗೊಂಡಿದ್ದರು. ಈ ವೇಳೆ 1996ರ ವಿಶ್ವಕಪ್ (1996 World Cup) ಗೆದ್ದ ಶ್ರೀಲಂಕಾ ತಂಡದ ಸದಸ್ಯರಾದ ಜಯಸೂರ್ಯ (Jayasurya), ಚಮಿಂಡ ವಾಸ್, ಅರವಿಂದ ಡಿ ಸಿಲ್ವಾ, ಮಾರ್ವನ್ ಅಟಪಟ್ಟು, ರವೀಂದ್ರ ಪುಷ್ಪಕುಮಾರ, ಉಪುಲ್ ಚಂದನ, ಕುಮಾರ ಧರ್ಮಸೇನ ಮತ್ತು ರೊಮೇಶ್ ಕಲುವಿತರಣ ಅವರನ್ನ ಭೇಟಿಯಾಗಿ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಲಂಕಾ ಹಾಲಿ ಕೋಚ್ ಆಗಿರುವ ಕ್ರಿಕೆಟ್ ದಂತಕತೆ ಸನತ್ ಜಯಸೂರ್ಯ ನರೇಂದ್ರ ಮೋದಿ ಅವರ ಬಳಿ ಜಾಫ್ನಾದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸಲು ಭಾರತದ ಸಹಾಯ ಬೇಕೆಂದು ಸಹಾಯ ಕೇಳಿದ್ದಾರೆ.
ಜಾಫ್ನಾದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಮನವಿ
ಸಭೆಯಲ್ಲಿ ಮಾತನಾಡಿದ ಜಯಸೂರ್ಯ ,” ಶ್ರೀಲಂಕಾದಲ್ಲಿ ಸಾಕಷ್ಟು ಸಮಸ್ಯೆಗಳಿದ್ದಾಗ, ಭಿಕ್ಕಟ್ಟಿದ್ದಾಗ ನೀವು ಮತ್ತು ಭಾರತ ಸರ್ಕಾರ ನಮಗೆ ದೊಡ್ಡ ಸಹಾಯ ಮಾಡಿದ್ದೀರಿ. ಇದಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿದ್ದೇವೆ. ಶ್ರೀಲಂಕಾ ಕ್ರಿಕೆಟ್ ತಂಡದ ದೇಶದಾದ್ಯಂತ ಆಡುತ್ತಿದೆ, ಆದರೆ ಜಾಫ್ನಾದಲ್ಲಿ ಆಡಲಾಗುತ್ತಿಲ್ಲ. ಭಾರತ ಜಾಫ್ನಾದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸಲು ಸಹಾಯ ಮಾಡಿದರೆ, ಉತ್ತರ ಮತ್ತು ಪೂರ್ವ ಭಾಗದ ಜನರಿಗೆ ಇದು ದೊಡ್ಡ ಉಪಕಾರವಾಗುತ್ತದೆ. ಇದು ನನ್ನ ಸಣ್ಣ ಮನವಿ ” ಎಂದು ಮೋದಿಯವರಲ್ಲಿ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ನಲ್ಲಿ ನನಗೆ ಈಗ ಸಿಕ್ಕಿರುವ ಯಶಸ್ಸಿಗೆ ಅವರೇ ಕಾರಣ! ರಾಹುಲ್ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ?
ಸಾಧ್ಯವಾದಷ್ಟು ನೆರವಿಗೆ ಭರವಸೆ
ಜಯಸೂರ್ಯರ ಮನವಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಮೋದಿ,”ಭಾರತವು ಯಾವಾಗಲೂ ‘ನೆರೆಹೊರೆ ರಾಷ್ಟ್ರಗಳ ಪರ ಮೊದಲು ಎಂಬ ನೀತಿಯಲ್ಲಿ ನಂಬಿಕೆ ಇಟ್ಟಿದೆ. ನಮ್ಮ ನೆರೆಯ ರಾಷ್ಟ್ರಗಳ ಸಂಕಷ್ಟಗಳಿಗೆ ಪ್ರತಿಕ್ರಿಯಿಸಲು ನಾವು ಯಾವಾಗಲೂ ಬಯಸುತ್ತೇವೆ. ಇತ್ತೀಚೆಗೆ ಮಯನ್ಮಾರ್ನಲ್ಲಿ ಉಂಟಾದ ಭೂಕಂಪದ ಸಂದರ್ಭದಲ್ಲಿ ನಾವೇ ಮೊದಲ ನೆರವಿನ ಹಸ್ತ ಚಾಚಿದ್ದೆವು. ಶ್ರೀಲಂಕಾದ ಸಂಕಷ್ಟದ ಸಮಯದಲ್ಲಿ, ಆ ದೇಶವು ಅದರಿಂದ ಹೊರಬರಬೇಕೆಂದು ನಾವು ಬಯಸಿದೆವು ಮತ್ತು ಅದಕ್ಕಾಗಿ ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ನೀವು (ಸನತ್ ಜಯಸೂರ್ಯ) ಜಾಫ್ನಾದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ನಡೆಯಬೇಕೆಂದು ಹೇಳಿದ್ದೀರಿ, ಇದು ತುಂಬಾ ಪ್ರಬಲ ಆಲೋಚನೆಯಾಗಿದೆ ಮತ್ತು ನನ್ನ ತಂಡವು ಇದಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಲು ಪ್ರಯತ್ನಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ತಿಳಿಸಿದರು.
ಎರಡು ದಿನಗಳ ಭೇಟಿ
ಪ್ರಧಾನಮಂತ್ರಿ ಮೋದಿ, ಎರಡು ದಿನಗಳ ಶ್ರೀಲಂಕಾ ಭೇಟಿಯಲ್ಲಿದ್ದು, 1996ರ ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಸದಸ್ಯರೊಂದಿಗೆ ಸಂವಾದ ನಡೆಸಿದರು. “1996ರಲ್ಲಿ ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಸದಸ್ಯರೊಂದಿಗೆ ಭೇಟಿಯಾಗಿದ್ದು ಖುಷಿಯಾಯಿತು. ಈ ತಂಡ ಕ್ರೀಡಾಪ್ರಿಯರ ಗಮನ ಸೆಳೆದಿತ್ತು!” ಎಂದು ಮೋದಿ ‘X’ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಂಡದ ಸದಸ್ಯರು ಮೋದಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಇದನ್ನೂ ಓದಿ: ಆ ಯುವ ವೇಗಿ ಔಟ್, ಕನ್ನಡಿಗನಿಗೆ ಕೊನೆ ಚಾನ್ಸ್! ಮುಂಬೈ ವಿರುದ್ಧದ ಪಂದ್ಯಕ್ಕೆ RCB ಪ್ಲೇಯಿಂಗ್ 11 ಹೀಗಿದೆ
1996ರ ವಿಶ್ವಕಪ್ ಗೆಲುವು ಶ್ರೀಲಂಕಾ ಕ್ರಿಕೆಟ್ಗೆ ದೊಡ್ಡ ತಿರುವು ನೀಡಿತ್ತು, ಇದನ್ನು ಮೋದಿ ಉಲ್ಲೇಖಿಸಿ, 1983ರ ಭಾರತದ ವಿಶ್ವಕಪ್ ಗೆಲುವಿನಂತೆ ಇದು ಜಾಗತಿಕ ಕ್ರಿಕೆಟ್ನಲ್ಲಿ ನಿಮ್ಮ ಗೆಲುವು ಕೂಡ ಪರಿವರ್ತನೆ ತಂದಿತು ಎಂದರು. ಜಾಫ್ನಾದಲ್ಲಿ ಕ್ರೀಡಾಂಗಣ ನಿರ್ಮಾಣವು ಸ್ಥಳೀಯರಿಗೆ ಕ್ರೀಡಾ ಅವಕಾಶಗಳನ್ನು ಹೆಚ್ಚಿಸುವ ಜೊತೆಗೆ ಪ್ರದೇಶದ ಅಭಿವೃದ್ಧಿಗೂ ನೆರವಾಗಲಿದೆ ಎಂಬುದು ಜಯಸೂರ್ಯರ ಆಶಯವಾಗಿದೆ. ಈ ಮನವಿಯು ಭಾರತ-ಶ್ರೀಲಂಕಾ ಸಹಕಾರದ ಮತ್ತೊಂದು ಅಧ್ಯಾಯವಾಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.
April 06, 2025 7:21 PM IST
Narendra Modi: ಶ್ರೀಲಂಕಾದ ಆರ್ಥಿಕ ಭಿಕ್ಕಟ್ಟಿನಲ್ಲಿ ಮೊದಲು ನೆರವು ನೀಡಿದವರು ನೀವು, ಇದೊಂದು ಉಪಕಾರ ಮಾಡಿಕೊಡಿ! ಮೋದಿ ಮುಂದೆ ಜಯಸೂರ್ಯ ವಿಶೇಷ ಮನವಿ