Last Updated:
ಕಪಿಲೆಯ ತಟದಲ್ಲಿ ನೆಲೆಯಾದಲ್ಲಿ ನದಿ ನೀರಿನಲ್ಲೇ ಅಭಿಷೇಕ ಮಾಡುವುದಾಗಿ ಹೇಳಿಕೊಂಡಿದ್ದರು. ಹೀಗಿರುವಾಗ ಕಪಿಲೆಯ ತಟದಲ್ಲಿ ಸ್ವಯಂಭೂವಾಗಿ ಶಿಲಾಕಲ್ಲೊಂದು ಉದ್ಭವವಾಗಿತ್ತಂತೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಒಂದೊಂದು ಕ್ಷೇತ್ರದಲ್ಲಿದೆ ಒಂದೊಂದು ಇತಿಹಾಸ. ಇಲ್ಲಿನ ಮಹಿಮಾನ್ವಿತ ಕ್ಷೇತ್ರಗಳ ಕಾರಣಿಕ ಎಲ್ಲಾ ಭಕ್ತರನ್ನು(Devotees) ಸೆಳೆಯುತ್ತದೆ. ಕೆಲವು ಕ್ಷೇತ್ರಗಳು ಹಲವು ಪವಾಡಗಳನ್ನು ಸೃಷ್ಟಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ಈ ಕ್ಷೇತ್ರದಲ್ಲಿ ಮೀನುಗಳೇ(Fishes) ದೇವರು. ತಮ್ಮ ಯಾವುದೇ ಸಂಕಷ್ಟಗಳನ್ನು ಈ ಮೀನುಗಳ ಮುಂದೆ ಹೇಳಿಕೊಂಡರೆ ಅವುಗಳು ಪರಿಹಾರವಾಗುತ್ತೆ ಅನ್ನೋದು ದೃಢವಾದ ನಂಬಿಕೆ ಇಲ್ಲಿನ ಭಕ್ತರದ್ದು. ರಾಜ್ಯದ ಏಕೈಕ ಮತ್ಸ್ಯಕ್ಷೇತ್ರವೆಂದೇ ಹೆಸರುವಾಸಿಯಾಗಿರುವ ಈ ಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಎನ್ನುವ ಪ್ರಕೃತಿಯ ಮಡಿಲಿನ ಗ್ರಾಮದಲ್ಲಿದೆ.
ಶಿಶಿಲೇಶ್ವರ ಕ್ಷೇತ್ರ ಮೀನಿನ ಆರಾಧನೆಗೆ ಹೆಸರುವಾಸಿ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಪರ್ಕಿಸುವ ರಸ್ತೆಯ ಮಧ್ಯೆ ಸಿಗುವಂತಹ ಈ ಕ್ಷೇತ್ರ ತನ್ನ ಪ್ರಕೃತಿ ರಮಣೀಯ ಸೊಬಗಿಗೂ ಖ್ಯಾತಿ ಪಡೆದಿದೆ. ಈ ಕ್ಷೇತ್ರದ ಪ್ರಮುಖ ಆರಾಧನಾಮೂರ್ತಿ ಶಿಶಿಲೇಶ್ವರನಾಗಿದ್ದು, ಕಪಿಲಾ ನದಿ ದಡದಲ್ಲಿರುವ ಈ ಕ್ಷೇತ್ರ ಕಪಿಲಾ ನದಿಯ ತುಂಬಾ ಓಡಾಡುವ ಮೀನುಗಳಿಂದಾಗಿ ಭಕ್ತರ ಗಮನಸೆಳೆಯುತ್ತದೆ. ಪೆರೋಲ್ ಎನ್ನುವ ಜಾತಿಗೆ ಸೇರಿದ ಈ ಮೀನುಗಳನ್ನು ಮಹಾಶಿರ್ ಎಂದೂ ಕರೆಯುತ್ತಾರೆ. ಕ್ಷೇತ್ರದ ಭಕ್ತರು ಮತ್ತು ಸ್ಥಳೀಯ ನಿವಾಸಿಗಳು ಈ ಮೀನುಗಳು ದೇವರ ಮೀನು ಎಂದೇ ಕರೆಯುತ್ತಾರೆ.
ಇದನ್ನೂ ಓದಿ: Mysuru: ಈ ಜಿಲ್ಲೆಯಿಂದ ಮೈಸೂರಿಗೆ ತಡೆರಹಿತ ಬಸ್ಗಳ ಹೆಚ್ಚಳ- ಪ್ರಯಾಣಿಕರು ಫುಲ್ ಖುಷ್
ಶಿಶಿಲ ಶಿಶಿಲೇಶ್ವರ ದೇವಸ್ಥಾನ ಮತ್ಸ್ಯ ಕ್ಷೇತ್ರವಾಗೋಕೂ ಒಂದು ಪೌರಾಣಿಕ ಕಥೆ ಇದೆ.ಈ ಕ್ಷೇತ್ರದ ಪಕ್ಕದಲ್ಲೇ ಇರುವ ಕುಮಾರಗಿರಿಯಲ್ಲಿದ್ದ ಲಿಂಗಕ್ಕೆ ವಿಪ್ರರೊಬ್ಬರು ಪ್ರತಿದಿನವೂ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಹಿಂದಿರುಗುತ್ತಿದ್ದರು. ಹೀಗೆ ಹೋಗುತ್ತಿದ್ದ ಸಂದರ್ಭಗಳಲ್ಲಿ ವಿಪ್ರರು ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ವಿಪ್ರರು ದೇವರಲ್ಲಿ ಕಪಿಲಾ ನದಿಯ ತಟದಲ್ಲಿ ನೆಲೆ ನಿಲ್ಲುವಂತೆ ಪ್ರಾರ್ಥಿಸಿದ್ದರು.
ಕಪಿಲೆಯ ತಟದಲ್ಲಿ ನೆಲೆಯಾದಲ್ಲಿ ನದಿ ನೀರಿನಲ್ಲೇ ಅಭಿಷೇಕ ಮಾಡುವುದಾಗಿ ಹೇಳಿಕೊಂಡಿದ್ದರು. ಹೀಗಿರುವಾಗ ಕಪಿಲೆಯ ತಟದಲ್ಲಿ ಸ್ವಯಂಭೂವಾಗಿ ಶಿಲಾಕಲ್ಲೊಂದು ಉದ್ಭವವಾಗಿತ್ತಂತೆ. ಆ ಶಿಲೆಯಲ್ಲಿ ಆದಿವಾಸಿಗಳು ಕಾಡಿನಲ್ಲಿ ಸಿಗುವ ನರೆಯಾ ಎನ್ನುವ ಗೆಣಸನ್ನು ಅಗೆಯುವ ಸಮಯದಲ್ಲಿ ಶಿಲಾಕಲ್ಲಿಗೆ ಏಟಾಗಿ ರಕ್ತ ಸೋರಲು ಆರಂಭವಾಗುತ್ತದೆ. ಊರ ಜನರೆಲ್ಲಾ ಸೇರಿ ಶಿಲಾಕಲ್ಲಿನ ಮುಂದೆ ಇಲ್ಲಿ ಶಿಶಿಲೇಶ್ವರ ನೆಲೆಗೊಳ್ಳಬೇಕು ಎಂದು ಪ್ರಾರ್ಥನೆ ಮಾಡಿದಾಗ ರಕ್ತ ಸೋರುವುದು ನಿಂತು ಹೋಯ್ತಂತೆ. ಆ ಬಳಿಕ ಇಲ್ಲಿ ಶಿಲಾಮಯ ದೇವಸ್ಥಾನದ ನಿರ್ಮಾಣಗೊಂಡಿತು ಎನ್ನುವುದು ಕ್ಷೇತ್ರದ ಇತಿಹಾಸವಾಗಿದೆ.
ಇಲ್ಲಿ ದೇವರಿಗೆ ನಡೆಯುವ ಎಲ್ಲಾ ರೀತಿಯ ಅಭಿಷೇಕ ಮತ್ತು ನೈವೇದ್ಯಗಳು ಕಪಿಲೆಯ ನೀರಿನಲ್ಲೇ ನಡೆಯುತ್ತದೆ. ನೀರು ಯಾವಾಗಲೂ ಪರಿಶುದ್ಧವಾಗಿರಬೇಕು ಎನ್ನುವ ಕಾರಣಕ್ಕೆ ಶ್ರೀವಿಷ್ಣು ನದಿಯಲ್ಲಿ ಮತ್ಸ್ಯದ ರೂಪದಲ್ಲಿ ನೆಲೆಗೊಳ್ಳುತ್ತಾನೆ ಎನ್ನುವ ನಂಬಿಕೆಯೂ ಇಲ್ಲಿದೆ. ಮತ್ಸ್ಯಗಳಿಗೆ ಒಂದು ಹಿಡಿ ಅಕ್ಕಿ ಅಥವಾ ಮಂಡಕ್ಕಿ ಹಾಕಿದಲ್ಲಿ ಚರ್ಮರೋಗ ಸೇರಿದಂತೆ ಎಲ್ಲಾ ರೀತಿಯ ರೋಗಗಳು ಶಮನಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
February 24, 2025 12:00 PM IST