ಕಾದ ಕಬ್ಬಿಣದಂತಿದ್ದ ಭೂಮಿಗೆ ಮಳೆಯ ಸಿಂಚನ ಪರಿಸರದಲ್ಲಿ ಆಹ್ಲಾದಕರ ವಾತಾವರಣ ನಿರ್ಮಾಣ ಆಗುವಂತೆ ಮಾಡಿದೆ. ಮಂಗಳೂರು, ಸುರತ್ಕಲ್ ಸೇರಿದಂತೆ ನಗರ ಭಾಗದಲ್ಲಿ ತುಂತುರು ಮಳೆಯಾಗಿದೆ.
ದಕ್ಷಿಣ ಕನ್ನಡ: ರಣಬಿಸಿಲಿಗೆ ಕಾದು ಕೆಂಡವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(Dakshina Kannada District) ಮಳೆರಾಯ ಕೃಪೆ ತೋರಿದ್ದಾನೆ. ಬುಧವಾರ ಸಂಜೆಯಾಗುತ್ತಿದ್ದಂತೆ ಜಿಲ್ಲೆಯ ಹಲವೆಡೆ ದಟ್ಟವಾದ ಮೋಡ ಕವಿದ ವಾತಾವರಣ ನಿರ್ಮಾಣ ಆಗಿದ್ದು, ಕೆಲ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ(Heavy Rains). ಮೊದಲ ಮಳೆಗೆ ಕರಾವಳಿ ಜನ ಖುಷಿಪಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲು(Summer) ಜನರನ್ನು ಕೆಂಗೆಡಿಸಿತ್ತು.
ಬೆಳಗ್ಗೆ 11 ಗಂಟೆ ನಂತರ ಯಾರೂ ಹೊರಗಡೆ ಬಾರದ ಪರಿಸ್ಥಿತಿ ನಿರ್ಮಾಣ ಆಗಿತ್ತು.. ಬೆಂಕಿ ಉಗುಳುವ ಬಿಸಿಲು ಜನರನ್ನು ಬೆಂಕಿಯ ಬಾಗಿಲಲ್ಲಿ ಕೂರಿಸಿದ ಅನುಭವವನ್ನು ನೀಡಿತ್ತು. ಆದರೆ ಇದೀಗ ಮಳೆ ಜನರಿಗೆ ಖುಷಿ ತಂದ್ರೆ ನೀರಿಲ್ಲದ ಗಿಡಗಳಿಗೆ ಜೀವ ನೀಡಿದೆ.
ಹವಾಮಾನ ಇಲಾಖೆ ಕೊಟ್ಟಿರುವ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಣ ಅಲಂಕಾರು, ಚಾರ್ವಾಕ ಸೇರಿದಂತೆ ಹಲವು ಭಾಗದಲ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ, ಸೋಮಂತಡ್ಕ, ಮಂಡಾಜೆ, ಚಾರ್ಮಾಡಿ, ಗುರುವಾಯನಕೆರೆ ಸೇರಿದಂತೆ ಹಲವು ಭಾಗದಲ್ಲಿ ಭಾರಿ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದೆ.
ಕಾದ ಕಬ್ಬಿಣದಂತಿದ್ದ ಭೂಮಿಗೆ ಮಳೆಯ ಸಿಂಚನ ಪರಿಸರದಲ್ಲಿ ಆಹ್ಲಾದಕರ ವಾತಾವರಣ ನಿರ್ಮಾಣ ಆಗುವಂತೆ ಮಾಡಿದೆ. ಮಂಗಳೂರು, ಸುರತ್ಕಲ್ ಸೇರಿದಂತೆ ನಗರ ಭಾಗದಲ್ಲಿ ತುಂತುರು ಮಳೆಯಾಗಿದೆ. ಈ ಮಳೆ ಮುಂದಿನ ಹದಿನೈದರವರೆಗೆ ಮುಂದುವರೆಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಾರ್ಚ್ ತಿಂಗಳ ಈ ಮಳೆ ಹೂ ಬಿಡಲು ಸಿದ್ಧವಾಗಿದ್ದ ಗೇರು ಬೆಳೆಗೆ ಸಂಕಷ್ಟ ತಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ರೈತರ ವಾಣಿಜ್ಯ ಬೆಳೆ ಅಡಿಕೆಗೂ ಕೂಡ ಭಯವನ್ನು ಉಂಟುಮಾಡಿದೆ. ಕೊಯ್ಲಿನ ಅಡಿಕೆಯನ್ನು ಅಂಗಳದಲ್ಲಿ ಒಣಗಲು ಹಾಕಿರುವ ಕೃಷಿಕರಿಗೆ ದಿಢೀರ್ ಅಂತ ಸುರಿದ ಮಳೆ ನಷ್ಟ ತಂದಿದೆ. ಆದರೆ ಬಿಸಿಲಿನ ತಾಪಕ್ಕೆ ಬೆಂದು ಹೋಗಿದ್ದ ಜನರಿಗೆ ಮಳೆ ಖುಷಿಯನ್ನ ಕೊಟ್ಟಿದೆ.