Last Updated:
ಮುಂದಿನ ಪೀಳಿಗೆಗೆ ಪುಸ್ತಕದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ಪುಸ್ತಕ ಪ್ರೇಮಿಗಳ ದಿನಾಚರಣೆಯನ್ನು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿತ್ತು.
ದಕ್ಷಿಣ ಕನ್ನಡ: ಫೆಬ್ರವರಿ 14 ಎಲ್ಲೆಡೆ ಪ್ರೇಮಿಗಳ ದಿನಾಚರಣೆ(Valentines Day) ನಡೆಯಿತು. ಯುವ ಜೋಡಿಗಳು ಒಂದೆಡೆ ಕಲೆತು-ಬೆರೆತು ಈ ದಿನವನ್ನು ಪ್ರೇಮದ ದ್ಯೋತಕವಾಗಿ ಸಂಭ್ರಮಿಸಿ ಆಚರಿಸುತ್ತಾರೆ. ಆದರೆ ಮಂಗಳೂರಿನಲ್ಲಿ ಪ್ರೇಮಿಗಳ ದಿನವನ್ನು ವಿಶಿಷ್ಟ ರೀತಿಯಲ್ಲಿ ಪುಸ್ತಕ ಪ್ರೇಮಿಗಳ ದಿನವನ್ನಾಗಿ(Book Lovers Day) ಆಚರಿಸಲಾಗಿದೆ. ಹೌದು… ಪುಸ್ತಕ ಓದುವ ಹವ್ಯಾಸ ವೃದ್ಧಿಸಬೇಕು, ಮುಂದಿನ ಪೀಳಿಗೆಗೆ ಪುಸ್ತಕದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ಪುಸ್ತಕ ಪ್ರೇಮಿಗಳ ದಿನಾಚರಣೆಯನ್ನು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಅರ್ಧಗಂಟೆಗೆ ಒಂದರಂತೆ 10 ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಡಾ.ವಿಶ್ವನಾಥ ಬದಿಕಾನರ ‘ಕನ್ನಡ ಜಾನಪದ ಅಧ್ಯಯನದ ಮೊದಲ ಘಟ್ಟ’, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೃಷ್ಟಿ ಸಿರಿಯಲಿ ಪುಷ್ಪವೃಷ್ಟಿ’, ಕಾತ್ಯಾಯಿನಿ ಕುಂಜಿಬೆಟ್ಟುರವರ ‘ಕಾತೀಶ್ವರ ವಚನಗಳು’, ಪ್ರೊ.ಅಕ್ಷಯ ಆರ್.ಶೆಟ್ಟಿಯವರ ‘ಅವಳೆಂದರೆ ಬರಿ ಹೆಣ್ಣೆ’ ಪ್ರಕಾಶ್ ವಿ.ಎನ್.ರವರ ‘ನಮ್ಮವನು ಶ್ರೀರಾಮಚಂದ್ರ’, ಅಕ್ಷತಾರಾಜ್ ಪೆರ್ಲರ ‘ನೆಲ ಉರುಳು’, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟುರವರ ‘ನೆಪವು ಸಿಕ್ಕಿದೆ ಬದುಕಿಗೆ’, ಕರುಣಾಕರ ಬಳ್ಳೂರು ಅವರ ‘ಬೆಳಕು’, ಡಾ.ಎಸ್.ಎಂ.ಶಿವಪ್ರಕಾಶ್ ಅವರ ‘ಟೆಕ್ನಾಲಜಿ ವರ್ಸಸ್ ಎಕಾಲಜಿ’, ರಘು ಇಡ್ಕಿದುರವರ ‘ಪೊನ್ನಂದಣ’ ಕೃತಿಗಳು ಲೋಕಾರ್ಪಣೆಗೊಂಡವು.
ಇದನ್ನೂ ಓದಿ: Weekend Trip Plan: ವೀಕೆಂಡ್ ಪ್ರವಾಸಿಗರ ಫೇವರಿಟ್ ಸ್ಪಾಟ್ ಈ ಅಯ್ಯನ ಕೆರೆ!
ಕಾರ್ಯಕ್ರಮವನ್ನು ಸಂಸದ ಬ್ರಿಜೇಶ್ ಚೌಟ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ, ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಚಹಾದಂಗಡಿಯಲ್ಲಿ ಪುಸ್ತಕ ಪ್ರೇಮ ಬೆಳೆಸುತ್ತಿರುವ ಸುರೇಂದ್ರ ಕೋಟ್ಯಾನ್ ಹಾಗೂ ಚಿತ್ರ ಕಲಾವಿದ ಜಾನ್ ಚಂದ್ರನ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಮುಕ್ತ ವಿಭಾಗದಲ್ಲಿ ‘ಪುಸ್ತಕ ಪ್ರೇಮ’ ವಿಷಯದಲ್ಲಿ ಚಿತ್ರ ರಚನೆ ಸ್ಪರ್ಧೆ ನಡೆಯಿತು. ಒಟ್ಟಿನಲ್ಲಿ ದಿನವಿಡೀ ಪುಸ್ತಕದ ವಿಚಾರದಲ್ಲಿಯೇ ನಡೆದ ಈ ಕಾರ್ಯಕ್ರಮ ಪುಸ್ತಕ ಪ್ರೇಮಿಗಳಿಗೆ ಹಬ್ಬವಾಯಿತು.
Dakshina Kannada,Karnataka
February 18, 2025 3:42 PM IST