Dakshina Kannada: ಕಲ್ಲೇಗದ ಕಲ್ಕುಡ-ಕಲ್ಲುರ್ಟಿ ದೈವಗಳ ವೈಭವದ ನೇಮೋತ್ಸವ! | Dakshina Kannada Interesting story of Tulunada Karanika Daiva

Dakshina Kannada: ಕಲ್ಲೇಗದ ಕಲ್ಕುಡ-ಕಲ್ಲುರ್ಟಿ ದೈವಗಳ ವೈಭವದ ನೇಮೋತ್ಸವ! | Dakshina Kannada Interesting story of Tulunada Karanika Daiva

Last Updated:

ತನಗಾದ ಅನ್ಯಾಯವನ್ನು ತಂಗಿ ಬಳಿ ಅರುಹಿದ ವೀರ ಕಲ್ಕುಡ, ದೈವಾಂಶ ಸಂಭೂತರಾದ ನಾವು ಇನ್ನು ಈ ಭೂಮಿಯಲ್ಲಿ ಇರುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದು ಮಾಯವಾಗಿ ಇಬ್ಬರೂ ದೈವತ್ವವನ್ನು ಪಡೆಯುತ್ತಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಇಲ್ಲಿನ ಪ್ರತಿ ಕುಟುಂಬವೂ(Family) ಒಂದಲ್ಲ ಒಂದು ದೈವವನ್ನು ನಂಬಿಕೊಂಡು ಬರುತ್ತಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ(Tradition). 400ಕ್ಕೂ ಹೆಚ್ಚಿನ ವಿವಿಧ ದೈವಗಳ ಆರಾಧನೆಯನ್ನು ತುಳುವರು(Tuluvas) ನಡೆಸಿಕೊಂಡು ಬರುತ್ತಿದ್ದು, ಇವುಗಳಲ್ಲಿ ಅಣ್ಣ-ತಂಗಿಯರಾದ ಕಲ್ಕುಡ-ಕಲ್ಲುರ್ಟಿ ದೈವಗಳೂ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ(Puttur) ಕಲ್ಲೇಗದ ಕಲ್ಕುಡ-ಕಲ್ಲುರ್ಟಿ ಕ್ಷೇತ್ರದಲ್ಲಿ ಪ್ರತೀ ವರ್ಷ ಈ ದೈವಗಳಿಗೆ ಅತ್ಯಂತ ವಿಜೃಂಭಣೆಯಿಂದ ನೇಮೋತ್ಸವ (Nemotsava) ನಡೆಯುತ್ತದೆ. ಅನ್ಯಾಯದ ವಿರುದ್ಧ ಹೋರಾಡಿ ದೈವತ್ವ ಪಡೆದ ಅಣ್ಣ- ತಂಗಿ ದೈವಗಳಾದ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳಿಗೆ ತುಳುನಾಡಿನಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ಮಾರ್ನಾಡುಪಳ್ಳಿ ಬತ್ತಿ ಎಂಬಲ್ಲಿ ಶಂಭು ಕಲ್ಕುಡ ದಂಪತಿಗಳ ಆರನೇ ಸಂತಾನವಾಗಿ ಈ ಇಬ್ಬರು ಮಕ್ಕಳು ಹುಟ್ಟಿದ್ದರು ಎನ್ನುವುದು ದೈವಗಳ ಪಾರ್ದನಗಳಿಂದ ಕಂಡು ಬರುವಂತಹ ವಿಚಾರವಾಗಿದೆ. ಶಂಭು ಕಲ್ಕುಡ ಓರ್ವ ಕಲ್ಲಿನ ಶಿಲ್ಪಿಯಾಗಿದ್ದು, ಶ್ರವಣಬೆಳಗೊಳದ ಚಾವುಂಡರಾಯನಿಂದ ಈತನಿಗೆ ಗೋಮಟೇಶ್ವರನನ್ನು ಕೆತ್ತಲು ಕೋರಿಕೆ ಬರುತ್ತದೆ. ಈ ಕಾರಣಕ್ಕೆ ಈತ ಶ್ರವಣಬೆಳಗೊಳಕ್ಕೆ ಹೋದಾಗ ಆತನ ಪತ್ನಿ ಗರ್ಭವನ್ನು ಧರಿಸಿದ್ದಳು. ಮಕ್ಕಳು ಜನಿಸಿ 16 ವರ್ಷಗಳು ಕಳೆದರೂ ಶಂಭು ಕಲ್ಕುಡ ಮನೆಗೆ ವಾಪಾಸು ಬರದಿರುವುದನ್ನು ಕಂಡು, ಮಗ ವೀರ ಕಲ್ಕುಡ ತನ್ನ ತಂದೆಯನ್ನು ಅರಸಿಕೊಂಡು ಶ್ರವಣಬೆಳಗೊಳಕ್ಕೆ ತೆರಳುತ್ತಾನೆ.

ಅಲ್ಲಿ ತಂದೆ ಶಂಭು ಕಲ್ಕುಡ ಕೆತ್ತಿರುವ ಗೋಮಟೇಶ್ವರನನ್ನು ಕಂಡು ಅದರಲ್ಲಿ ಕೆಲವು ಹುಳುಕುಗಳನ್ನು ಮಗ ವೀರ ಕಲ್ಕುಡ ಪತ್ತೆ ಹಚ್ಚುತ್ತಾನೆ. ಇದರಿಂದ ಬೇಸತ್ತ ತಂದೆ ಗೊಮ್ಮಟನ ಬಾಕಿ ಉಳಿದ ಕೆಲಸವನ್ನು ಮಗನಿಗೆ ವಹಿಸಿ ತನ್ನ ಕೆಲಸದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಾನೆ. ಶ್ರವಣಬೆಳಗೊಳದ ಗೊಮ್ಮಟ ಮೂರ್ತಿಯನ್ನು ಪೂರ್ಣಗೊಳಿಸಿದ ವೀರ ಕಲ್ಕುಡನಿಗೆ ಕಾರ್ಕಳದ ಬೈರವರಸ, ಕಾರ್ಕಳದಲ್ಲೂ ಗೊಮ್ಮಟನನ್ನು ಕೆತ್ತಲು ಆದೇಶಿಸುತ್ತಾನೆ. ವೀರ ಕಲ್ಕುಡನ ಕೈಯಿಂದ ಮೂಡಿ ಬಂದಂತಹ ಗೊಮ್ಮಟನಷ್ಟು ಸುಂದರವಾದ ಶಿಲ್ಪಾಕೃತಿ ಇನ್ನೊಂದು ಇರಬಾರದು ಎನ್ನುವ ದುರುದ್ದೇಶದಿಂದ, ರಾಜನು ವೀರ ಕಲ್ಕುಡನ ಒಂದು ಕೈ ಹಾಗೂ ಒಂದು ಕಾಲನ್ನು ಕತ್ತರಿಸುತ್ತಾನೆ. ಒಂದು ಕೈ ಹಾಗೂ ಕಾಲನ್ನು ಕಳೆದುಕೊಂಡ ವೀರ ಕಲ್ಕುಡ ವೇಣೂರಿಗೆ ಬಂದು ನೆಲೆಸುತ್ತಾನೆ.

ಇದನ್ನೂ ಓದಿ: Shivamogga: ಸಾಗರದ SN ನಗರದಲ್ಲಿ ಮೊದಲ ಬಾರಿಗೆ ನಡೆದ ಕೊರಗಜ್ಜ ಸ್ವಾಮಿಯ ಕೋಲ!

ಇದೇ ಸಂದರ್ಭದಲ್ಲಿ ವೇಣೂರಿನ ಅಜಿಲರಸ ವೇಣೂರಿನಲ್ಲಿ ಗೊಮ್ಮಟನನ್ನು ಕೆತ್ತುವಂತೆ ವೀರ ಕಲ್ಕುಡನಲ್ಲಿ ಕೋರಿಕೊಂಡ ಹಿನ್ನಲೆಯಲ್ಲಿ, ಒಂದು ಕೈಗೆ ಉಳಿಯನ್ನು ಕಟ್ಟಿಕೊಂಡು ಇನ್ನೊಂದು ಕೈಯಲ್ಲಿ ಸುತ್ತಿಗೆಯನ್ನು ಹಿಡಿದುಕೊಂಡು ಗೋಮ್ಮಟೇಶ್ವರನ ಮೂರ್ತಿಯನ್ನು ಕೆತ್ತುತ್ತಾನೆ. ಇದನ್ನರಿತ ಕಾರ್ಕಳದ ಅರಸನಿಗೂ, ವೇಣೂರಿನ ಅರಸನಿಗೆ ಯುದ್ಧ ಕೂಡಾ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಅಣ್ಣ ವೀರ ಕಲ್ಕುಡನನ್ನು ಹುಡುಕಿಕೊಂಡು ತಂಗಿ ಕಾಳಮ್ಮ ವೇಣೂರು ಸೇರುತ್ತಾಳೆ. ತನಗಾದ ಅನ್ಯಾಯವನ್ನು ತಂಗಿ ಬಳಿ ಅರುಹಿದ ವೀರ ಕಲ್ಕುಡ, ದೈವಾಂಶ ಸಂಭೂತರಾದ ನಾವು ಇನ್ನು ಈ ಭೂಮಿಯಲ್ಲಿ ಇರುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದು ಮಾಯವಾಗಿ ಇಬ್ಬರೂ ದೈವತ್ವವನ್ನು ಪಡೆಯುತ್ತಾರೆ.

ಹೀಗೆ ದೈವತ್ವವನ್ನು ಪಡೆದ ಕಲ್ಕುಡ-ಕಲ್ಲುರ್ಟಿ ತನ್ನ ಮಾಯಾಶಕ್ತಿಯಿಂದ ಕಾರ್ಕಳ ಅರಸನ ಅರಮನೆಯನ್ನು ಬೆಂಕಿಯಿಂದ ಸುಡುತ್ತಾರೆ. ಈ ಕೃತ್ಯವನ್ನು ಕಂಡು ಹಿಡಿಯಲು ಕೇರಳದ ಮಾಯಾವಿಗಳನ್ನು ಕರೆಸಿದ ರಾಜನಿಗೆ ಇದು ಈ ಅಣ್ಣ-ತಂಗಿಯರ ಕೋಪ ಎಂದು ತಿಳಿದು ಬರುತ್ತದೆ. ಯಾವುದೇ ಶಕ್ತಿಯಿಂದ ಇವರನ್ನು ನಿಯಂತ್ರಿಸುವುದು ಅಸಾಧ್ಯವೆಂದು ತಿಳಿದಾಗ ಭಕ್ತಿಯಿಂದಲೇ ಇವರನ್ನು ಆರಾಧಿಸಿಕೊಂಡು ಬರಲು ಉಪ್ಪಿನಂಗಡಿಯ ವ್ಯಕ್ತಿಯೊಬ್ಬರು ನಿರ್ಧರಿಸಿ, ಅಲ್ಲಿ ಇಬ್ಬರನ್ನೂ ಪೂಜಿಸುವ ಮೂಲಕ ಕಲ್ಕುಡ-ಕಲ್ಲುರ್ಟಿ ಆರಾಧನೆಯು ಮೊದಲ ಬಾರಿಗೆ ನಡೆಯುತ್ತದೆ.

ಉಪ್ಪಿನಂಗಡಿಯಿಂದ ಈ ಅಣ್ಣ-ತಂಗಿ ಹೊರಟ ಪ್ರದೇಶದಲ್ಲೆಲ್ಲಾ ಈ ದೈವಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದ್ದು, ಕಲ್ಲೇಗದಲ್ಲೂ ಇದೇ ರೀತಿಯಲ್ಲಿ ಕಳೆದ ಹಲವು ವರ್ಷಗಳಿಂದ ಈ ದೈವಗಳ ಆಚರಣೆ ನಡೆಯುತ್ತಿದೆ. ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡಿ ದೈವಗಳ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.