Dakshina Kannada: ಮಳೆಗಾಲದಲ್ಲಿ ನರಕವಾಗುತ್ತೆ ಅದ್ಯಪಾಡಿ- ಇಲ್ಲಿನ ಜನರ ಗೋಳು ಕೇಳೋರಿಲ್ಲ! | Dakshina Kannada: Adhyapadi becomes hell during the rainy season

Dakshina Kannada: ಮಳೆಗಾಲದಲ್ಲಿ ನರಕವಾಗುತ್ತೆ ಅದ್ಯಪಾಡಿ- ಇಲ್ಲಿನ ಜನರ ಗೋಳು ಕೇಳೋರಿಲ್ಲ! | Dakshina Kannada: Adhyapadi becomes hell during the rainy season

Last Updated:

ಮಂಗಳೂರು ವಿಮಾನ ನಿಲ್ದಾಣದ ಕೆಳಭಾಗದ ಅದ್ಯಪಾಡಿ ಊರು 13 ವರ್ಷಗಳಿಂದ ನೆರೆ ಸಮಸ್ಯೆಯಿಂದ ನರಕವಾಗಿದೆ. ಮರವೂರು ಕಿಂಡಿ ಅಣೆಕಟ್ಟಿನ ಅವೈಜ್ಞಾನಿಕ ನಿರ್ಮಾಣವೇ ಕಾರಣ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಅದು ಮಂಗಳೂರು ವಿಮಾನ ನಿಲ್ದಾಣ(Mangaluru Airport) ಕೆಳಭಾಗದ ಸುಂದರ ಊರು. ಊರಿನ ಮುಂದೆ ಕಾಣುವ ಬೆಟ್ಟ, ಊರ ಹಿಂದೆ ಹರಿಯುವ ಫಲ್ಗುಣಿ ನದಿ ಇಡೀ ಊರನ್ನು ಸಮೃದ್ಧವನ್ನಾಗಿ ಮಾಡಿತ್ತು. ಆದರೆ ಕಳೆದ 13 ವರ್ಷಗಳಿಂದ ಊರು(Village) ನರಕವಾಗಿದೆ. ಮಳೆಗಾಲ ಬಂತೆದ್ರೆ ಸಾಕು ಇಡೀ ಊರಿಗೇ ಊರೇ ಖಾಲಿಯಾಗುತ್ತಿದೆ. ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಈ ಊರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೆಳಭಾಗದಲ್ಲಿರುವ ಅದ್ಯಪಾಡಿ(Adyapadi). ಬೇಸಿಗೆಯಲ್ಲಿ ಸ್ವರ್ಗವಾಗಿರುವ ಅದ್ಯಪಾಡಿ ಮಳೆಗಾಲದಲ್ಲಿ(Rainy Season) ಮಾತ್ರ ನರಕವಾಗುತ್ತದೆ. ಇಡೀ ಊರಿಗೇ ಊರೇ ನೀರಿನಿಂದ ಮುಳುಗುತ್ತದೆ. ಮೂರು ತಿಂಗಳು ನೀರಿನಲ್ಲಿ ಕೊಳೆಯುತ್ತದೆ. ಇದಕ್ಕೆಲ್ಲಾ ಕಾರಣ ಮರವೂರಿನಲ್ಲಿ ಕಟ್ಟಿರುವ ಕಿಂಡಿ ಅಣೆಕಟ್ಟು.

ಸಂಪೂರ್ಣ ಅವೈಜ್ಞಾನಿಕವಾಗಿರುವ ಮರವೂರು ಕಿಂಡಿ ಅಣೆಕಟ್ಟಿನಲ್ಲಿ ಕಿಂಡಿ ಹೆಚ್ಚಾಗಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ಅದ್ಯಪಾಡಿಯ ಕುದ್ರು, ಮೊಗರು ಭಾಗಗಳಿಗೆ ನೀರು ನುಗ್ಗಿ ಈ ಗ್ರಾಮ ನಡುಗಡ್ಡೆಯಂತಾಗುತ್ತದೆ. ಕಿಂಡಿ ಅಣೆಕಟ್ಟಿನ ಕಿಂಡಿ ದೊಡ್ಡದಾಗಿ ಮಾಡಿ ಎರಡೂ ಕಡೆಗಳಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಸಿದ್ರೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಸತತ 13 ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿರುವ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಈ‌ ಸಮಸ್ಯೆಯಿಂದ ಮುಕ್ತಿಗಾಗಿ ಸುತ್ತದ ಕಚೇರಿಗಳಿಲ್ಲ. ಬರೆದ ಮನವಿ ಪತ್ರಗಳಿಗೆ ಲೆಕ್ಕವಿಲ್ಲ. ಆದರೆ ಸಮಸ್ಯೆ ನಿವಾರಣೆ ಮಾಡಲು ಅಧಿಕಾರಿಗಳಿಗೆ ಮನಸಿಲ್ಲ. ಇತ್ತ ಜೀವನವನ್ನೇ ಕಳೆದುಕೊಂಡಿರುವ ನಿವಾಸಿಗಳು ಈ ಬಾರಿ ಮತ್ತೆ ನೆರೆ ಪರಿಸ್ಥಿತಿಯಾದ್ರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಪ್ರತೀ ಮಳೆಗಾಲದಲ್ಲಿ ಜೀವನಾಧಾರವಾದ ಕೃಷಿ ನಾಶವಾಗುತ್ತಿದೆ. ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಬೇರೆ ಕಡೆ ಹೋಗಿ‌ ಜೀವನ ಮಾಡೋಕೆ ಸಾಧ್ಯ ಇಲ್ಲ. 13 ವರ್ಷಗಳಿಂದ ಕಚೇರಿಗಳಿಗೆ ಸುತ್ತಿ ಸುತ್ತಿ ಸಾಕಾಯ್ತು. ಇನ್ನು ಕಚೇರಿ ಸುತ್ತಲ್ಲ. ನಾವು ಸತ್ರೆ ಸಮಸ್ಯೆ ಪರಿಹಾರ ಆಗೋದಾದ್ರೆ ಪ್ರಾಣ ತ್ಯಾಗ ಮಾಡೋಕೆ ಸಿದ್ಧ ಅಂತಾ ಎಚ್ಚರಿಕೆ ನೀಡಿದ್ದಾರೆ. ಕಳೆದ ಮಳೆಗಾಲದ ಸಂಧರ್ಭದಲ್ಲಿ ನೆರೆ ಬಾಧಿತ ಅದ್ಯಪಾಡಿ ಭಾಗಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದರು.

ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದ ಗುಂಡೂರಾವ್ ಮುಂದಿನ ಬಾರಿ ಈ ಸಮಸ್ಯೆ ಇರಕೂಡದು ಅಂತಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೆ ಸಚಿವ ಸೂಚನೆ ‌ನೀಡಿ ವರ್ಷ ಉರುಳಿದರೂ ಎಳ್ಳಷ್ಟೂ ಕಾರ್ಯ ನಡೆದಿಲ್ಲ. ಅಧಿಕಾರಿಗಳೂ ಜಾಣ ಮೌನವನ್ನು ವಹಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರ ನೆರೆ ಬಂದಾಗ ಪರಿಹಾರ ಕೊಡೋ ಬದಲು ನೆರೆ ಬಾರದ ರೀತಿ ಶಾಶ್ವತ ಕಾರ್ಯ ಮಾಡಬೇಕಿದೆ. ಅದ್ಯಪಾಡಿ ಜನರ ಸಂಕಷ್ಟವನ್ನು ಸರ್ಕಾರ ಕಣ್ಣುಬಿಟ್ಟು ನೋಡಬೇಕಿದೆ..